'ಮಿಸ್ ಮಲ್ಲಿಗೆ' ಸೆಕ್ಸ್ ಸಿನಿಮಾ ಅಲ್ಲ: ನಟಿ ರೂಪಾ
ಈಗಿನ ಸಮಾಜದಲ್ಲಿ ಒಂಟಿ ಹೆಣ್ಣಿನ ಮೇಲೆ ಪ್ರತಿನಿತ್ಯ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರದಂಥ ಗಹನವಾದ ವಿಷಯಗಳನ್ನು ತನ್ನ ಚಿತ್ರದ ಮೂಲಕ ಹೇಳ ಹೊರಟಿರುವ ನಿರ್ದೇಶಕ ಕೃಷ್ಣ 'ಮಿಸ್ ಮಲ್ಲಿಗೆ' ಚಿತ್ರದಲ್ಲಿ ಅದನ್ನೆಲ್ಲ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
ಈ ಹಿಂದೆ 'ಆಸ್ಕರ್' ಎಂಬ ಚಿತ್ರ ನಿರ್ದೇಶಿಸುವುದರ ಮೂಲಕ ಗಾಂಧಿನಗರದಲ್ಲಿ ಗುರ್ತಿಸಿಕೊಂಡಿದ್ದ ಕೃಷ್ಣ ಈಗ 'ಮಿಸ್ ಮಲ್ಲಿಗೆ' ಮೂಲಕ ಇನ್ನೂ ಹೆಚ್ಚು ಬೆಳಕಿಗೆ ಬಂದಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಸೋಮವಾರ (ಮೇ.19) ಶ್ರೀಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ['ಮೈಸೂರು ಮಲ್ಲಿಗೆ' ಚಿತ್ರ ಬಿಡುಗಡೆಗೆ ಕೋರ್ಟ್ ತಡೆ]
ಶಾಸಕ ಮುನಿರತ್ನ, ಛೇಂಬರ್ ಅಧ್ಯಕ್ಷರಾದ ಹೆಚ್.ಡಿ.ಗಂಗರಾಜು, ಎನ್.ಎಂ.ಸುರೇಶ್, ಥಾಮಸ್ ಡಿಸೋಜ, ಉಮೇಶ್ ಬಣಕಾರ ಹಾಗೂ ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ಪಡಂಗೋಪನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹುಡುಗರ ನಿದ್ದೆಗೆಡಿಸಿರುವ ಚೆಲುವೆ ರೂಪಾ ನಟರಾಜ್
ಎಸ್.ನಾಗು ಈ ಚಿತ್ರದ 2 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ತನ್ನ ಗ್ಲಾಮರ್ ನಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಚೆಲುವೆ ರೂಪನಟರಾಜ್ ಈ ಚಿತ್ರದ ನಾಯಕಿ. ಹೊಸ ನಟ ರಂಜನ್ ಶೆಟ್ಟಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಪ್ರೇಕ್ಷಕರ ಏಕಾಗ್ರತೆಗೆ ಭಂಗ ಬರದಂತೆ ಹಾಡು
ಚಿತ್ರದಲ್ಲಿ ಅನಾವಶ್ಯಕವಾಗಿ ಹಾಡು ತುರುಕಿ ಪ್ರೇಕ್ಷಕರ ಏಕಾಗ್ರತೆಯನ್ನು ಕೆದಕುವ ಬದಲು ಸಿನಿಮಾಕ್ಕೆ ಎಲ್ಲಿ ಬೇಕೋ ಅಲ್ಲಿ ಮಾತ್ರ ಹಾಡುಗಳನ್ನು ಸೇರಿಸಿದ್ದೇನೆ. ಕೇವಲ 2 ಹಾಡುಗಳನ್ನು ಮಾತ್ರ ಬಳಸಿಕೊಳ್ಳಲಾಗಿದ್ದು ಎರಡನ್ನೂ ವಿಭಿನ್ನ ಶೈಲಿಯಲ್ಲಿ ನಿರೂಪಿಸಿದ್ದೇನೆ. 80-90 ರ ದಶಕದ ಸಂಗೀತವನ್ನು ನೆನಪಿಸುವಂಥ ಮೆಲೋಡಿ ಹಾಡು ಇದ್ದು ಅದನ್ನು ನಂದಿತಾ ಅವಿನಾಶ್ ಭಟ್ ಹಾಡಿದ್ದಾರೆ.

ಗುರುರಾಜ್ ಹೊಸಕೋಟೆ ಹಾಡು, ಅಭಿನಯ
ಮತ್ತೊಂದು ಜಾನಪದ ಶೈಲಿಯ ಗೀತೆಯನ್ನು ಗಾಯಕ ಗುರುರಾಜ ಹೊಸಕೋಟೆ ಹಾಡಿದ್ದಾರಲ್ಲದೆ ಅಭಿನಯ ಕೂಡ ಮಾಡಿದ್ದಾರೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಆಸ್ಕರ್ ಕೃಷ್ಣ ಸಮಾರಂಭದಲ್ಲಿ ವಿವರ ನೀಡಿದರು.

ಒಂಟಿ ಮಹಿಳೆಯ ಕಷ್ಟವೇ ಚಿತ್ರದ ಕಥಾಹಂದರ
ನಾಯಕಿ ರೂಪ ನಟರಾಜ್ ಮಾತನಾಡಿ ಮೈಸೂರು ಮಲ್ಲಿಗೆ ಎಂದು ಆರಂಭವಾದ ಈ ಸಿನಿಮಾ ಕೊನೆಗೆ 'ಮಿಸ್ ಮಲ್ಲಿಗೆ' ಆಯಿತು. ಸಾಕಷ್ಟು ಅಡ್ಡಿ-ಆತಂಕಗಳನ್ನು ಎದುರಿಸಿ ಈಗ ಬಿಡುಗಡೆಯು ಹಂತ ತಲುಪಿದೆ. ಒಂಟಿ ಮಹಿಳೆಯ ಕಷ್ಟ ಏನು ಎಂದು ನಿರ್ದೇಶಕರು ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ.

ಪೋಸ್ಟರ್ ನೋಡಿ ಸೆಕ್ಸ್ ಸಿನಿಮಾ ಅಂದ್ಕೋಬೇಡಿ
ಈ ಚಿತ್ರ ನನಗೆ ನಿಜಕ್ಕೂ ಒಂದು ಬ್ರೇಕ್ ನೀಡುತ್ತದೆ. ಪೋಸ್ಟರ್ ನೋಡಿ ಸೆಕ್ಸ್ ಸಿನಿಮಾ ಇರ್ಬೇಕು ಅಂತ ಯಾರೂ ಬರಬೇಡಿ. ಒಂದು ಒಳ್ಳೇ ಸಿನಿಮಾ ಅಂತ ಬಂದರೆ ನಿಜಕ್ಕೂ ಒಳ್ಳೇ ಮನರಂಜನೆ ಸಿಗುತ್ತದೆ ಎಂದು ತನ್ನ ಪಾತ್ರ ಹಾಗೂ ಚಿತ್ರದ ಬಗ್ಗೆ ಹೇಳಿಕೊಂಡರು.

ನಾಯಕ ರಂಜನ್ ಶೆಟ್ಟಿಗೆ ಇದು ಚೊಚ್ಚಲ ಚಿತ್ರ
ನಾಯಕ ರಂಜನ್ ಶೆಟ್ಟಿ ಮಾತನಾಡಿ ನಾಲ್ಕೈದು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನನಗೆ ಇದು ಮೊದಲನೆಯ ಸಿನಿಮಾ. ಹೀರೋ ಆಗ್ತೀನಿ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಒಳ್ಳೇ ಮೆಸೇಜ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದೇನೆ.

ಸೆನ್ಸಾರ್ ಗಾಗಿ ಎದುರು ನೋಡುತ್ತಿದ್ದೇವೆ
ನಿರ್ದೇಶಕರು ಹೊಸ ರೀತಿಯ ಲವ್ ಸ್ಟೋರಿಯನ್ನು ಜನರಿಗೆ ನೀಡುತ್ತಿದ್ದಾರೆ ಎಂದು ಹೇಳಿದರು. ಚಿತ್ರವೀಗ ಬಿಡುಗಡೆಯ ಹಂತ ತಲುಪಿದ್ದು ಸೆನ್ಸರ್ಗಾಗಿ ಎದುರು ನೋಡುತ್ತಿದೆ. ಮುಂದಿನ ತಿಂಗಳು ಬಿಡುಗಡೆಯಾಗುವ ಸಿದ್ಧತೆಯಲ್ಲಿದೆ.

ಹೊಸ ರೀತಿಯ ನಿರೂಪಣೆ ಚಿತ್ರದ ಆಕರ್ಷಣೆ
ಬೇರೆ ಭಾಷೆಗಳ ಚಿತ್ರಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ರೀತಿಯ ನಿರೂಪಣೆಯನ್ನು ಪ್ರಯತ್ನಿಸಿದ್ದೇನೆ. ಆದರೆ ಅದಕ್ಕೆ ನೂರಾರು ಅಡ್ಡಿಗಳು ಎದುರಾದವು. ಈಗ ಎಲ್ಲಾ ಸುಖಾಂತ್ಯವಾಗಿ ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೃಷ್ಣ ಕೊನೆಯಲ್ಲಿ ಹೇಳಿಕೊಂಡರು.


Click it and Unblock the Notifications











