Tatsama Tadbhava Trailer: ಆರಿಕಾ ಪತಿ ಮಿಸ್ಸಿಂಗ್: ಪೊಲೀಸರಿಗೆ ಪತ್ನಿ ಮೇಲೆ ಶಂಕೆ?
ಸ್ಯಾಂಡಲ್ವುಡ್ನಲ್ಲಿ ನಟಿ ಮೇಘನಾ ರಾಜ್ ಸೆಕೆಂಡ್ ಇನ್ನಿಂಗ್ ಶುರುವಾಗ್ತಿದೆ. ವಿಶಾಲ್ ಆತ್ರೇಯಾ ನಿರ್ದೇಶನದ 'ತತ್ಸಮ ತದ್ಭವ' ಚಿತ್ರದ ಲೀಡ್ ರೋಲ್ನಲ್ಲಿ ಆಕೆ ನಟಿಸಿದ್ದಾರೆ. ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಪನ್ನಗಾ ಭರಣ, ಅನಿಲ್ ಹಾಗೂ ಚೇತನ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.
ಪತಿ ಚಿರಂಜೀವಿ ಸರ್ಜಾ ಅಗಲಿಕೆ ನೋವು, ರಾಯನ್ ಲಾಲನೆ ಪಾಲನೆಗಾಗಿ ಚಿತ್ರರಂಗದಿಂದ ಮೇಘನಾ ಬ್ರೇಕ್ ಪಡೆದಿದ್ದರು. 'ತತ್ಸಮ ತದ್ಭವ' ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅರವಿಂದ್ ಅಯ್ಯರ್, ಬಾಲಾಜಿ ಮನೋಹನ್, ಶ್ರುತಿ, ಗಿರಿಜಾ ಲೋಕೇಶ್, ರಾಜಶ್ರೀ ಪೊನ್ನಪ್ಪ ಚಿತ್ರದ ತಾರಾಗಣದಲ್ಲಿದ್ದಾರೆ.

ವಿಭಿನ್ನ ಟೈಟಲ್ನಿಂದಲೇ ಗಮನ ಸೆಳೆದಿದ್ದ ಸಿನಿಮಾ ಇದೀಗ ಟ್ರೈಲರ್ನಿಂದ ಮತ್ತಷ್ಟು ಕುತೂಹಲ ಮೂಡಿಸಿದೆ. "ನಾವು ಕಂಡ ದೊಡ್ಡ ಕನಸಿನ ಪುಟ್ಟ ಹೆಜ್ಜೆ. ಗೆಳೆಯ ಇದು ನಿನಗಾಗಿ" ಎಂದು ಚಿರಂಜೀವಿ ಸರ್ಜಾಗೆ ತಂಡ ಚಿತ್ರವನ್ನು ಅರ್ಪಣೆ ಮಾಡುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಭಾವಿ ಪೊಲೀಸ್ ಸಿಬ್ಬಂದಿಗೆ ಕ್ರೈಂ ಇನ್ವೆಸ್ಟಿಗೇಷನ್ ಬಗ್ಗೆ ಪಾಠ ಮಾಡುವುದರೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ಹಿರಿಯ ನಟ ದೇವರಾಜ್ 'ತತ್ಸಮ ತದ್ಭವ' ಕಥೆಯನ್ನು ನಿರೂಪಣೆ ಮಾಡುವಂತೆ ಸಿನಿಮಾ ಸಾಗಲಿದೆ.
ನನ್ನ ಹುಟ್ಟುಹಬ್ಬದ ದಿನವೇ ಪತಿ ಸಂಜಯ್ ಕಾಣಿಯಾಗಿದ್ದಾರೆ ಎಂದು ಆರಿಕಾ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾಳೆ. ಹಾಗಾದರೆ ಸಂಜಯ್ ಕಾಣಿಯಾಗಿದ್ದು ಹೇಗೆ? ಪೊಲೀಸರು ಆರಿಕಾ ಮೇಲೆಯೇ ಸಂಶಯ ವ್ಯಕ್ತಪಡಿಸೋದು ಯಾಕೆ? ದಕ್ಷ ಅಧಿಕಾರಿ ಅರವಿಂದ್ ಅಶ್ವತ್ಥಾಮ ಪ್ರಕರಣವನ್ನು ಹೇಗೆ ಭೇದಿಸುತ್ತಾನೆ? ಅನ್ನೋದು 'ತತ್ಸಮ ತದ್ಭವ' ಕಥೆ ಅನ್ನೋದು ಟ್ರೈಲರ್ನಲ್ಲಿ ಗೊತ್ತಾಗ್ತಿದೆ.
ಟ್ರೈಲರ್ನಲ್ಲೇ ಇಡೀ ಸಿನಿಮಾ ಕಥೆ ಹೇಳಿಬಿಟ್ರಾ? ಅಥವಾ ಇದನ್ನು ಮೀರಿ ಸಿನಿಮಾದಲ್ಲಿ ಏನಾದರೂ ಟ್ವಿಸ್ಟ್ ಇದ್ಯಾ? ಅನ್ನೋದನ್ನು ಕಾದು ನೋಡಬೇಕಿದೆ. ಆರಿಕಾ ಆಗಿ ಮೇಘನಾ ರಾಜ್, ಅರವಿಂದ್ ಅಶ್ವತ್ಥಾಮ ಆಗಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ಒಂಚೂರು ಎಮೋಷನ್ ಸೇರಿಸಿ ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಸೆಪ್ಟೆಂಬರ್ 25ಕ್ಕೆ ವಿಶ್ವದಾದ್ಯಂತ 'ತತ್ಸಮ ತದ್ಭವ' ಸಿನಿಮಾ ಬಿಡುಗಡೆಯಾಗಲಿದೆ.

ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ 'ತತ್ಸಮ ತದ್ಭವ' ಚಿತ್ರಕ್ಕಿದೆ. ಈಗಾಗಲೇ ಪೋಸ್ಟರ್ಗಳಿಂದ ಗಮನ ಸೆಳೆದಿದ್ದ ಸಿನಿಮಾ ಇದೀಗ ಟ್ರೈಲರ್ನಿಂದ ಮತ್ತಷ್ಟು ಕುತೂಹಲ ಕೆರಳಿಸಿದೆ. ಸಿನಿಮಾ ರೀ ಎಂಟ್ರಿಗೆ ಮೇಘನಾ ರಾಜ್ ಬಹಳ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಬಲವಾಗಿ ಸ್ನೇಹಿತರು ನಿಂತಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಭಾವನಾತ್ಮಕ ಸನ್ನಿವೇಶಗಳಲ್ಲಿ ಮೇಘನಾ ರಾಜ್ ಗಮನ ಸೆಳೆಯುವ ಸುಳಿವು ಸಿಗುತ್ತಿದೆ. ಇನ್ನು ಇನ್ಸ್ಪೆಕ್ಟರ್ ವಿಕ್ರಂ ಬಳಿಕ ಮತ್ತೆ ಖಾಕಿ ತೊಟ್ಟು ಪ್ರಜ್ವಲ್ ದೇವರಾಜ್ ಅಬ್ಬರಿಸಿದ್ದಾರೆ. ಯುಕ್ತಿಯಿಂದಲೇ ಸಂಜಯ್ ಮಿಸ್ಸಿಂಗ್ ಪ್ರಕರಣವನ್ನು ಅರವಿಂಧ್ ಅಶ್ವತ್ಥಾಮ ಹೇಗೆ ಬಗೆಹರಿಸುತ್ತಾನೆ ಅನ್ನೋದನ್ನು ನೋಡೋಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.


Click it and Unblock the Notifications











