ಸಪ್ತಮಿ ಗೌಡ ಅಲ್ಲ, 'ಎಕ್ಕ' ಯುವಗೆ ಜೊತೆಯಾದ ನಾಯಕಿ ಯಾರು? ಆಕೆಯ ಹಿನ್ನೆಲೆ ಏನು?
ಯುವ ರಾಜ್ಕುಮಾರ್ ನಟನೆಯ 3ನೇ ಸಿನಿಮಾ ಶುರುವಾಗಿದೆ. ಬಂಡಿಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಲಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಲಿದೆ.
ದೀಪಾವಳಿ ರಾಜ್ಯೋತ್ಸವ ಸಂಭ್ರಮದಲ್ಲಿ 'ಎಕ್ಕ' ಸಿನಿಮಾ ಘೋಷಣೆ ಆಗಿತ್ತು. ಶಿವಾಜಿ ನಗರದಲ್ಲಿ ಫೋಟೊಶೂಟ್, ಟೀಸರ್ ಚಿತ್ರೀಕರಣ ಕೂಡ ನಡೆದಿತ್ತು. ರಕ್ತಾಭಿಷೇಕ ಮಾಡಿಕೊಂಡು ಯುವ ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಸಿನಿಮಾ ಮುಹೂರ್ತ ನೆರೆವೇರಿದೆ. ಚಿತ್ರಕ್ಕೆ ನಾಯಕಿ ಆಯ್ಕೆ ಆಗಿದೆ.

'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ಯುವ ಹಾಗೂ ಸಪ್ತಮಿ ಕೆಮೆಸ್ಟ್ರಿ ವರ್ಕ್ ಆಗಿತ್ತು. ಇದೀಗ ಸಂಪದಾ 'ಎಕ್ಕ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈಗಾಗಲೇ 3 ಸಿನಿಮಾಗಳಲ್ಲಿ ಆಕೆ ನಟಿಸಿದ್ದು ಇದು 4ನೇ ಸಿನಿಮಾ. ಈ ಬಾರಿ ಯುವ ರಾಜ್ಕುಮಾರ್ ಜೊತೆ ಡ್ಯುಯೆಟ್ ಹಾಡುವ ಅವಕಾಶ ಪಡೆದಿದ್ದಾರೆ.
'ಎಕ್ಕ' ಚಿತ್ರದ ಇಬ್ಬರು ನಾಯಕಿಯರಲ್ಲಿ ಸಂಪಾದ ಒಬ್ಬರಾಗಿದ್ದಾರೆ. 'ಮಿಥುನ ರಾಶಿ' ಎಂಬ ಧಾರಾವಾಹಿಯಲ್ಲಿ ಈಕೆ ಮೊದಲಿಗೆ ನಟಿಸಿದ್ದರು. ಅಂದಹಾಗೆ ಆಕೆಯ ಪೂರ್ಣ ಹೆಸರು ಸಂಪಾದ ಹುಲಿವನ. ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಚಿತ್ರದಲ್ಲಿ ಆಕೆ ನಾಯಕಿಯಾಗಿ ಮಿಂಚಿದ್ದರು. ಬಳಿಕ ಆಕೆಗೆ ಭಾರೀ ಡಿಮ್ಯಾಂಡ್ ಶುರುವಾಗಿತ್ತು.

ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ ಸಂಪಾದ ಬಣ್ಣ ಹಚ್ಚಿ ನಟಿಸಿದ್ದಾರೆ. 'ಮಾಸ್ ಮಹಾರಾಜು' ಎಂಬ ಚಿತ್ರದಲ್ಲಿ ಈಗಾಗಲೇ ಮಿಂಚಿದ್ದಾರೆ. ವಿಶ್ವಕ್ ಸೇನ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ 'ರೈಡರ್' ಚಿತ್ರಕ್ಕೂ ಮುನ್ನ 'ಬೆಂಕಿ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ 'ಕರಾವಳಿ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ನಟಿಸುತ್ತಿದ್ದಾರೆ. ಇನ್ನು ಆಕೆ ಇಂಟಿರಿಯಲ್ ಡಿಸೈನಿಂಗ್ ಪದವಿ ಪಡೆದಿದ್ದಾರೆ.
'ಎಕ್ಕ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದೊಡ್ಡ ನಿರ್ಮಾಣ ಸಂಸ್ಥೆಗಳು, ತಂತ್ರಜ್ಞರು ಚಿತ್ರಕ್ಕೆ ಕೈ ಜೋಡಿಸಿರುವುದು ವಿಶೇಷ. ಸತ್ಯಾ ಹೆಗಡೆ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಇನ್ನು ಬಾಲಿವುಡ್ ನಟ ಅತುಲ್ ಕುಲಕರ್ಣಿ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಮಾಸ್ತಿ' ಮಾಸ್ ಸಂಭಾಷಣೆ ಚಿತ್ರಕ್ಕಿದೆ.
ಮುಂದಿನ ವರ್ಷ ಜೂನ್ 6ಕ್ಕೆ 'ಎಕ್ಕ' ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. 'ಯುವ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ರಾಘಣ್ಣನ ಕಿರಿಮಗನ ಹೊಸ ಸಿನಿಮಾ ಗಮನ ಸೆಳೆಯುತ್ತಿದೆ. ವಿಭಿನ್ನ ಟೈಟಲ್ನಿಂದಲೇ ಸಿನಿಮಾ ಸದ್ದು ಮಾಡ್ತಿದೆ.
ಡಾಲಿ ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಚಿತ್ರವನ್ನು ರೋಹಿತ್ ಪದಕಿ ಕಟ್ಟಿಕೊಟ್ಟಿದ್ದರು. ಬಳಿಕ ಅದೇ ಕಾಂಬಿನೇಷನ್ನಲ್ಲಿ 'ಉತ್ತರಕಾಂಡ' ಸಿನಿಮಾ ಶುರುವಾಗಿತ್ತು. ಶಿವಣ್ಣ ಸಹ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಆದರೆ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಅದರ ನಡುವೆ 'ಎಕ್ಕ' ಸಿನಿಮಾ ಸೆಟ್ಟೇರಿದೆ. 'ಉತ್ತರಕಾಂಡ' ಸಿನಿಮಾ ಮತ್ತೆ ಯಾವಾಗ ಶುರುವಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
'ಯುವ' ಚಿತ್ರದಲ್ಲಿ ಅಣ್ಣಾವ್ರ ಮೊಮ್ಮಗನ ಫೈಟ್ ಹಾಗೂ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ನಟನೆಯಲ್ಲಿ ಇನ್ನಷ್ಟು ಮಾಗಬೇಕು ಎನ್ನುವ ಮಾತುಗಳು ಕೇಳಿಬಂದಿತ್ತು. 'ಎಕ್ಕ' ಚಿತ್ರದಲ್ಲಿ ರಾ ಸ್ಟೈಲ್ನಲ್ಲಿ ಕಥೆ ಹೇಳುವ ಪ್ರಯತ್ನ ನಡೀತಿದೆ. ಯುವ ರಾಜ್ಕುಮಾರ್ ಆರ್ಭಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











