ತುಮಕೂರಿನಲ್ಲಿ ಮುಖ್ಯಮಂತ್ರಿ ಚಂದ್ರು ಮುಖಾಮುಖಿ
ಮುಖ್ಯಮಂತ್ರಿ ಚಂದ್ರು ಎಂದೇ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಇವರ ನಿಜವಾದ ನಾಮಧೇಯ ಚಂದ್ರಶೇಖರ್. ರಂಗಭೂಮಿ, ಕಿರುತೆರೆ ಮಾತ್ರವಲ್ಲದೆ ರಾಜಕೀಯದಲ್ಲೂ ಮಿಂಚಿದ ಮಹಾನ್ ಕಲಾವಿದ. ನೆಲಮಂಗಲ ತಾಲೂಕಿನ ಹೊನ್ನಸಂದ್ರದವರಾದ ಇವರು ಓದಿದ್ದು ಬಿ.ಎಸ್ಸಿ.
'ಮುಖ್ಯಮಂತ್ರಿ' ನಾಟಕದ ಪಾತ್ರದಿಂದ ಇವರ ಹೆಸರಿನ ಜೊತೆಗೆ ಆ ಪದ ಸೇರಿಕೆಯಾಯಿತು. ಚಂದ್ರಶೇಖರ್ ಅವರು ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಾಗ ಆ ವೇಳೆಯಲ್ಲಿ ಮತ್ತೊಬ್ಬ ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ) ಇದ್ದರು. ಹಾಗಾಗಿ ಇವರ ಹೆಸರನ್ನು 'ಮುಖ್ಯಮಂತ್ರಿ ಚಂದ್ರು' ಎಂದು ಖಾಯಂ ಆಯಿತು.
ಇಷ್ಟೆಲ್ಲಾ ಹೇಳಲು ಕಾರಣ ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಈ ಬಾರಿ ಮುಖ್ಯಮಂತ್ರಿ ಚಂದ್ರು ಮುಖಾಮುಖಿಯಾಗಲಿದ್ದಾರೆ. ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಚಂದ್ರುರವರು ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಕಾರ್ಯನಿರ್ವಹಿಸುತ್ತಿದ್ದಾರೆ.
ರಂಗಭೂಮಿಯಿಂದ ಚಲನಚಿತ್ರ ರಂಗಕ್ಕೆ ಕಾಲಿಟ್ಟು ಜನಪ್ರಿಯರಾದ ಮುಖ್ಯಮಂತ್ರಿ ಚಂದ್ರು ಅವರು ಮೂಕಾಭಿನಯದಲ್ಲಿ ನಿಪುಣರು. 'ಹೊಸ ಮೇಡಂ', 'ಫಣಿಯಮ್ಮ' ಚಿತ್ರಗಳಲ್ಲಿ ಕಾಣಿಸಿಕೊಂಡ ಮುಖ್ಯಮಂತ್ರಿ ಚಂದ್ರು ಅವರ ಅಭಿನಯ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿದ ಚಿತ್ರ 'ಮುಯ್ಯಿ'.
ಹೊಸ ಬಗೆಯ ಸಂಭಾಷಣೆ ಶೈಲಿಯಿಂದ ಪ್ರೇಕ್ಷಕರ ಗಮನಸೆಳೆದ ಚಂದ್ರು ಅವರು ಹಾಸ್ಯ ಕಲಾವಿದರಾಗಿ ಖಳ ಪಾತ್ರಧಾರಿಯಾಗಿ ಹೆಸರು ಮಾಡಿದವರು. ಮಾಲಾಶ್ರೀ ಮಾಮಾಶ್ರೀ, ಗುಂಡನ ಮದುವೆ, ಚಕ್ರವ್ಯೂಹ, ಎದುರುಮನೆ ಗಂಡ ಪಕ್ಕದಮನೆ ಹೆಂಡತಿ, ಗಣೇಶನ ಮದುವೆ, ಗೌರಿ ಗಣೇಶ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಬಾರಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯುವ ದಿನಾಂಕ ಹಾಗೂ ಸ್ಥಳ: ಶನಿವಾರ (ಮೇ 26, 2012) ಸಂಜೆ 4.30ಗಂಟೆಗೆ ಸರಿಯಾಗಿ ಗುಬ್ಬಿ ವೀರಣ್ಣ ರಂಗಮಂದಿರ, ತುಮಕೂರು. (ಒನ್ಇಂಡಿಯಾ ಕನ್ನಡ)


Click it and Unblock the Notifications











