'ಕಾಟೇರ' ಚಿತ್ರ ವೀಕ್ಷಿಸಿದ ಸಚಿವ ಪ್ರಲ್ಹಾದ್ ಜೋಶಿ: ದರ್ಶನ್ ನಟನೆಗೆ ಏನಂದ್ರು?
'ಕಾಟೇರ' ಚಿತ್ರಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಪ್ರೇಕ್ಷಕರು ಸಾಗರದಂತೆ ಚಿತ್ರಮಂದಿರಗಳಿಗೆ ಹರಿದು ಬರುತ್ತಿದ್ದಾರೆ. ವರ್ಷದ ಕೊನೆಗೆ ದೊಡ್ಡಮಟ್ಟದಲ್ಲಿ ಕನ್ನಡ ಸಿನಿಮಾ ಗೆದ್ದಿದೆ. ಅಭಿಮಾನಿಗಳು, ಸಿನಿರಸಿಕರು ಮಾತ್ರವಲ್ಲ, ಸಿನಿಮಾ ತಾರೆಯರು, ರಾಜಕೀಯ ಮುಖಂಡರು 'ಕಾಟೇರ'ನ ಆರ್ಭಟ ಕಣ್ತುಂಬಿಕೊಳ್ಳುತ್ತಿದ್ದಾರೆ.
'ಕಾಟೇರ' ಚಿತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ವೀಕ್ಷಿಸಿದ್ದಾರೆ. ಶಾಸಕರಾದ ಮಹೇಶ್ ತೆಂಗಿನಕಾಯಿ ಕೂಡ ಜೊತೆಗಿದ್ದರು. ಸಿನಿಮಾ ನೋಡಿದ ಬಳಿಕ ಸಚಿವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸದ್ಯ ಪ್ರಲ್ಹಾದ್ ಜೋಶಿ ಪೋಸ್ಟ್ ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ನಟನ ಸಿನಿಮಾ ಬಗ್ಗೆ ಸಚಿವರ ಮಾತುಗಳು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

"ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಕ್ಲೈನ್ ವೆಂಕಟೇಶ ಅವರ ನಿರ್ಮಾಣದಲ್ಲಿ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕಾಟೇರ ಚಲನಚಿತ್ರವನ್ನು ಹುಬ್ಬಳ್ಳಿಯಲ್ಲಿ ವೀಕ್ಷಿಸಿದೆನು. ರೈತರಿಗೆ ಪ್ರತಿಯೊಬ್ಬರೂ ನೀಡಬೇಕಾದ ಪ್ರಾಮುಖ್ಯತೆ, ಸಮಾಜದಲ್ಲಿ ಸರ್ವರನ್ನೂ ಸಮಾನವಾಗಿ ಕಾಣಬೇಕೆನ್ನುವ ಸಂದೇಶವನ್ನು ಚಲನಚಿತ್ರದ ಮೂಲಕ ಅಚ್ಚುಕಟ್ಟಾಗಿ ಅದ್ಭುತವಾಗಿ ತೋರಿಸಲಾಗಿದೆ."
"ದರ್ಶನ್ ಅವರ ಅದ್ಭುತ ನಟನೆ ಅಭಿಮಾನಿಗಳನ್ನು ಚಲನಚಿತ್ರ ಪ್ರಿಯರನ್ನು ಮತ್ತೊಮ್ಮೆ ರಂಜಿಸುವುದರ ಜೊತೆಗೆ ಹೊಸ ಸಂದೇಶವನ್ನು ಸಾರಿದ್ದಾರೆ. ಚಲನಚಿತ್ರ ಯಶಸ್ಸು ಕಾಣಲಿ ಎಂದು ಕಾಟೇರ ಚಲನಚಿತ್ರ ತಂಡಕ್ಕೆ ಶುಭ ಹಾರೈಸುತ್ತೇನೆ. ಸಿನಿಮಾ ವೀಕ್ಷಣೆಯಲ್ಲಿ ನನ್ನೊಂದಿಗೆ ಶಾಸಕರಾದ ಶ್ರೀ ಮಹೇಶ್ ತೆಂಗಿನಕಾಯಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀ ನಾಗರಾಜ ಛಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ್ ಕುಂದಗೋಲ್ಮಠ್ ಹಾಗೂ ಪ್ರಮುಖರು ಜೊತೆಗಿದ್ದರು." ಎಂದು ಬರೆದಿದ್ದಾರೆ.
ಶುಕ್ರವಾರವಷ್ಟೇ 'ಕಾಟೇರ' ಸಿನಿಮಾ ಬಿಡುಗಡೆಯಾಗಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ ತೆರೆಗೆ ಬಂದಿದೆ. ಹೊರ ರಾಜ್ಯಗಳಲ್ಲೂ ಕೆಲವೆಡೆ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿ 'ಕಾಟೇರ'ನ ಆರ್ಭಟ ಜೋರಾಗಿದೆ. ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಜೊತೆಗೆ ಸಂದೇಶವೂ ಇದೆ. ಮನೆಮಂದಿ ಎಲ್ಲರೂ ಸೇರಿ ನೋಡುವಂತಹ ಸಿನಿಮಾ ಆಗಿ 'ಕಾಟೇರ' ಸದ್ದು ಮಾಡ್ತಿದೆ.
ತರುಣ್ ಸುಧೀರ್ ನಿರ್ದೇಶನದಲ್ಲಿ 2 ವಿಭಿನ್ನ ಶೇಡ್ಗಳಿರೋ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಮಿಂಚಿದ್ದಾರೆ. ಮೊದಲ ಪ್ರಯತ್ನದಲ್ಲಿ ಸಕ್ಸಸ್ ಕಂಡಿದ್ದಾರೆ. ಇನ್ನುಳಿದಂತೆ ಶ್ರುತಿ, ಕುಮಾರ್ ಗೋವಿಂದ್, ಜಗಪತಿ ಬಾಬು, ವಿನೋದ್ ಆಳ್ವ, ಬಿರಾದಾರ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ರಾಕ್ಲೈನ್ ವೆಂಟಕೇಶ್ ಅದ್ಧೂರಿಯಾಗಿ 'ಕಾಟೇರ' ಸಿನಿಮಾ ನಿರ್ಮಿಸಿದ್ದಾರೆ.
3ನೇ ದಿನವೂ 'ಕಾಟೇರ' ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ 19 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 17.35 ಕೋಟಿ ರೂ. ಬಾಚಿದೆ. ಒಟ್ಟಾರೆ ಮೊದಲೆರಡು ದಿನ ಸಿನಿಂಆ 37.14 ಕೋಟಿ ರೂ. ಗಳಿಸಿದಂತಾಗಿದೆ. ಮೂರನೇ ದಿನವೂ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಕಲೆಕ್ಷನ್ ಆಗಿದ್ದು ಫಸ್ಟ್ ವೀಕೆಂಡ್ನಲ್ಲೇ ಸಿನಿಮಾ 50 ಕೋಟಿ ರೂ. ಗಡಿ ದಾಟುವ ಸುಳಿವು ಸಿಗುತ್ತಿದೆ.
ಈ ವರ್ಷ ದರ್ಶನ್ ನಟನೆಯ 2 ಸಿನಿಮಾಗಳು ತೆರೆಗೆ ಬಂದಿದೆ. ವರ್ಷದ ಆರಂಭದಲ್ಲೇ 'ಕ್ರಾಂತಿ' ಸಿನಿಮಾ ತೆರೆಕಂಡಿತ್ತು. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ವರ್ಷಾಂತ್ಯದಲ್ಲಿ ಬಂದ 'ಕಾಟೇರ'ನಿಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಸದ್ದು ಮಾಡುವ ಸುಳಿವು ಸಿಗುತ್ತಿದೆ.


Click it and Unblock the Notifications











