ಪ್ರೇಕ್ಷಕರು ಕನ್ನಡ ಸಿನಿಮಾ ನೋಡಲು ಹಿಂದೇಟು ಹಾಕಲು ಪ್ರಮುಖ ಕಾರಣ ಏನು?
ಕನ್ನಡ ಚಿತ್ರರಂಗ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ಬರದೇ ಚಿತ್ರಮಂದಿರಗಳನ್ನು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎನ್ನುವ ಕೂಗು ಪದೇ ಪದೆ ಕೇಳಿಬಂದರೂ ಯಾರು ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇದರಿಂದ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವರ್ಷಕ್ಕೆ 200ಕ್ಕೂ ಅಧಿಕ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತದೆ. ಈ ವರ್ಷ ಈಗಾಗಲೇ 70ಕ್ಕೂ ಅಧಿಕ ಸಿನಿಮಾಗಳು ಬಂದು ಹೋಗಿವೆ. ಅದರಲ್ಲಿ ಗೆಲುಗಿನ ದಡ ಸೇರಿದ್ದು ಮಾತ್ರ ಎರಡ್ಮೂರು ಸಿನಿಮಾಗಳು ಮಾತ್ರ. ಎಲೆಕ್ಷನ್, ಐಪಿಎಲ್ ಕಾರಣಕ್ಕೆ ಸದ್ಯಕ್ಕೆ ಯಾವುದೇ ದೊಡ್ಡ ಸಿನಿಮಾ ಥಿಯೇಟರ್ ಕಡೆ ಮುಖ ಮಾಡುತ್ತಿಲ್ಲ. ಈ ವರ್ಷ ಬಿಡುಗಡೆಗೆ ಸಜ್ಜಾಗಿರುವ ಮೂರ್ನಾಲ್ಕು ದೊಡ್ಡ ಸಿನಿಮಾಗಳು ಬಂದು ಹೋದ ಬಳಿಕ ಮತ್ತೆ ಥಿಯೇಟರ್ಗಳು ಪ್ರೇಕ್ಷಕರ ಬರ ಎದುರಿಸಬೇಕಾಗುತ್ತದೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಕ್ರೇಜ್ ಕಾರಣಕ್ಕೆ ಸಣ್ಣ ಸಿನಿಮಾಗಳನ್ನು ಮಾಡಲು ಸ್ಟಾರ್ ನಟರು ಒಪ್ಪುತ್ತಿಲ್ಲ. ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ವರ್ಷಗಳೇ ಬೇಕು ಎನ್ನುವಂತಾಗಿದೆ. ಸದ್ಯಕ್ಕೆ 'ಯುಐ', 'ಮಾರ್ಟಿನ್', 'ಮ್ಯಾಕ್ಸ್', 'ಭೀಮ' ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ. ಬಳಿಕ 'ಡೆವಿಲ್', 'ಕೆಡಿ', 'ಟಾಕ್ಸಿಕ್' ಸಿನಿಮಾಗಳು ಬರಬೇಕಿದೆ.
ಇನ್ನು ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ಸದ್ದು ಮಾಡಲು ಕಾದು ಕೂತಿವೆ. ಕನ್ನಡ ಸಿನಿಮಾಗಳು ಬರದೇ ಇದ್ದರೆ ಅನಿವಾರ್ಯವಾಗಿ ತೆಲುಗು, ತಮಿಳು ಚಿತ್ರಗಳು ಕರ್ನಾಟಕದ ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳುತ್ತವೆ. ದಿನದಿಂದ ದಿನಕ್ಕೆ ಸ್ಟಾರ್ ನಟರ ಸಂಭಾವೆ ಹೆಚ್ಚುತ್ತಿದೆ. ಪ್ರೊಡಕ್ಷನ್ ಕಾಸ್ಟ್ ಕೂಡ ದುಪ್ಪಟ್ಟಾಗುತ್ತಿದೆ. ಹಾಗಾಗಿ ದೊಡ್ಡ ನಿರ್ಮಾಪಕರು ಸಿನಿಮಾ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ದೊಡ್ಡ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾದರೆ ಬಂಡವಾಳ ವಾಪಸ್ ಬರುತ್ತಾ? ಎನ್ನುವ ಅನುಮಾನ ಶುರುವಾಗುತ್ತದೆ. ಹಾಗಾಗಿ ರಿಸ್ಕ್ ತೆಗೆದುಕೊಳ್ಳಲು ನಿರ್ಮಾಪಕರು ಸಿದ್ಧರಿಲ್ಲ. ಹೊಸ ನಿರ್ಮಾಪಕರೇ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಪ್ರೇಕ್ಷಕರು ಕನ್ನಡ ಸಿನಿಮಾ ನೋಡಲು ಬರುತ್ತಿಲ್ಲ. ಒಳ್ಳೆ ಸಿನಿಮಾ ಕೊಟ್ಟರೂ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಾರೆ ಎಂದು ಹೇಳುವವರು ಇದ್ದಾರೆ.
ರಾಜ್ಯದಲ್ಲಿ ಸಿನಿಮಾ ಟಿಕೆಟ್ ರೇಟ್ ಹೆಚ್ಚಾಗಿರುವುದು ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಹಿಂದು ಮುಂದು ನೋಡಲು ಒಂದು ಕಾರಣ ಎನ್ನಲಾಗುತ್ತಿದೆ. 200, 300 ರೂ. ಕೊಟ್ಟು ಪ್ರೇಕ್ಷಕರು ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಸಿದ್ಧರಿಲ್ಲ. ಕೆಲವೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಟಿಕೆಟ್ ರೇಟ್ ಮತ್ತಷ್ಟು ಹೆಚ್ಚಾಗುತ್ತದೆ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿಗಿಂತ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚು. ಕನ್ನಡ ಸಿನಿಮಾಗಳ ಹಿನ್ನಡೆಗೆ ಇದೂ ಒಂದು ಕಾರಣ ಎಂದು ಚಿತ್ರರಂಗದ ಮಂದಿ ಹೇಳುತ್ತಾರೆ.
ಒಂದು ಕುಟುಂಬದ ಐದಾರು ಜನ ಒಂದು ಸಿನಿಮಾ ನೋಡಲು 1500 ರೂ. ಟಿಕೆಟ್ಗಾಗಿ ವ್ಯಯಿಸಬೇಕು. ಇನ್ನು ಪಾರ್ಕಿಂಗ್, ಪಾಪ್ಕಾರ್ನ್ ಅಂತ 2000 ರೂ. ದಾಟುತ್ತದೆ. ಹಾಗಾಗಿ ಪ್ರೇಕ್ಷಕರು ಎಲ್ಲಾ ಸಿನಿಮಾಗಳನ್ನು ನೋಡಲ್ಲ. ಅಳೆದು ತೂಗಿ ಸಿನಿಮಾ ನೋಡಲು ಮುಂದಾಗುತ್ತಾರೆ. ಕೆಲವೊಮ್ಮೆ ಪರಭಾಷಾ ಸಿನಿಮಾಗಳನ್ನು ನೋಡುತ್ತಾರೆ. ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರಗಳಿಗೆ ಗರಿಷ್ಠ ಟಿಕೆಟ್ ದರ 200 ರೂ. ಇರಬೇಕು ಎಂದು ಹಿಂದೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು.
2017-18ನೇ ಸಾಲಿನ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಸಿನಿಮಾ ಟಿಕೆಟ್ 200 ರೂ. ಗರಿಷ್ಠ ದರ ಎಂದು ಹೇಳಿದ್ದರು. ಆದರೆ ಇಂದಿಗೂ ಅದು ಜಾರಿಗೆ ಬಂದಿಲ್ಲ. ಖುದ್ದು ಸಿಎಂ ಕುಟುಂಬ ಸದಸ್ಯರು 'ಬಾಹುಬಲಿ-2' ಸಿನಿಮಾ ವೀಕ್ಷಿಸಲು 1000 ರೂ. ಕೊಟ್ಟು ಟಿಕೆಟ್ ಖರೀಸಿದಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು.

ಟಿಕೆಟ್ ದರ ಇಳಿಸದ ಹೊರತು ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರನ್ನು ಪ್ರೇರೇಪಿಸುವುದು ಕಷ್ಟ ಎಂದು ನಿರ್ಮಾಪಕರೊಬ್ಬರು ಹೇಳುತ್ತಾರೆ. ಸದ್ಯ ತೆಲುಗಿನ 'ಕಲ್ಕಿ', 'ಗೇಮ್ ಚೇಂಜರ್', 'ಪುಷ್ಪ-2', ತಮಿಳಿನ 'ಕಂಗುವ' ರೀತಿಯ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ಸಿನಿಮಾಗಳ ರಿಲೀಸ್ ವೇಳೆ ಟಿಕೆಟ್ ದರ ಕರ್ನಾಟಕದಲ್ಲಿ 1000 ರೂ. ದಾಟುವ ನಿರೀಕ್ಷೆಯಿದೆ.


Click it and Unblock the Notifications











