Don't Miss!
- News ಚೊಂಬನ್ನು ಅರಗಿಸಿಕೊಳ್ಳಲಾಗದೇ ಬಿಜೆಪಿ ಪಿಕ್ಪಾಕೆಟ್ ಜಾಹೀರಾತು- ಡಿಕೆಶಿ ವಾಗ್ದಾಳಿ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ. ರಾಜ್ ಕುಮಾರ್ಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಸಂಸದರ ಪತ್ರ
ಕನ್ನಡದ ಹೆಮ್ಮೆಯ ಮೇರು ನಟ ಡಾ. ರಾಜ್ ಕುಮಾರ್ ಅವರ ಸಾಧನೆ ಅಸಾಮಾನ್ಯ. ಮನರಂಜನೆಯ ಜಗತ್ತಿನಲ್ಲಿದ್ದು ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದ ಕೆಲವೇ ಮಂದಿಯಲ್ಲಿ ರಾಜ್ ಕುಮಾರ್ ಒಬ್ಬರು. ಅದರಲ್ಲಿಯೂ ನಟರಾಗಿ, ಗಾಯಕರಾಗಿ ಹಾಗೂ ವ್ಯಕ್ತಿತ್ವದ ಮೂಲಕ ನಾಡಿನ ಮನೆ, ಮನಗಳನ್ನು ಅವರು ತಲುಪಿದವರು. ಭಾರತದ ಯಾವ ನಟನೂ ಮಾಡದ ಅನೇಕ ಸಾಧನೆಗಳು ಅಣ್ಣಾವ್ರ ಹೆಸರಿನಲ್ಲಿವೆ.
Recommended Video
ಭಾಷೆ ಮತ್ತು ಸಂಸ್ಕೃತಿಗೆ ಮಹತ್ತರ ಕೊಡುಗೆ ನೀಡಿರುವ ಡಾ. ರಾಜ್ ಕುಮಾರ್ ಅವರಿಗೆ ಸಂದಿರುವ ಪ್ರಶಸ್ತಿ, ಸನ್ಮಾನ, ಬಿರುದುಗಳು ಒಂದೆರಡಲ್ಲ. ಆದರೆ ಅವರಿಗೆ ದೇಶದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಸಿಗಬೇಕು ಎನ್ನುವುದು ಅನೇಕರ ಅಭಿಪ್ರಾಯವಾಗಿತ್ತು. ಅದಕ್ಕೆ ರಾಜ್ಯಸಭಾ ಸಂಸದ ಜಿ.ಸಿ. ಚಂದ್ರಶೇಖರ್ ದನಿಗೂಡಿಸಿದ್ದಾರೆ. ಈ ಸಂಬಂಧ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಮುಂದೆ ಓದಿ.
ರಾಜ್ ಕುಮಾರ್ ಅಪಹರಣವಾದ ಸಮಯದಲ್ಲಿ ವಿಷ್ಣುದಾದ ಹೇಳಿದ್ದ ಮಾತುಗಳಿವು...
ಮರಣೋತ್ತರ ಭಾರತ ರತ್ನ
ಕರ್ನಾಟಕ ಸಾಂಸ್ಕೃತಿಕ ರಾಯಭಾರಿಗಳಾದ, ಅಭಿಮಾನಿಗಳನ್ನು ದೇವರು ಎಂದಿದ್ದ ಮೇರು ನಟ ಡಾ.ರಾಜ್ ಕುಮಾರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ವನ್ನು ಮರಣೋತ್ತರವಾಗಿ ನೀಡಬೇಕೆಂದು ಮಾನ್ಯ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಕಲಾಪ್ರಿಯರಿಗೆ ಮಾದರಿ
ಕನ್ನಡಿಗರ ಆರಾದ್ಯ ದೈವ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರು ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ 'ಭಾರತ ರತ್ನ' ನೀಡುವಂತೆ ಮನವಿ ಮಾಡುತ್ತೇನೆ. ಅವರು ಕರ್ನಾಟಕದ ಜನರಿಗೆ ಮಾತ್ರ ಮಾದರಿಯಲ್ಲ, ಅನೇಕ ಕಲಾ ಪ್ರಿಯರಿಗೂ ಮಾದರಿಯಾಗಿದ್ದರು.
ಸಿನಿಮಾಗಳಿಂದ ಪ್ರಭಾವ
206ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಡಾ. ರಾಜ್ ಕುಮಾರ್, 40 ವರ್ಷಗಳಲ್ಲಿ ರಾಜ್ಯದ ಸಿನಿಮಾ ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಅನೇಕ ಬಗೆಯ ಪಾತ್ರಗಳಲ್ಲಿ ನಟಿಸಿರುವ ಅವರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ, ಯೋಗದಲ್ಲಿ ಪರಿಣತ, ಪಿಎಚ್ಡಿ ಮಾಡುವ ವಿದ್ಯಾರ್ಥಿಗಳಿಗೆ ಅದ್ಭುತ ವಸ್ತುವಾಗಿದ್ದರು. ಜಗತ್ತಿನಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ. ಪೌರಾಣಿಕದಿಂದ ಸಾಮಾಜಿಕ ಕಳಕಳಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಉದಾಹರಣೆಗೆ 'ಬಂಗಾರದ ಮನುಷ್ಯ' ಚಿತ್ರ ನೋಡಿದ ಅನೇಕ ಯುವಕರು ತಮ್ಮ ಹಳ್ಳಿಗಳಿಗೆ ನಗರದಿಂದ ಮರಳಿ ಕೃಷಿಗೆ ಹಿಂದಿರುಗಿದ್ದರು. 'ಜೀವನ ಚೈತ್ರ' ಸಿನಿಮಾ ನೋಡಿ ಕುಡಿತದ ವಿರುದ್ಧ ಜನರು ಪ್ರಭಾವಿತರಾಗಿದ್ದರು. ಅವರ ಅಪಾರ ಅಭಿಮಾನಿಗಳು ಮದ್ಯಪಾನ ತ್ಯಜಿಸಿದ್ದರು.
ಜನರಿಗೆ ಮಾದರಿಯಾಗಿದ್ದರು
ಜನರು, ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ಡಾ. ರಾಜ್, ಪರಸ್ಪರ ಸಹಾಯ ಪ್ರವೃತ್ತಿ ಬೆಳೆಸಲು ಕರೆ ನೀಡಿದ್ದರು. ತಮ್ಮ ಸಾವಿನ ಬಳಿಕ ಕಣ್ಣುಗಳನ್ನು ದಾನ ಮಾಡುವ ಮೂಲಕ ಅದಕ್ಕೆ ಉದಾಹರಣೆ ನೀಡಿದ್ದರು. ಅವರ ಈ ಅಪೂರ್ವ ನಡೆಯಿಂದ ಪ್ರಭಾವಿತರಾದ ಸಾವಿರಾರು ಜನರು ನೇತ್ರದಾನ ಮಾತ್ರವಲ್ಲ, ಇತರೆ ಅಂಗಾಂಗ ದಾನವನ್ನೂ ಮಾಡಿದ್ದಾರೆ.
ಚಿತ್ರರಂಗದ ಬಗ್ಗೆ ಆ ಕಾಲದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು ಡಾ. ರಾಜ್ ಕುಮಾರ್
ಸಾಂಸ್ಕೃತಿಕ ರಾಯಭಾರಿ
ತಮ್ಮ ಸಿನಿಮಾಗಳಲ್ಲಾಗಲೀ, ನಿಜ ಜೀವನದಲ್ಲಾಗಲೀ ಡಾ. ರಾಜ್ ಮದ್ಯಪಾನ, ದೂಮಪಾನ, ಮಾದಕ ವಸ್ತು ಬಳಕೆ ಅಥವಾ ಯಾವುದೇ ಸಮಾಜ ವಿರೋಧಿ ಚಟುವಟಿಕೆಗಳನ್ನು ವೈಭವೀಕರಿಸಿರಲಿಲ್ಲ. ಯುವಜನರಿಗೆ ಉತ್ತಮ ಸಾಮಾಜಿಕ ಸಂದೇಶಗಳನ್ನು ನೀಡುತ್ತಿದ್ದರು. ರಾಜ್ಯ, ಜನರು, ಭಾಷೆ ವಿಚಾರದಲ್ಲಿ ಸಮಸ್ಯೆ ಬಂದಾಗ ಅವರು ಸಾಂಸ್ಕೃತಿಕ ರಾಯಭಾರಿಯಂತೆ ನಿಲ್ಲುತ್ತಿದ್ದರು. ಈಗಲೂ ಬಹುತೇಕ ಕನ್ನಡಿಗರು ಅವರನ್ನು ತಮ್ಮ ಜೀವನದ ಮಾದರಿ ಎಂದೇ ಪರಿಗಣಿಸಿದ್ದಾರೆ.
ಭಾರತದಲ್ಲಿಯೇ ವಿಶಿಷ್ಟ ನಟ
ಭಾರತೀಯ ಚಿತ್ರರಂಗದಲ್ಲಿಯೇ ಡಾ. ರಾಜ್ ಕುಮಾರ್ ವಿಶಿಷ್ಟ ನಟ. ಅತಿ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದದ್ದಾರೆ. ಕರ್ನಾಟಕದ ವಿವಿಧೆಡೆ ಅವರ ಅತಿ ಹೆಚ್ಚು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. 1983ರಲ್ಲಿ ಅವರಿಗೆ ಪದ್ಮಭೂಷಣ ನೀಡಲಾಗಿತ್ತು. 1992ರಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಗೌರವ 'ಕರ್ನಾಟಕ ರತ್ನ'ವನ್ನು ನೀಡಲಾಗಿತ್ತು. 1995ರಲ್ಲಿ ಭಾರತ ಸರ್ಕಾರ ಅವರಿಗೆ 'ದಾದಾ ಸಾಹೇಬ್ ಫಾಲ್ಕೆ' ಪುರಸ್ಕಾರ ನೀಡಿತ್ತು. 1985ರಲ್ಲಿ ಅಮೆರಿಕದ ಕೆಂಟುಕಿ ರಾಜ್ಯದ ಗವರ್ನರ್ ಬೆಂಗಳೂರಿನಲ್ಲಿ 'ಕೆಂಟುಕಿ ಕರ್ನಲ್ ಅವಾರ್ಡ್' ನೀಡಿದ್ದರು.
ಎಂಜಿ ರಾಮಚಂದ್ರನ್, ಸತ್ಯಜಿತ್ ರೇ, ಲತಾ ಮಂಗೇಷ್ಕರ್, ಭೂಪೇನ್ ಹಜಾರಿಕಾ ಅವರಂತಹ ಹೆಸರಾಂತ ಸಿನಿಮಾ ವ್ಯಕ್ತಿಗಳಿಗೆ ಅವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಭಾರತ ರತ್ನವನ್ನು ನೀಡಲಾಗಿದೆ.
ಅತಿ ಎತ್ತರದ ವ್ಯಕ್ತಿತ್ವ
ಇಡೀ ಸಿನಿಮಾ ರಂಗದಲ್ಲಿ ತಮ್ಮ ಸರಳತೆ, ನಡತೆ, ಸಾಮಾಜಿಕ ಕಾಳಜಿ, ನಿಸ್ವಾರ್ಥತೆಯಿಂದ ಡಾ. ರಾಜ್ ವಿಭಿನ್ನವಾಗಿ ನಿಲ್ಲುತ್ತಾರೆ. ನಟನೆ ಮತ್ತು ಗಾಯನದಲ್ಲಿ ಎಲ್ಲ ಸಮಕಾಲೀನರಿಗಿಂತಲೂ ಎತ್ತರದಲ್ಲಿ ನಿಲ್ಲುತ್ತಾರೆ. ಅವರ ಬಗ್ಗೆ ಕೇಳಿದವರು, ಚರ್ಚಿಸಿದವರು ಅಥವಾ ತಿಳಿದುಕೊಂಡವರು ಅವರನ್ನು ಪ್ರೀತಿಸದೆ ಇರಲಾರರು. ಭಾರತೀಯ ಚಿತ್ರರಂಗ ನೋಡಿರುವ ಅತಿ ಎತ್ತರದ ವ್ಯಕ್ತಿತ್ವ ಡಾ. ರಾಜ್ ಕುಮಾರ್ ಅವರದು.
ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದೇನೆ
ಕರ್ನಾಟಕ, ಕರ್ನಾಟಕದ ಜನರು ಹಾಗೂ ಭಾರತೀಯ ಸಿನಿಮಾಕ್ಕೆ ನೀಡಿರುವ ಡಾ. ರಾಜ್ ಅವರ ಸಾಧನೆಗಳು, ಯಶಸ್ಸು, ಕಾಣಿಕೆ ಮತ್ತು ಅತ್ಯಂತ ಸಂಕ್ಷಿಪ್ತವಾಗಿ ಉಲ್ಲೇಖಿಸಲು ಪ್ರಯತ್ನಿಸಿದ್ದೇನೆ. ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಹೀಗಾಗಿ ಡಾ. ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ನೀಡಬೇಕು ಎಂದು ಕೇಳುತ್ತೇನೆ ಎಂಬುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಅಣ್ಣಾವ್ರ ಬಗ್ಗೆ ಅವರ ತಂದೆ ನುಡಿದದ್ದು ಎಷ್ಟು ಸತ್ಯವಾಯಿತು