ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಘೋಷಿಸಿ ಗೌರವಿಸಿದೆ. 72ನೇ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.
ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಕಟಿಸಲಾಗಿದೆ. ಎಸ್ಪಿಬಿ ಅವರಿಗೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಈಗ ಪದ್ಮವಿಭೂಷಣ ಸಹ ಎಸ್ಪಿಬಿ ಮುಡಿಗೇರಿದೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ನೀಡಿದಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಂತಸ ವ್ಯಕ್ತಪಡಿಸಿದ್ದಾರೆ. 'ಪ್ರಶಸ್ತಿಗೆ ಗೌರವ ಹೆಚ್ಚಿಸುವ ಪ್ರತಿಭೆ ಹಾಗೂ ವ್ಯಕ್ತಿತ್ವ ಅವರದಾಗಿತ್ತು' ಎಂದು ಖುಷಿ ಹಂಚಿಕೊಂಡಿದ್ದಾರೆ.

''ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ ತಾಯಿ ಶಾರದೆಯ ವರಪುತ್ರ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ಸಂದಿರುವುದು ಅತೀವ ಸಂತೋಷವನ್ನು ತಂದಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಜೀವಂತ ಇರುವ ಗಾನ ಮಾಂತ್ರಿಕನಿಗೆ ಯಾವ ಪ್ರಶಸ್ತಿಯೂ ಕಡಿಮೆಯೇ. ಪ್ರಶಸ್ತಿಗೆ ಗೌರವ ಹೆಚ್ಚಿಸುವ ಪ್ರತಿಭೆ ಹಾಗೂ ವ್ಯಕ್ತಿತ್ವ ಅವರದಾಗಿತ್ತು'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.
ಎಸ್ಪಿಬಿ ಜೊತೆಗೆ ಜಪಾನ್ ದೇಶ ಮಾಜಿ ಪ್ರಧಾನಿ ಶಿಂಜೋ ಅಬೆ, ಡಾ.ಬೆಳ್ಳೆ ಮೋನಪ್ಪ ಹೆಗ್ಡೆ (ವೈದ್ಯಕೀಯ) ಮರಳು ಶಿಲ್ಪಿ ಸುದರ್ಶನ್ ಸಾಹೋ, ವಾಸ್ತುಶಿಲ್ಪಿ ಬಿಬಿ ಲಾಲ್, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ನರೀಂದರ್ ಸಿಂಗ್ ಕಪನಿ (ಮರಣೋತ್ತರ), ಆಧಾತ್ಮ ಕ್ಷೇತ್ರದಲ್ಲಿ ಮೌಲಾನಾ ವಹಿದುದ್ದೀನ್ ಖಾನ್ ಅವರಿಗೂ ಪದ್ಮವಿಭೂಷಣ ನೀಡಲಾಗುತ್ತಿದೆ.
ವಿವಿಧ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು
ಪದ್ಮವಿಭೂಷಣ: ಡಾ. ಬಿ. ಎಂ ಹೆಗ್ಡೆ (ವೈದ್ಯಕೀಯ)
ಪದ್ಮ ಭೂಷಣ: ಡಾ. ಚಂದ್ರಶೇಖರ ಕಂಬಾರ (ಸಾಹಿತ್ಯ ಮತ್ತು ಶಿಕ್ಷಣ)
ಪದ್ಮಶ್ರೀ: ಮಾತಾ ಬಿ ಮಂಜಮ್ಮ ಜೋಗತಿ (ಕಲೆ)
ಪದ್ಮಶ್ರೀ: ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್ (ಸಾಹಿತ್ಯ ಮತ್ತು ಶಿಕ್ಷಣ)
ಪದ್ಮಶ್ರೀ: ಕೆವೈ ವೆಂಕಟೇಶ್ (ಕ್ರೀಡೆ)
ಅಂದ್ಹಾಗೆ, ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು 2020 ಸೆಪ್ಟೆಂಬರ್ 25 ರಂದು ಚೆನ್ನೈ ಎಂಜಿಎಂ ಹೆಲ್ತ್ ಕೇರ್ನಲ್ಲಿ ನಿಧನರಾದರು. ಕೊರೊನಾ ವೈರಸ್ ತಗುಲಿದ ಕಾರಣ ಆಸ್ಪತ್ರೆಗೆ ದಾಖಲಾದ ಎಸ್ಪಿಬಿ ಸುಮಾರು 50 ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಂತಿಮವಾಗಿ ಗುಣಮುಖರಾಗದೇ ವಿಧಿವಶರಾದರು.


Click it and Unblock the Notifications











