ಶಿವರಾಜ್ ಕುಮಾರ್ ನಾಡದ್ರೋಹಿ ಎಂದ ಮುಖ್ಯಮಂತ್ರಿ ಚಂದ್ರು..!
ಕಮಲ್ ಹಾಸನ್ ಹಚ್ಚಿದ ಭಾಷಾ ಕಿಡಿಗೆ ಕನ್ನಡಿಗರ ಮನಸ್ಸು ಕಾಡುಬೇಗೆಯಂತೆ ಧಗಧಗಿಸುತ್ತಿದೆ. ಆಡಿದ ಮಾತುಗಳಿಗೆ ಕಮಲ್ ಹಾಸನ್ ಕೂಡಲೇ ಕ್ಷಮೆ ಕೇಳಬೇಕೆಂಬ ಕೂಗು ಅಷ್ಟದಿಕ್ಕುಗಳಿಂದ ಕೇಳಿ ಬರುತ್ತಿದೆ. ಆದರೆ ಕಮಲ್ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬದಲಿಗೆ ತಾನಾಡಿದ್ದೇ ವೇದ ವಾಕ್ಯ ಎಂಬಂತೆ ದುರಂಹಕಾರದ ಪ್ರದರ್ಶನ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡಿಗರ ಆಕ್ರೋಶವನ್ನು ಇನ್ನೂ ಹೆಚ್ಚಿಸುತ್ತಿದ್ದಾರೆ.
ಇನ್ನು, ಕಮಲ್ ಹಾಸನ್ ಅವತ್ತು ಮಾತನಾಡಿದಾಗ ಶಿವಣ್ಣ ಅಲ್ಲಿಯೇ ಕೂಗಳತೆಯ ದೂರದಲ್ಲಿ ಇದ್ದರು. ಆದರೂ ಕೂಡ ಶಿವಣ್ಣ ಅಲ್ಲಿ ಮಾತನಾಡಲಿಲ್ಲ. ಶಿವಣ್ಣ ಅವರ ಈ ನಡೆ ಕೂಡ ಹಲವರನ್ನು ಕೆರಳಿಸಿದೆ. ಕಮಲ್ ಹಾಸನ್ ಅವತ್ತು ಅಲ್ಲಿ ಹೇಳಿದ್ದು ಗೊತ್ತಾಗಲಿಲ್ಲ ಎಂದು ಶಿವಣ್ಣ ಎಷ್ಟೇ ಸಮಜಾಯಿಷಿಯನ್ನು ನೀಡಿದರು ಕೂಡ ಶಿವಣ್ಣ ಅವರ ಮಾತುಗಳನ್ನು ಕೇಳುವ ಮನಸ್ಥಿತಿ ಬಹುತೇಕರಲ್ಲಿ ಇಲ್ಲ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಮತ್ತೊಂದು ಕಡೆ ಕಿಶೋರ್, ರಮ್ಯಾ ಸೇರಿ ಕೆಲವರು ಕಮಲ್ ಹಾಸನ್ ಪರ ವಕಾಲತ್ತನ್ನು ಕೂಡ ವಹಿಸುತ್ತಿದ್ದಾರೆ. ಕಮಲ್ ಹಾಸನ್ ಮಾತನಾಡಿದ್ದರಲ್ಲಿ ತಪ್ಪು ಇಲ್ಲ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ.
ರಮ್ಯಾ ದ್ರಾವಿಡ ಭಾಷೆಯ ಅಡಿಯಲ್ಲಿಯೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಬರುತ್ತವೆ ಎಂದು ಹೇಳಿದ್ದಾರಾದರೂ ಕಮಲ್ ಹಾಸನ್ ಅವರ ಚಿತ್ರವನ್ನು ಬ್ಯಾನ್ ಮಾಡುವುದು ಅತಿರೇಕ ಎಂದು ಹೇಳಿದ್ದಾರೆ. ಇನ್ನು ಕಿಶೋರ್ ಅವರು ಮಾತನಾಡಿದ್ದರಲ್ಲಿ ತಪ್ಪೇನು, ಕನ್ನಡಕ್ಕೆ ಅದರಿಂದ ಹೇಗೆ ಅವಮಾನವಾಗುತ್ತೆ ಎಂದು ಕೇಳಿದ್ದಾರೆ.
ಇವರ ಈ ಮಾತುಗಳಿಂದ ಈ ವಿವಾದಕ್ಕೆ ಇನ್ನು ತುಪ್ಪ ಸುರಿದಂತಾಗಿದೆ. ಇದರ ನಡುವೆ ಇದೀಗ ಮುಖ್ಯಮಂತ್ರಿ ಚಂದ್ರು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ಅವರನ್ನು ಒಳಗೊಂಡಂತೆ ಕಮಲ್ ಹಾಸನ್ ಪರ ಮಾತನಾಡುತ್ತಿರುವ ಎಲ್ಲರು ನಾಡದ್ರೋಹಿಗಳು ಎಂದು ಕಿಡಿ ಕಾರಿದ್ದಾರೆ.
ಈ ಕುರಿತು 'ಪಬ್ಲಿಕ್ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಚಂದ್ರು ಕಮಲ್ ಹಾಸನ್ ಒಬ್ಬ ದುರಂಹಕಾರಿ, ಛೀಮಾರಿಗೆ ಯೋಗ್ಯವಾದ ವ್ಯಕ್ತಿ ಎಂದು ಹೇಳಿದ್ದಾರೆ.
ಕಾರ್ಯಕ್ರಮ ನಡೆಯುವಾಗ ಸಾಕ್ಷಿಪ್ರಜ್ಞೆಯಂತೆ ಶಿವಣ್ಣ ಅಲ್ಲಿಯೇ ಇದ್ದರು. ಅವರು ಕಮಲ್ ಹಾಸನ್ ಹೇಳಿಕೆಯನ್ನು ಅಲ್ಲಿಯೇ ಖಂಡಿಸಬೇಕಿತ್ತು. ಆದರೆ ಅವರು ಪಲಾಯನವಾದ ಮಾಡಿದರು ಎಂದು ಹೇಳಿರುವ ಮುಖ್ಯಮಂತ್ರಿ ಚಂದ್ರು ಆ ನಂತರವೂ ಕೂಡ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿಲ್ಲ ಬದಲಿಗೆ ಅವರ ಮೇಲೆ ನನಗೆ ಪ್ರೀತಿ ಇದೆ ಎಂದು ಹೇಳಿದ್ದಾರೆ. ಅತ್ತ ಕಮಲ್ ಹಾಸನ್ ವಿರೋಧವೂ ಮಾಡದೇ ಇತ್ತ ಕನ್ನಡಿಗರ ಭಾವನೆಗಳ ಜೊತೆಯೂ ನಿಲ್ಲದೇ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಶಿವಣ್ಣ ಮಾತನಾಡುತ್ತಿರುವುದು ತುಂಬಾ ದುಖಕರವಾದ ವಿಚಾರ ಎಂದು ಹೇಳಿದ್ದಾರೆ.
ಶಿವಣ್ಣ ಈಗಲೂ ಕೂಡ ನನ್ನ ಕುಟುಂಬದ ಕಡೆಯಿಂದ, ನನ್ನ ಕಡೆಯಿಂದ ನಿಮಗೆ ಧನ್ಯವಾದಗಳು ಆದರೆ ನಾಡು-ನುಡಿ ವಿಚಾರದಲ್ಲಿ ನಾನು ನನ್ನ ನಾಡಿನ ಪರವಾಗಿ ಇರ್ತೇನೆ, ನೀವು ಮಾತನಾಡಿದ ಮಾತುಗಳಿಗೆ ನೀವು ತಪ್ಪಿತಸ್ಥರು, ಕ್ಷಮೆ ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು, ಆದರೆ ನಾನು ಈ ಹೋರಾಟದಲ್ಲಿ ಕನ್ನಡಿಗರ ಪರವಾಗಿ ಇದ್ದೇನೆ ಎಂದು ಪ್ರತಿಪಾದಿಸಬೇಕಿತ್ತು ಎಂದಿರುವ ಮುಖ್ಯಮಂತ್ರಿ ಚಂದ್ರು ಅವರು ಸುಮ್ಮನೆ ಕುಂತಿರುವುದು ಸರಿಯಲ್ಲ ಸಮಂಜಸವಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ರಾಜ್ ಕುಮಾರ್ ಅವರ ಕುಟುಂಬ ಅಂದರೆ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ, ಕನ್ನಡ ನಾಡಿನಿಂದ ರಾಜ್ ಕುಮಾರ್ ಮತ್ತು ಅವರ ಕುಟುಂಬ, ಕನ್ನಡದಿಂದ ನಾನು ನನ್ನ ಕುಟುಂಬ ಎಂದು ಹೇಳಿರುವ ಮುಖ್ಯಮಂತ್ರಿ ಚಂದ್ರು ರಾಜ್ಯಕ್ಕೆ ಧಕ್ಕೆ ಬಂದಾಗ ಅವರ ಮೇಲೆ ಎಷ್ಟೇ ಪ್ರೀತಿ ಇರಲಿ ಅದೆಲ್ಲ ಬದಿಗೊತ್ತಿ ನೀವು ಹೇಳಿದ್ದು ನನಗೆ ಸರಿ ಹೋಗಲಿಲ್ಲ, ಇಷ್ಟ ಆಗಲಿಲ್ಲ, ನಾನು ಇಲ್ಲಿಂದ ಹೊರಡ್ತೀನಿ ಎಂದು ನಯವಾಗಿ ಹೇಳಿ ಹೊರಡಬೇಕಿತ್ತು ಎಂದು ಹೇಳಿದ್ದಾರೆ.
ಅದು ಮಾಡದೇ ನನಗೆ ಅರ್ಥವೇ ಆಗಲಿಲ್ಲ, ನಾನು ಕೇಳಿಸಿಕೊಳ್ಳಲೇ ಇಲ್ಲ ಎನ್ನುವುದು ಬೇಜವಾಬ್ಧಾರಿತನ ಎಂದಿರುವ ಮುಖ್ಯಮಂತ್ರಿ ಚಂದ್ರು ಕನ್ನಡಕ್ಕೆ ಧಕ್ಕೆ ಬಂದರು ಕೂಡ ಕಮಲ್ ಹಾಸನ್ ಬೆಂಗಳೂರಿಗೆ ಬಂದಾಗ ನೀವೇ ಕೇಳಬಹುದಿತ್ತಲ್ಲ ಅಂತಾರೆ, ಅವರೇನು ಮಾಡ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಶಿವಣ್ಣ ರೀತಿಯಲ್ಲಿ ಅವರ ಪರವಾಗಿ ಯಾರೆಲ್ಲ ಇದ್ದಾರೋ ನನ್ನ ಪ್ರಕಾರ ಅವರೆಲ್ಲ ನಾಡ ದ್ರೋಹಿಗಳೇ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಕಮಲ್ ಹಾಸನ್ ನಮ್ಮ ರಾಜ್ಯಕ್ಕೆ ಕಾಲಿಡಬಾರದು ಆ ರೀತಿ ನಿಷೇಧವನ್ನು ಹೇರಬೇಕೆಂದು ಹೇಳಿದ್ದಾರೆ.


Click it and Unblock the Notifications











