ಮೇಘನಾ ರಾಜ್ ನಟನೆಯ ಇನ್ವೆಸ್ಟಿಕೇಶನ್ ಕ್ರೈಂ ಥ್ರಿಲ್ಲರ್ 'ತತ್ಸಮ ತದ್ಭವ' ಶೂಟಿಂಗ್ ಕಂಪ್ಲೀಟ್
ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಗೆದ್ದ ನಟಿ ಮೇಘನಾ ರಾಜ್. ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮೇಘನಾ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ 'ತತ್ಸಮ ತದ್ಭವ' ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಗೆ ವಾಪಸ್ ಆಗುತ್ತಿದ್ದಾರೆ. ಇದೀಗ ಈ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ.
ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ 'ತತ್ಸಮ ತದ್ಭವ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಕೆಲ ದಿನಗಳ ಹಿಂದೆ ಟೈಟಲ್ ಪೋಸ್ಟರ್ ಸಮೇತ ನಟಿ ಮೇಘನಾ ರಾಜ್ ಮತ್ತೆ ಚಿತ್ರರಂಗಕ್ಕೆ ಮರಳುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. ಅದಕ್ಕು ಮುನ್ನ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಆರಂಭಿಸಲಾಗಿತ್ತು. ಮಗ ರಾಯನ್ ಸರ್ಜಾ ಲಾಲನೆ ಪಾಲನೆ ಜೊತೆ ಜೊತೆಗೆ 'ತತ್ಸಮ ತದ್ಭವ' ಸಿನಿಮಾ ಮಾಡಿ ಮುಗಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಟೀಸರ್, ಸಾಂಗ್ಸ್, ಟ್ರೈಲರ್ ರಿಲೀಸ್ ಆಗಲಿದೆ.

'ತತ್ಸಮ ತದ್ಭವ' ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೀತಿದೆ. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಕಾವು ರಂಗೇರಿದೆ. ಚುನಾವಣೆ ಮುಗಿದ ಮೇಲೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಅಭಿಮಾನಿಗಳು ಮತ್ತೆ ಮೇಘನಾ ರಾಜ್ ಅವರನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಿದೆ.
ಮೇಘನಾ ರಾಜ್ ಮಾತನಾಡಿ "ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್, ಚೇತನ್ ನಂಜುಂಡಯ್ಯ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದಿದ್ದಾರೆ.

ಸದ್ಯ 'ತತ್ಸಮ ತದ್ಭವ' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ರೀರೆಕಾರ್ಡಿಂಗ್ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ಬಿಡುಗಡೆ ಮಾಡುತ್ತೇವೆ" ಎಂದು ನಿರ್ಮಾಪಕ ಪನ್ನಗ ಭರಣ ಮಾಹಿತಿ ನೀಡಿದ್ದಾರೆ.
ಇನ್ನು ಚಿತ್ರ ಮುಖ್ಯ ಪಾತ್ರವೊಂದರಲ್ಲಿ ಚಿರು ಸರ್ಜಾ ಆಪ್ತ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. "ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಆಗ ಅವರು ನೀವೇ ಮಾಡುತ್ತಿದ್ದೀರಾ ಎಂದರು. ಸ್ನೇಹಿತರ ಸಿನಿಮಾದಲ್ಲಿ ಅಭಿನಯಿಸಿದ ಖುಷಿಯಿದೆ" ಎಂದು ಪ್ರಜ್ವಲ್ ದೇವರಾಜ್ ವಿವರಿಸಿದ್ದಾರೆ.

ಟೈಟಲ್ ಹಾಗೂ ಪೋಸ್ಟರ್ನಲ್ಲಿ ಮೇಘನಾ ರಾಜ್ ಲುಕ್ ಬಹಳ ಇಂಟ್ರೆಸ್ಟಿಂಗ್ ಆಗಿದ್ದು ಯಾವ ಜಾನರ್ ಸಿನಿಮಾ ಎನ್ನುವ ಕುತೂಹಲ ಇತ್ತು. ನಿರ್ದೇಶಕರು ಮಾತನಾಡಿ "ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದಿದ್ದಾರೆ.
ಚಿತ್ರದಲ್ಲಿ ನಟಿ ಶ್ರುತಿ ಕೂಡ ಬಣ್ಣ ಹಚ್ಚಿದ್ದಾರೆ. "ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ" ಎಂದಿದ್ದಾರೆ. ಚಿತ್ರದಲ್ಲೇ ಒಂದೇ ಒಂದು ಹಾಡಿದೆ. ರೀರೆರ್ಡಿಂಗ್ ಕೆಲಸ ನಡೆಯುತ್ತಿದೆ ಎಂದು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾಹಿತಿ ನೀಡಿದ್ದಾರೆ.


Click it and Unblock the Notifications











