ಮುತ್ತಪ್ಪ ರೈ ಕುಟುಂಬದಿಂದ ಆಕ್ಷೇಪ: 'ಎಂಆರ್' ಹೆಸರು ಕೈಬಿಟ್ಟ ರವಿ ಶ್ರೀವತ್ಸ
ಮುತ್ತಪ್ಪ ರೈ ಜೀವನ ಆಧರಿಸಿದ 'ಎಂಆರ್' ಸಿನಿಮಾವನ್ನು ನಿರ್ದೇಶಕ ರವಿ ಶ್ರೀವತ್ಸ ಈಗಾಗಲೇ ಪ್ರಾರಂಭಿಸಿದ್ದರು. ಅದ್ಧೂರಿಯಾಗಿ ಫೊಟೊಶೂಟ್ ಸಹ ಮಾಡಲಾಗಿತ್ತು. ಚಿತ್ರೀಕರಣಕ್ಕೆ ಸಕಲ ಯೋಜನೆ ಸಿದ್ಧವಾಗಿತ್ತು, ಅಷ್ಟರಲ್ಲಿ ಅಡ್ಡಿಯೊಂದು ಎದುರಾಯ್ತು.
ಮುತ್ತಪ್ಪ ರೈ ಜೀವನ ಕುರಿತ ಸಿನಿಮಾ, ವೆಬ್ ಸರಣಿಗಳನ್ನು ಮಾಡುವಂತಿಲ್ಲ, ಹಾಗೊಮ್ಮೆ ಸಿನಿಮಾ, ಧಾರಾವಾಹಿ, ವೆಬ್ ಸರಣಿ, ಡಾಕ್ಯುಮೆಂಟರಿ ಮಾಡಬೇಕೆಂದರೆ ಮುತ್ತಪ್ಪ ರೈ ಅವರ ಕುಟುಂಬದ ಅನುಮತಿ ಪಡೆಯಬೇಕು ಎಂದು ಮುತ್ತಪ್ಪ ರೈ ಆಪ್ತರಾಗಿದ್ದ ನಿರ್ಮಾಪಕ ಪದ್ಮನಾಭ ಅವರು ಬಾಂಬ್ ಸಿಡಿಸಿದರು.
ಪದ್ಮನಾಭ್ ಅವರ ಆಕ್ಷೇಪಣೆ ಬಳಿಕ ಮಾತನಾಡಿದ್ದ ಸಿನಿಮಾದ ನಿರ್ಮಾಪಕಿ ಶೋಭಾ ರಾಜಣ್ಣ, 'ನಾವು ಸಿನಿಮಾವನ್ನು ನಿಲ್ಲಿಸುವುದಿಲ್ಲ' ಎಂದಿದ್ದರು. ಆದರೆ ನಂತರ ಮುತ್ತಪ್ಪ ರೈ ಪುತ್ರ ವಿಕ್ಕಿ ರೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಮುತ್ತಪ್ಪ ರೈ ಜೀವನವನ್ನು ಸಿನಿಮಾ ಮಾಡಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದರು. ನಂತರ 'ಎಂಆರ್' ಚಿತ್ರತಂಡ ತನ್ನ ನಿರ್ಧಾರ ಬದಲಾಯಿಸಿದೆ.

'ಎಂಆರ್' ಹೆಸರು ಬದಲಾಯಿಸಿದ ಚಿತ್ರತಂಡ
ಚಿತ್ರತಂಡ ಹೇಳಿರುವ ಪ್ರಕಾರ, ಸಿನಿಮಾದ ಹೆಸರನ್ನು 'ಎಂಆರ್' ನಿಂದ 'ಡಿಆರ್' ಎಂದು ಬದಲಾಯಿಸಲಾಗಿದೆ. ಅಷ್ಟೇ ಅಲ್ಲದೆ, ಸಿನಿಮಾದಲ್ಲಿ ಮುತ್ತಪ್ಪ ರೈ ಹೆಸರು ಬಳಸುವುದಿಲ್ಲ ಹಾಗೂ ಸಿನಿಮಾವು ಮುತ್ತಪ್ಪ ರೈ ಜೀವನ ಆಧರಿಸಿದ ಸಿನಿಮಾ ಆಗಿರುವುದಿಲ್ಲ ಎಂದಿದೆ.

ಎಂಆರ್ ನನ್ನ ಕನಸಿನ ಕೂಸು: ರವಿ ಶ್ರೀವತ್ಸ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಶ್ರೀವತ್ಸ, 'ಎಂಆರ್ ನನ್ನ ಕನಸಿನ ಕೂಸು. ಈ ಚಿತ್ರಕ್ಕಾಗಿ 20 ವರ್ಷಗಳ ಕಾಲ ಶ್ರಮಪಟ್ಟಿದ್ದೇನೆ. ಈ ಚಿತ್ರಕ್ಕಾಗಿ ನಾನು ಮತ್ತು ನನ್ನ ಗುರುಗಳಾದ ರವಿ ಬೆಳಗೆರೆ ಕಥೆ ಬರೆದು ರೈ ಎಂದು ಹೆಸರಿಟ್ಟಿದ್ದೆವು. ನಾಯಕನಾಗಿ ಉಪೇಂದ್ರ ನಟಿಸಬೇಕಿತ್ತು. ದಿನೇಶ್ ಬಾಬು ಅವರು ನಿರ್ದೇಶಿಸಬೇಕಿತ್ತು. ಕಥೆಗಾಗಿ ನಾನು ಮುತ್ತಪ್ಪ ರೈ ಅವರನ್ನು ಭೇಟಿ ಮಾಡಲು ಸಿಡ್ನಿಗೆ ಹೋಗಿದ್ದೆ. ಆದರೆ ಆಗ ಅವರ ಮಾತಿನಿಂದಲೇ ಈ ಸಿನಿಮಾ ನಿಲ್ಲಿಸಬೇಕಾಯಿತು' ಎಂದರು.

ಅದೇ ಚಿತ್ರತಂಡದೊಂದಿಗೆ 'ಡಿಆರ್' ಸಿನಿಮಾ
'ಎಂಆರ್' ಗೆ ಆಯ್ಕೆ ಆಗಿದ್ದ ಅದೇ ಚಿತ್ರತಂಡದೊಂದಿಗೆ 'ಡಿಆರ್' ಸಿನಿಮಾ ಮುಂದುವರೆಸುವುದಾಗಿ ಹೇಳಿದ್ದಾರೆ ರವಿ ಶ್ರೀವತ್ಸ. ಅಷ್ಟೇ ಅಲ್ಲದೆ, ನಿರ್ಮಾಪಕ ಪದ್ಮನಾಭ ಅವರ ಮುತ್ತಪ್ಪ ರೈ ಜೀವನ ಆಧರಿಸಿದ ಸಿನಿಮಾ ಬಿಡುಗಡೆ ದಿನವೇ ತಮ್ಮ ಸಿನಿಮಾ ಘೋಷಣೆ ಮಾಡುತ್ತಾರಂತೆ ರವಿ.
Recommended Video

ತಂಡ ಅದೇ ಆಗಿರಲಿದೆ
'ಎಂಆರ್' ಸಿನಿಮಾಕ್ಕೆ ನಿರ್ಮಾಪಕ ಮಗ ದೀಕ್ಷಿತ್ ನಾಯಕರಾಗಿದ್ದರು, ಡಿಆರ್ ಸಿನಿಮಾಕ್ಕೂ ಅವರೇ ನಾಯಕರಾಗಿ ಮುಂದುವರೆಯಲಿದ್ದಾರೆ. ನಾಯಕಿಯಾಗಿ ಕೇರಳದ ಸುಂದರಿ ಸೌಮ್ಯ ಮೆನನ್ ಅನ್ನು ಕರೆತರಲಾಗಿತ್ತು. ಅವರೂ ಸಹ ಡಿಆರ್ ಸಿನಿಮಾದಲ್ಲಿ ಮುಂದುವರೆಯಲಿದ್ದಾರೆ.


Click it and Unblock the Notifications











