ರಾಜೇಶ್ ನಿಧನಕ್ಕೆ ಗಣ್ಯರ ಸಂತಾಪ: ಯಾರು ಏನು ಏನು ಹೇಳಿದರು?
ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ರಾಜೇಶ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕೀಯ ರಂಗದ ಪ್ರಮುಖರು ಸಹ ಸಂತಾಪ ಸೂಚಿಸಿದ್ದಾರೆ.
ಅಗಲಿದ ನಟನಿಗೆ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ''ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀ ರಾಜೇಶ್ ಅವರು ನಿಧನರಾದ ವಿಷಯ ತುಂಬಾ ನೋವುಂಟುಮಾಡಿದೆ. ಅಗಲಿದ ಹಿರಿಯ ಕಲಾ ಚೇತನದ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ.
ಅಂತಿಮ ದರ್ಶನ ಪಡೆದು ಮಾತನಾಡಿದ ನಟ ದೊಡ್ಡಣ್ಣ, ''ರಾಜೇಶ್ ಅವರು ಚಿತ್ರರಂಗ ಪ್ರವೇಶಿಸಿದಾಗ ಅವರ ಹೆಸರು ವಿದ್ಯಾಸಾಗರ. 'ನಮ್ಮ ಊರು' ಸಿನಿಮಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಕೆಲಸದಲ್ಲಿ ಬಹಳ ಶಿಸ್ತಿನ ವ್ಯಕ್ತಿಯಾಗಿದ್ದರು ರಾಜೇಶ್. ಅವರೊಟ್ಟಿಗೆ ಸುಮಾರು ಹದಿನೈದು ಸಿನಿಮಾಗಳಲ್ಲಿ ಕೆಲಸ ಮಾಡುವ ಅದೃಷ್ಟವನ್ನು ಆ ದೇವರು ನನಗೆ ಕಲ್ಪಿಸಿದ್ದು ನನ್ನ ಪುಣ್ಯ'' ಎಂದರು.

ಸಿದ್ದರಾಮಯ್ಯ ವಿಷಾದ
ಹಿರಿಯ ನಟ ರಾಜೇಶ್ ಅವರ ಅಗಲಿಕೆಯಿಂದಾಗಿ ಕನ್ನಡ ಚಿತ್ರರಂಗ ಅದ್ಭುತ ಕಲಾವಿದರೊಬ್ಬರನ್ನು ಕಳೆದುಕೊಂಡಿದೆ. ನಾಯಕ ನಟರಾಗಿ ಮಾತ್ರವಲ್ಲದೆ ಪೋಷಕ ನಟರಾಗಿಯೂ ಬೆಳ್ಳಿ ತೆರೆಯನ್ನು ಬೆಳಗಿದ ರಾಜೇಶ್ ಅವರು ನನಗೆ ಚಿರಪರಿಚಿತರು. ಹಲವಾರು ಸಂದರ್ಭಗಳಲ್ಲಿ ನಾವು ಭೇಟಿಯಾಗಿದ್ದೆವು. ರಂಗಭೂಮಿ ಮೂಲಕ ಕಲಾ ಜಗತ್ತಿಗೆ ಪ್ರವೇಶ ಪಡೆದ ಮುನಿಚೌಡಪ್ಪ ಅವರಿಗೆ ರಂಗಭೂಮಿ ಕೊಟ್ಟ ಹೆಸರು ವಿದ್ಯಾಸಾಗರ್. ರಂಗಭೂಮಿ ಮೂಲಕವೇ ಬೆಳ್ಳಿ ತೆರೆಗೆ ಬಂದು ರಾಜೇಶ್ ಆಗಿ ಖ್ಯಾತಿ ಪಡೆದರು. ನಾಯಕ ನಟರಾಗಿ ಮತ್ತು ಪೋಷಕ ಪಾತ್ರಗಳಲ್ಲೂ ಮಿಂಚಿ ಮೂರು ತಲೆ ಮಾರಿನ ಕನ್ನಡಿಗರಿಗೆ ಪರಿಚಿತರಾಗಿದ್ದರು. ಒಬ್ಬೊಬ್ಬರಾಗಿ ಹಿರಿಯ ಕಲಾವಿದರನ್ನು ನಮ್ಮ ಕಲಾ ಜಗತ್ತು ಕಳೆದುಕೊಳ್ಳುತ್ತಿರುವುದು ಬಹಳ ದುಃಖದ ಸಂಗತಿ. ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅಭಿಮಾನಿಗಳಿಗೆ, ಕುಟುಂಬಕ್ಕೆ ಮತ್ತು ಬಂಧು ಮಿತ್ರರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಎಚ್ಡಿ ಕುಮಾರಸ್ವಾಮಿ ಸಂತಾಪ
''ಹಿರಿಯ ನಟ, 'ಕಲಾ ತಪಸ್ವಿ' ಎಂದೇ ಖ್ಯಾತರಾಗಿದ್ದ ರಾಜೇಶ್ ಅವರ ನಿಧನ ನನಗೆ ದುಃಖವುಂಟು ಮಾಡಿದೆ. ರಂಗಭೂಮಿ, ಚಿತ್ರರಂಗದಲ್ಲಿ ದೊಡ್ಡ ಹೆಸರಾಗಿದ್ದ ರಾಜೇಶ್ ಅವರು ಸಹಜ ಅಭಿನಯದ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದರು, ಕನ್ನಡಿಗರ ಮನೆ-ಮನಗಳನ್ನು ತುಂಬಿದ್ದರು. ರಾಜೇಶ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬ ವರ್ಗದವರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ. 'ನಮ್ಮ ಊರು', 'ಗಂಗೆ ಗೌರಿ', 'ಸತೀ ಸುಕನ್ಯ', 'ಕಪ್ಪು ಬಿಳುಪು', 'ಬೃಂದಾವನ', 'ಬೋರೆ ಗೌಡ ಬೆಂಗಳೂರಿಗೆ ಬಂದ', 'ಮರೆಯದ ದೀಪಾವಳಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್ ಅವರು, ಪ್ರತೀ ಪಾತ್ರದಲ್ಲೂ ಜೀವಿಸಿದ್ದರು, ಕನ್ನಡಿಗರ ಮನಸೂರೆಗೊಂಡಿದ್ದರು'' ಎಂದಿದ್ದಾರೆ ಎಚ್ಡಿ ಕುಮಾರಸ್ವಾಮಿ.

ಸಂತಾಪ ಸೂಚಿಸಿದ ನಿಖಿಲ್ ಕುಮಾರಸ್ವಾಮಿ
ನಟ ಹಾಗೂ ರಾಜಕಾರಣಿ ಆಗಿರುವ ನಿಖಿಲ್ ಕುಮಾರಸ್ವಾಮಿ ಸಹ ಹಿರಿಯ ನಟ ರಾಜೇಶ್ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದು, ''ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ 'ಕಲಾತಪಸ್ವಿ' ರಾಜೇಶ್ ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ.

ಡಿಕೆ ಶಿವಕುಮಾರ್ ಸಂತಾಪ
''ಹಿರಿಯ ಕನ್ನಡ ನಟ ಕಲಾತಪಸ್ವಿ ಶ್ರೀ ರಾಜೇಶ್ ಅವರ ನಿಧನವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ತಮ್ಮ ಅಮೋಘ ನಟನೆಯ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಶ್ರೀ ರಾಜೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಸಾಂತ್ವನ ಕೋರುತ್ತೇನೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಸಚಿವ ಆರ್ ಅಶೋಕ್ ಸಂತಾಪ
''ಹಿರಿಯ ನಟ, ಕಲಾತಪಸ್ವಿ ಡಾ.ರಾಜೇಶ್ (89) ಇಂದು ನಿಧನರಾಗಿದ್ದಾರೆ. ಉಸಿರಾಟ ಸೋಂಕಿನ ಸಮಸ್ಯೆಯಿಂದ ರಾಜೇಶ್ ಅವರು ಬಳಲುತ್ತಿದ್ದರು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು, ಸೊಸೆ ತಂದ ಸೌಭಾಗ್ಯ, ದೇವರದುಡ್ಡು, ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ'' ಎಂದು ಸಂತಾಪ ವ್ಯಕ್ತಪಡಿಸಿದ್ಆರೆ ಸಚಿವ ಆರ್ ಅಶೋಕ್.


Click it and Unblock the Notifications











