'ಹೊಂಬಣ್ಣ' ಚಿತ್ರದ ಬಗ್ಗೆ ಶಾಸಕ ಕಿಮ್ಮನೆ ರತ್ನಾಕರ್ ಅಭಿಪ್ರಾಯ..
ಅರಣ್ಯ ರಕ್ಷಣೆ ಹೆಸರಿನಲ್ಲಿ ರೈತರನ್ನ ಮೂಲವಾಸದಿಂದ ಒಕ್ಕಲೆಬ್ಬಿಸುವ ಗಂಭೀರ ಸಮಸ್ಯೆ ಕುರಿತ ಕಥೆಯಾಧಾರಿತ ಸಿನಿಮಾ 'ಹೊಂಬಣ್ಣ' ಚಿತ್ರವು ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನ ಟ್ರೈಲರ್ ನೋಡಿಯೇ ಸ್ಯಾಂಡಲ್ ವುಡ್ ನ ಹಲವು ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಚಿತ್ರವನ್ನು ಕರ್ನಾಟಕದ ಮಾಜಿ ಶಿಕ್ಷಣ ಸಚಿವರು ನೋಡಿ ಮೆಚ್ಚಿಕೊಂಡಿದ್ದಾರೆ.
ಹೌದು, ಮಾಜಿ ಶಿಕ್ಷಣ ಸಚಿವರು ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ರವರು 'ಹೊಂಬಣ್ಣ' ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರ ನೋಡಿದ ಅವರು, 'ಮಲೆನಾಡಿನ ಸಮಸ್ಯೆ ಮತ್ತು ಅರಣ್ಯ ಪ್ರದೇಶದಲ್ಲಿ ವಾಸಿಸುವವರ ಸಮಸ್ಯೆಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಅವರ ದೈನಂದಿನ ನೈಜ ಸಮಸ್ಯೆಗಳನ್ನು ಚೆನ್ನಾಗಿ ತೆರೆದಿಟ್ಟಿದ್ದಾರೆ. ಚಿತ್ರದಲ್ಲಿ ಮೌಡ್ಯದ ಸಂದೇಶಕ್ಕಿಂತ ವಾಸ್ತವದಲ್ಲಿ ಅಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಜಗತ್ತಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ' ಎಂದಿದ್ದಾರೆ.

'ಭೂತರಾಧನೆ ಎಂಬುದು ಮಲೆನಾಡು ಮೂಲವಾಸಿಗರ ಸಂಸ್ಕೃತಿಯ ಒಂದು ಭಾಗ ಎಂಬುದನ್ನು ತೋರಿಸಲಾಗಿದೆ ಅಷ್ಟೆ. ಅರಣ್ಯ ಅಧಿಕಾರಿಗಳು ಮತ್ತು ಅಲ್ಲಿ ಬದುಕು ಸಾಗಿಸುವಂತಹ ಎಲ್ಲರ ಸಮಸ್ಯೆಗಳನ್ನು ಅತ್ಯಂತ ಮನೋಜ್ಞವಾಗಿ ತೆರೆ ಮೇಲೆ ತಂದಿದ್ದಾರೆ. ಎಲ್ಲರೂ ಅಷ್ಟೇ ಅದ್ಭುತವಾಗಿ ಆಕ್ಟ್ ಮಾಡಿದ್ದಾರೆ. ತುಂಬಾ ಒಳ್ಳೆ ಸಂಭಾಷಣೆ, ನೈಜ ಸಮಸ್ಯೆಯನ್ನು ಒಳ್ಳೇ ರೀತಿಯಲ್ಲಿ ತೋರಿಸಲಾಗಿದೆ. ಸಿನಿಮಾ ಲಾಂಚ್ ಗೆ ನನಗೆ ಆಹ್ವಾನ ನೀಡಿದ್ದರು. ಹೊಸ ಪ್ರತಿಭೆಗಳು ಯಾವ ರೀತಿ ಕಥೆಯನ್ನು ಸಿನಿಮಾ ಮಾಡ್ತಿದ್ದಾರೋ, ಚೆನ್ನಾಗಿದೆಯೋ? ಇಲ್ಲವೋ? ಅನ್ನೋ ಸಂಶಯ ನನ್ನನ್ನು ಕಾಡುತ್ತಿತ್ತು. ಚಿತ್ರ ನೋಡಿದ ಮೇಲೆ ಖುಷಿ ಆಗಿದೆ. ಇಡೀ ಚಿತ್ರತಂಡಕ್ಕೆ ಬೆಸ್ಟ್ ಆಫ್ ಲಕ್ ಹೇಳಲು ಬಯಸುತ್ತೇನೆ. ಇನ್ನು ಮುಂದೆ ಇಂತಹ ಇನ್ನೂ ಒಳ್ಳೆಯ ಸಂದೇಶಗಳ ಚಿತ್ರ ಮಾಡಲಿ' ಎಂದು ಕಿಮ್ಮನೆ ರತ್ನಾಕರ್ ರವರು ಹಾರೈಸಿದ್ದಾರೆ. ಅವರು ಚಿತ್ರದ ಬಗ್ಗೆ ಅಭಿಪ್ರಾಯ ತಿಳಿಸಿರುವ ವಿಡಿಯೋ ನೋಡಲು ಕ್ಲಿಕ್ ಮಾಡಿ
ಅಂದಹಾಗೆ 'ಹೊಂಬಣ್ಣ' ಚಿತ್ರವು ಜುಲೈ 7 ರಂದು ತೆರೆಕಂಡಿದ್ದು, ಈ ಚಿತ್ರಕ್ಕೆ ರಕ್ಷಿತ್ ತೀರ್ಥಹಳ್ಳಿ ಎಂಬುವರು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ಸಂಚಲನ ಮೂವೀಸ್ ಬ್ಯಾನರ್ ಅಡಿಯಲ್ಲಿ ರಾಮಕೃಷ್ಣ ನಿಗಡೆ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











