ಎಚ್ಡಿ ಕುಮಾರಸ್ವಾಮಿ-ರಾಧಿಕಾ ಕಥೆಯ 'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾ ಮತ್ತೆ ರಿಲೀಸ್ ಆಗುತ್ತಾ?
2007ರಲ್ಲಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆ 'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾಗೆ ಕೈ ಹಾಕಿದ್ದರು. ಈ ಸಿನಿಮಾದ ಮುಹೂರ್ತ ಕೂಡ ಅದ್ಧೂರಿಯಾಗಿ ನಡೆದಿತ್ತು. ಪತ್ರಕರ್ತ ವಿಶ್ವೇಶ್ವರ ಭಟ್ ಕ್ಯಾಮೆರಾ ಚಾಲನೆ ಮಾಡಿದ್ದರು. 'ಗಂಡ ಹೆಂಡತಿ' ಸಿನಿಮಾದ ನಿರ್ದೇಶಕ ರವಿ ಶ್ರೀವತ್ಸ ಕ್ಲಾಪ್ ಮಾಡಿದ್ದರು. ಟಿ.ಎನ್.ಸೀತಾರಾಂ ಅಂತಹ ದಿಗ್ಗಜರು ದೀಪ ಬೆಳಗಿ ಶುಭಕೋರಿದ್ದರು.
ರವಿ ಬೆಳಗೆರೆಯ 'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾದಲ್ಲಿ ದುನಿಯಾ ವಿಜಯ್, ಹರಿಪ್ರಿಯಾ, ದಿವಂಗತ ನಟ ಲೋಕನಾಥ್, ರಂಗಾಯಣ ರಘು, ಭಾವನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ಆರಂಭ ಆದಾಗಲೇ ಇದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ರಾಧಿಕಾ ಅವರ ಕುರಿತಾಗಿದ್ದು ಅನ್ನೋ ಗುಲ್ಲೆದ್ದಿತ್ತು. ಆ ಹೈಪ್ನಲ್ಲೇ ಸಿನಿಮಾನೂ ಆರಂಭ ಆಗಿತ್ತು.

ಬಳಿಕ ದೇವೇಗೌಡರ ಕುಟುಂಬ 'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾ ಮೇಲೆ ಸ್ಟೇ ತಂದಿತ್ತು. ಆ ಬಳಿಕ ರವಿ ಬೆಳಗೆರೆ ಆ ಸಿನಿಮಾವನ್ನು ನಿಲ್ಲಿಸಿದ್ದರು. ಅಲ್ಲಿಂದ ಮತ್ತೆ ಈ ಸಿನಿಮಾ ಸುದ್ದಿಯಲ್ಲಿ ಇರಲಿಲ್ಲ. ಈಗ ರವಿಬೆಳಗರೆ ಪುತ್ರಿ ಭಾವನಾ ಬೆಳಗೆರೆ ಡೈಲಿ ಮಾಧ್ಯಮ ಅನ್ನುವ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನಲ್ಲಿ 'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಏನು ಹೇಳಿದ್ದಾರೆ ಅಂತ ನೋಡುವುದಾದರೇ..
'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾ ರಿಲೀಸ್ ಆಗಿದ್ದರೆ ಏನಾಗುತ್ತಿತ್ತು? ಈ ಪ್ರಶ್ನೆಗೆ ಇಷ್ಟು ಉತ್ತರ ಸಿಕ್ಕಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರು, ಎಚ್ಡಿ ಕುಮಾರಸ್ವಾಮಿ, ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸಿನಿಮಾ ಅಂತ ಹೇಳಲಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಎಚ್ಡಿ ಕುಮಾರಸ್ವಾಮಿ ಹಾಗೂ ರಾಧಿಕಾ ಅವರ ಪಾತ್ರವೇ ಹೆಚ್ಚು ಪ್ರಧಾನವಾಗಿ ಎಂದು ಸುದ್ದಿ ಹಬ್ಬಿತ್ತು. ಆ ಬಗ್ಗೆ ಭಾವನಾ ಬೆಳಗರೆ ಹೀಗನ್ನುತ್ತಾರೆ.

"ಈ ಸಿನಿಮಾವನ್ನು ನೋಡಿದರೆ ದಯವಿಟ್ಟು ರಿಲೀಸ್ ಮಾಡಿ ಅಂತ ದೇವೇಗೌಡರು ಹೇಳಿರುತ್ತಿದ್ದರು. ಕುಮಾರಸ್ವಾಮಿ ಅವರೂ ಹೇಳಿರುತ್ತಿದ್ದರು. ಅಷ್ಟು ಅದ್ಭುತವಾಗಿರುವಂತಹ ಕಥೆ. ಅದರಲ್ಲಿ ಬಂದ ಪಾತ್ರ ರೇವಣ್ಣ ಅವರದ್ದು ಆಗಿರಬಹುದು. ದೇವೇಗೌಡರ ಪಾತ್ರದಲ್ಲಿ ಲೋಕನಾಥ್ ಅಂಕಲ್ ಮಾಡುತ್ತಾರೆ. ವಿಜಿಯನ್ನು ಸೇಮ್ ಕುಮಾರಸ್ವಾಮಿ ತರಾನೇ ಕಾಣಿಸುವಂತೆ ರೆಡಿ ಮಾಡುತ್ತಾರೆ. ಹರಿಪ್ರಿಯಾ ರಾಧಿಕಾ ಕುಮಾರಸ್ವಾಮಿ ಪಾತ್ರ ಮಾಡಿದ್ದರು. ಇಂತಹ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡು ಮಾಡಿದ್ದರು. ನಮ್ಮ ಬಗ್ಗೆ ಸಿನಿಮಾ ಮಾಡಿದ್ದರೆ, ಅದು ನೆಗೆಟಿವ್ ಆಗಿಯೇ ಇರುತ್ತೆ ಅಂತ ಕುಮಾರಸ್ವಾಮಿ ಅಂದುಕೊಂಡಿದ್ದರು." ಎಂದು ಭಾವನಾ ಬೆಳಗೆರೆ ಹೇಳುತ್ತಾರೆ.
ಚಿತ್ರರಂಗ ಅಂದುಕೊಂಡಿದ್ದು ಕೂಡ ಇದನ್ನೇ. ಆದರೆ ಭಾವನಾ ಬೆಳಗೆರೆ ಪ್ರಕಾರ, 'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾ ರಿಲೀಸ್ ಆಗಿದ್ದರು ಎಚ್.ಡಿ ಕುಮಾರಸ್ವಾಮಿ ಹೀರೊ ಆಗಿಬಿಡ್ತಿದ್ರು. "ಕೆಟ್ಟದಾಗೆಲ್ಲ ಸಿನಿಮಾ ತೋರಿಸಲೇ ಇಲ್ಲ. ಆ ಸಿನಿಮಾದಲ್ಲಿ ಕುಮಾರಸ್ವಾಮಿ ಹೀರೋ ತರ ತೋರಿಸಿದ್ದರು. ರಾಜಕೀಯದಲ್ಲಿ ಇದ್ದುಕೊಂಡು ಏನೆಲ್ಲ ಮಾಡಬಲ್ಲ ಅನ್ನೋದು ನಡೆಯುವ ಕಥೆ ಅದು. ದೇವೇಗೌಡರು ಭಯಂಕರ ಬುದ್ದಿವಂತರು. ನಮ್ಮ ಅಪ್ಪ ದೇವೇಗೌಡರನ್ನು ತುಂಬಾನೇ ಇಷ್ಟ ಪಡುತ್ತಿದ್ದರು. ಮತ್ತೆ ಅವರು ಜೀವನದಲ್ಲಿ ಒಂದೇ ಬಾರಿ ವೋಟು ಹಾಕಿದ್ದು. ಅದು ದೇವೇಗೌಡರಿಗೆ." ಎನ್ನುತ್ತಾರೆ.
ಇನ್ನು ದೇವೇಗೌಡರ ಕುಟುಂಬ 'ಮುಖ್ಯಮಂತ್ರಿ ಐ ಲವ್ ಯು' ಸಿನಿಮಾ ನೋಡದೇ ತಡೆಯಾಜ್ಞೆ ತಂದಿದ್ದರು. "ಸಿನಿಮಾ ನೋಡಿರಲಿಲ್ಲ ಆಗಲೇ ಹೋಗಿ ತಡೆಯಾಜ್ಞೆ ತಂದಿದ್ದರು. ಸ್ಟೇ ತಂದ ಮೇಲೆ ನಾವು ಸಿನಿಮಾವನ್ನು ನಿಲ್ಲಿಸಲೇಬೇಕಿತ್ತು. ಸಿನಿಮಾ ಪೂರ್ತಿ ಶೂಟ್ ಆಗಿ ಹೋಗಿತ್ತು. ಈಗಲೂ ರೆಡಿಯಿದೆ. ಕ್ಲೈಮ್ಯಾಕ್ಸ್ ಕೂಡ ಶೂಟಿಂಗ್ ಆಗಿದೆ. ಸಿನಿಮಾಗೆ ಡಬ್ಬಿಂಗ್ ಆದರೆ, ರಿಲೀಸ್ ಮಾಡಬಹುದು. ಆ ಸಿನಿಮಾ ಇನ್ನೂ ನನ್ನ ಹತ್ತಿರವಿದೆ." ಎಂದು ಭಾವನಾ ಹೇಳುತ್ತಾರೆ. ಆದರೆ, ಮತ್ತೆ ಈ ಸಿನಿಮಾ ರಿಲೀಸ್ ಆಗುವ ಬಗ್ಗೆ ಸುಳಿವು ಕೊಟ್ಟಿಲ್ಲ.


Click it and Unblock the Notifications











