ಕೇವಲ 'ಒಂದೇ ವಾರ'ಕ್ಕೆ ಬಿತ್ತು 'ರಂಗನಾಯಕ'ನಿಗೆ ತೆರೆ ; ಯಾಕಿಂಗಾಯ್ತು 'ಗುರು'..?
'ಗುರುಪ್ರಸಾದ್ ' ಗೊತ್ತಲ್ಲವಾ..? ಕನ್ನಡ ಚಿತ್ರರಂಗದ ಸ್ವಯಂ ಘೋಷಿತ 'ಸರಸ್ವತಿ ಪುತ್ರ'. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದ 'ಗುರು' ಅವರನ್ನ ನೋಡಿ ಈಗ ಸಮಾಜವೇ 'ಲೇವಡಿ' ಮಾಡುತ್ತಿದೆ. ಇದಕ್ಕಿಂತ ದುರಂತ ಇನ್ನೆಲ್ಲಿದೆ.
ಹೌದು, ಕಳೆದ ವಾರವಷ್ಟೇ ತೆರೆಗೆ ಬಂದಿದ್ದ 'ರಂಗನಾಯಕ', ಕೇವಲ ಒಂದು ವಾರಕ್ಕೆ ಕಾಲೆತ್ತುಕೊಂಡಿದೆ. ನಂಬಲು ಅಸಾಧ್ಯವಾದರೂ ಇದು ಸತ್ಯ. 'ಒಂದು' ಚಿತ್ರಮಂದಿರವನ್ನ ಹೊರತು ಪಡಿಸಿದರೆ, ನಾಳೆಯಿಂದ ಸಂಪೂರ್ಣ ಬೆಂಗಳೂರು ಸುತ್ತಾಡಿದರೂ, ಈ 'ರಂಗನಾಯಕ'ನ 'ದರ್ಶನ'ವಾಗುವುದಿಲ್ಲ. ಹಾಗಂಥ ರಂಗನಾಯಕನ 'ಖಾಲಿ-ಪೋಲಿ' ಕಥೆಯನ್ನ ಹೇಗಾದರೂ ಮಾಡಿ ನೋಡಲೇಬೇಕೆಂದು 'ರಾಜ್ಯ' ಪ್ರವಾಸ ಕೈಗೊಳ್ಳುವಂತೆ ಇಲ್ಲ. ಯಾಕೆಂದರೆ ರಾಜ್ಯದ ಬಹುತೇಕ ಕಡೆ ರಂಗನಾಯಕ 'ಕಾಣೆಯಾಗಿದ್ದಾನೆ'. ಉದಾಹರಣೆಗೆ ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು

ಹಾಗೇ ನೋಡಿದರೆ ರಂಗನಾಯಕ ಚಿತ್ರದ ಮೇಲೆ ಬೆಟ್ಟದಷ್ಟು 'ನಿರೀಕ್ಷೆ'ಗಳಿದ್ದವು. ಇದಕ್ಕೆ ನವರಸ ನಾಯಕ ಜಗ್ಗೇಶ್ ಹಾಗೂ ಗುರು ಪ್ರಸಾದ್ 'ಹದಿನೈದು ವರ್ಷ'ಗಳ ನಂತರ ಒಂದಾಗಿದ್ದಾರೆ ಅನ್ನುವುದು ಒಂದು ಕಾರಣವಾದರೆ, ಗುರುಪ್ರಸಾದ್ ಚಿತ್ರದ ಬಿಡುಗಡೆಯ ಮುಂಚೆ ಮಾತನಾಡಿದ್ದ 'ಮಾತು'ಗಳು ಇನ್ನೊಂದು ಕಾರಣ. ಹೀಗಾಗಿ''ರಂಗನಾಯಕ'' ಮೂಲಕ ನಿಜಕ್ಕೂ ಗುರುಪ್ರಸಾದ್ ಬೇರೆ ಏನ್ನನ್ನೋ ಮಾಡಿಬಿಟ್ಟಿದ್ದಾರೆ ಎನ್ನುವ ಭಾವನೆ ಬಹುತೇಕರಲ್ಲಿ ಇತ್ತು. ಆದರೆ ಮೊದಲ ದಿನದ ಮೊದಲ ಶೋ ಮುಗಿಯುವಷ್ಟರಲ್ಲಿಯೇ ರಂಗನಾಯಕನ 'ಜಾತಕ'ದಲ್ಲಿ 'ದೋಷ' ಇರುವ ವಿಚಾರ ಜಗಜ್ಜಾಹೀರಾಗಿತ್ತು.
ನೋ ಡೌಟ್. ಗುರು ಪ್ರಸಾದ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಯೇ ಸಿನಿಮಾ ಮಾಡಬೇಕಿಲ್ಲ. ಗಟ್ಟಿಯಾದ 'ಕಥೆ'ಯೊಂದು ಇದ್ದರೆ ಸಾಕು ಎಂಬ ಮಾತನ್ನ ಸಾಬೀತು ಮಾಡಿದ್ದವರು. ಜನಮೆಚ್ಚುಗೆಯ ಚಿತ್ರವನ್ನು ಕಟ್ಟಿನಿಲ್ಲಿಸಬಹುದು ಅನ್ನೋದನ್ನು ತೋರಿಸಿಕೊಟ್ಟವರು ಗುರುಪ್ರಸಾದ್ .
ಇನ್ನೂ ಬೆಸಿಕಲಿ 'ಸಂಭಾಷಣೆ'ಕಾರನಾಗಿರುವ ಗುರುಪ್ರಸಾದ್ ಅದ್ಭುತ 'ಮಾತುಗಾರ' ಕೂಡ ಹೌದು. ತಮ್ಮ ಮಾತುಗಳಿಂದ ಎಂಥವರನ್ನೂ ಮೋಡಿ ಮಾಡಬಲ್ಲ ಸಾಮರ್ಥ್ಯ ಇವರಲ್ಲಿದೆ. ಇದಕ್ಕೆ ಪೂರಕವಾಗಿ ದ್ವಂದ್ವಾರ್ಥ ಅಂದರೆ ಬರಿಯ ಪೋಲಿ ಮಾತಲ್ಲ ಅಂತಾ ಹೇಳಿಕೊಟ್ಟವರು ಗುರುಪ್ರಸಾದ್ .

ಇಂಥ ಗುರುಪ್ರಸಾದ್ ಎಲ್ಲಿ ಎಡವಿದರೋ ಗೊತ್ತಿಲ್ಲ. ಆದರೆ 'ಪ್ರತಿಭೆ'ಯನ್ನ ಪಕ್ಕಕ್ಕೆ ಇಟ್ಟು 'ತಲೆ ಹರಟೆ'ಯನ್ನ ಗುರು ಪ್ರಸಾದ್ ಜಾಸ್ತಿ ಮಾಡಿದ್ದರ ಪರಿಣಾಮವೇ ರಂಗನಾಯಕನ 'ಸೋಲು' ಅನ್ನುವ ಮಾತು ಬೆಂಗಳೂರಿನ ಹೊಸಕೆರೆಹಳ್ಳಿಯಿಂದ ಹಿಡಿದು ಮಲ್ಲೇಶ್ವರಂವರೆಗೆ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಆರಂಭದ 'ಮಠ' ಮತ್ತು 'ಎದ್ದೇಳು ಮಂಜುನಾಥ' ಅನ್ನೋ ಎರಡು ಸಿನಿಮಾಗಳನ್ನು ಬಿಟ್ಟರೆ ಮಿಕ್ಕಂತೆ ಗುರು ಪ್ರಸಾದ್ ಸದ್ದು ಮಾಡಿದ್ದು ಬರೀ 'ವಿವಾದ'ಗಳಿಂದನೇ. ಇನ್ನಾದರೂ ಗುರುಪ್ರಸಾದ್ ಎಚ್ಚೆತ್ತುಕೊಳ್ಳಬೇಕಿದೆ. ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯಾಕೆಂದರೆ ಪ್ಯಾನ್ ಇಂಡಿಯಾ ಹಿಂದೆ ಎಲ್ಲರೂ ಓಡುತ್ತಿರುವ ಈ ಸಮಯದಲ್ಲಿ, ಕನ್ನಡ ಚಿತ್ರರಂಗಕ್ಕೆ ಗುರು ಪ್ರಸಾದ್ ಅವರ ಅವಶ್ಯಕತೆ ಇದೆ.


Click it and Unblock the Notifications











