'ಬರೀ ಹೊಡೆದಾಟ, ಲಾಂಗುಗಳ ಪ್ರದರ್ಶನ': ಟೀಸರ್ ನೋಡಿ ಸಚಿವ ಸುರೇಶ್ ಕುಮಾರ್ ಬೇಸರ
ಕನ್ನಡ ಸಿನಿಮಾದ ಟೀಸರ್ವೊಂದನ್ನು ನೋಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ''ಬರೀ ಹೊಡೆದಾಟ, ಲಾಂಗುಗಳ ಪ್ರದರ್ಶನ, ಯುವಕರನ್ನು ಹಿಂಸೆಗೆ ಪ್ರಚೋದಿಸುವ ಸಂಭಾಷಣೆ.... '' ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಯಾವ ಸಿನಿಮಾದ ಟೀಸರ್ ನೋಡಿದರು ಮತ್ತು ನಟ, ನಿರ್ದೇಶಕ ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡದ ಸುರೇಶ್ ಕುಮಾರ್, ಸಲೂನ್ ಶಾಪ್ನಲ್ಲಿ ನಡೆದ ಘಟನೆಯನ್ನು ಸಾಮಾಜಿಕ ಜಾಲಜಾಣದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

ಸುರೇಶ್ ಕುಮಾರ್ ಪೋಸ್ಟ್ ಇಲ್ಲಿದೆ....
ನಿನ್ನೆ ಸಂಜೆ ನನ್ನ ಗಡ್ಡ ಮತ್ತು ತಲೆಗೂದಲು ಟ್ರಿಮ್ ಮಾಡಿಸಲು ಮಾಮೂಲಿನಂತೆ ಹೇರ್ ಡ್ರೆಸ್ಸಿಂಗ್ ಸೆಲೂನ್ ಗೆ ಹೋಗಿದ್ದೆ.
ಸಲೂನ್ ಗಳಲ್ಲಿ ಟ್ರಿಮ್ ಮಾಡಿಸಿಕೊಳ್ಳುವ ಆ ಸಮಯ ಬಹಳ ಆರಾಮಾಗಿ ಇರುವಂತಹ ಅವಧಿ. ಇದನ್ನು ಬಹಳಷ್ಟು ಜನ "ಪಟ್ಟಾಭಿಷೇಕ" ಎಂದೂ ಹೇಳುವುದುಂಟು.
ನಾನು ನಿನ್ನೆ ಟ್ರಿಮ್ ಮಾಡಿಸಿಕೊಳ್ಳುತ್ತಿದ್ದಾಗ ಓರ್ವ ಯುವಕ ನನ್ನನ್ನು ಮಾತನಾಡಿಸಲು ಬಹಳಷ್ಟು ಪ್ರಯತ್ನಿಸುತ್ತಿದ್ದದ್ದನ್ನು ಗಮನಿಸಿದೆ.
ಕೊನೆಗೂ ಆ ವ್ಯಕ್ತಿ ನನ್ನನ್ನು ಮಾತನಾಡಿಸಿ ಆ ನನ್ನ ನೆಮ್ಮದಿಗೆ ಕಲ್ಲೆಸೆದುಬಿಟ್ಟರು.
ಆ ಯುವಕನ ಬೇಡಿಕೆಯೆಂದರೆ ತಾನು ನಟಿಸಿರುವ ಚಲನಚಿತ್ರವನ್ನು ನಾನು ನೋಡಬೇಕೆಂದು.
ಅವರು ಹೇಳಿದ ದಿನಾಂಕದಂದು ನನಗೆ ಪುರುಸೋತ್ತು ಇಲ್ಲದ್ದರಿಂದ ಕೊನೆಯ ಪಕ್ಷ ತಾನು ನಟಿಸಿರುವ ಚಿತ್ರದ ಟೀಸರ್ ಆದರೂ ವೀಕ್ಷಿಸಲು ದುಂಬಾಲು ಬಿದ್ದರು.
ಇನ್ನೇನು ಮಾಡುವುದು. ಒಪ್ಪಿ ನೋಡಿದೆ.
ಆ ಚಿತ್ರದ ಟೀಸರ್ ನೋಡಿ ಸೆಲೂನಿನಲ್ಲಿ ನಾನು ಅನುಭವಿಸಲು ಹೋಗಿದ್ದ ನನ್ನ ನೆಮ್ಮದಿ ಎಲ್ಲಾ ಹಾರಿಹೋಯಿತು.
ಬರೀ ಹೊಡೆದಾಟ, ಲಾಂಗುಗಳ ಪ್ರದರ್ಶನ, ಯುವಕರನ್ನು ಹಿಂಸೆಗೆ ಪ್ರಚೋದಿಸುವ ಸಂಭಾಷಣೆ....ಇತ್ಯಾದಿಗಳಿಂದ ಈ ಟೀಸರ್ ತುಂಬಿತ್ತು.
ಆ ಟೀಸರ್ ನೋಡಿದ್ದು ಮುಕ್ತಾಯವಾದ ಮೇಲೆ ಆ ವ್ಯಕ್ತಿಗೆ ಬೇಸರ ಆಗಬಾರದೆಂದು ನಾನೇನೂ ಮಾತನಾಡದೆ ಅವನ ಭುಜ ತಟ್ಟಿ ಹೊರ ನಡೆದೆ ಎಂದು ಘಟನೆ ವಿವರಿಸಿದ್ದಾರೆ.
ಸುರೇಶ್ ಕುಮಾರ್ ಅವರ ಈ ಪೋಸ್ಟ್ಗೆ ನೆಟ್ಟಿಗರು ಹಲವು ಕಾಮೆಂಟ್ಗಳನ್ನು ಮಾಡಿ ಚರ್ಚೆ ಮಾಡ್ತಿದ್ದಾರೆ. ಸೆನ್ಸಾರ್ ಮಂಡಳಿಯ ಸದಸ್ಯನೊಬ್ಬ ಸಹ ಪೋಸ್ಟ್ ಮಾಡಿದ್ದು, ''ನೀವು ಬರೀ ಮೂವಿ ಟೀಸರ್ ನೋಡೆ ನೆಮ್ಮದಿ ಹಾಳಾಯ್ತು ಅಂದ್ರೆ. ಸೆನ್ಸೆರ್ ಬೋರ್ಡ್ ಸದಸ್ಯನಾಗಿ ಈಗಿನ ಕನ್ನಡ ಚಿತ್ರಗಳನ್ನ ನೋಡಿ ಆತ್ಮಹತ್ಯೆ ಮಾಡಿಕೊಳ್ಳೋಣ ಅನ್ಸುತ್ತೆ ಸರ್ ಮಾಡ್ಕೊಳೋಣ ಅನ್ನೋಷ್ಟು ಬೇಜಾರಾಗುತ್ತೆ ನಮಗೆ. ನೀವು ನೆನ್ನೆ ನೋಡಿದ ಟೀಸರ್ ಹಾಗೆಯೇ ಇರುತ್ತದೆ ಶೇಕಡಾ 99 ರಷ್ಟು ಚಿತ್ರಗಳು. ಅದಕ್ಕೆ ನಮ್ಮ ಕನ್ನಡ ಫಿಲ್ಮ್ ಇಂಡಸ್ಟ್ರಿ ಉದ್ದಾರ ಆಗ್ತಿಲ್ಲ'' ಎಂದು ಟೀಕಿಸಿದ್ದಾರೆ.


Click it and Unblock the Notifications











