ರಜನೀಕಾಂತ್ ನಮ್ಮ ಭಾಷೆಯನ್ನು ಲೆಕ್ಕಕ್ಕೆ ಇಟ್ಟಿಲ್ಲ: ಮುಖ್ಯಮಂತ್ರಿ ಚಂದ್ರು
ಕೆಲವು ಪ್ಯಾನ್ ಇಂಡಿಯಾ ಸ್ಟಾರ್ಗಳು, ಕರ್ನಾಟಕದ ಹಿತದ ಪ್ರಶ್ನೆ ಬಂದಾಗ ತಮ್ಮ ಸಿನಿಮಾಗಳ ಲಾಭವನ್ನು ಗಮನದಲ್ಲಿಟ್ಟುಕೊಂಡು ನೆರೆ ರಾಜ್ಯಗಳ ನಡೆಯನ್ನು ಖಂಡಿಸಲು, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಜನೀಕಾಂತ್ ಅನ್ನು ಉದಾಹರಣೆಯಾಗಿ ನೀಡಿ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ''ಕರ್ನಾಟಕದಲ್ಲಿ ಹುಟ್ಟಿ ಬೇರೆ ರಾಜ್ಯದಲ್ಲಿ ನೆಲೆ ಕಂಡುಕೊಂಡವರು ಆ ರಾಜ್ಯದ, ಭಾಷೆಯ ಪರವಾಗಿಯೇ ನಿಲ್ಲುತ್ತಾರೆ. ರಜನೀಕಾಂತ್ ಅವರು ತಮಿಳುನಾಡಿನಲ್ಲಿ ಪ್ರೀತಿ ಗಳಿಸಿಕೊಂಡಿದ್ದಾರೆ. ಅವರ ಆ ಭಾಷೆಯ ಪರವಾಗಿ ತೀರ್ಮಾನ ತೆಗೆದುಕೊಂಡು ಅಲ್ಲಿಯೇ ನೆಲೆಸಿದ್ದಾರೆ. ಆ ಭಾಷೆಯ ಪರವಾಗಿ ಹೋರಾಟ ಮಾಡುತ್ತಾರೆ. ನಮ್ಮ ಭಾಷೆಯನ್ನು ಲೆಕ್ಕಕ್ಕೇ ಇಟ್ಟಿಲ್ಲ'' ಎಂದಿದ್ದಾರೆ.
Recommended Video
ಮುಂದುವರೆದು, ''ಆದರೆ ಕೆಲವರು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿನ ಜನರಿಂದ ಹೆಸರು, ಹಣ, ಆಸ್ತಿ ಸಂಪಾದಿಸಿ ಕರ್ನಾಟಕ ರಾಜ್ಯಕ್ಕೆ ಸಮಸ್ಯೆ ಆದಾಗ ದನಿ ಎತ್ತಬೇಕಾಗುತ್ತದೆ, ರಾಜ್ಯದ ಸಮಸ್ಯೆಗೆ ಆದ್ಯತೆ ಕೊಡಬೇಕಾಗಿರುತ್ತದೆ'' ಎಂದಿದ್ದಾರೆ ಮುಖ್ಯ ಮಂತ್ರಿ ಚಂದ್ರು.

ಯಾವುದೇ ಭಾಷೆಯನ್ನು ದ್ವೇಷ ಮಾಡುವಂತಿಲ್ಲ: ಮುಖ್ಯ ಮಂತ್ರಿ ಚಂದ್ರು
''ಭಾರತ ಒಕ್ಕೂಟ ರಾಷ್ಟ್ರ, ಯಾವುದೇ ಭಾಷೆಯನ್ನು ದ್ವೇಷ ಮಾಡುವಂತಿಲ್ಲ. ಯಾವುದೇ ಸಂಸ್ಕೃತಿಯನ್ನು ವಿರೋಧ ಮಾಡುವಂತಿಲ್ಲ. ಆದರೆ ರಾಜ್ಯಗಳ ವಿಂಗಡಣೆ ಆಗಿರುವುದು ಭಾಷೆಯ ಆಧಾರದ ಮೇಲೆ. ಹಾಗಿದ್ದಾಗ ನಮ್ಮ ಮಾತೃಭಾಷೆ, ಆಡಳಿತ ಭಾಷೆ ಯಾವುದಾಗಿರುತ್ತದೆಯೋ ಅದಕ್ಕೆ ಗೌರವ ಕೊಡಬೇಕಾದುದ್ದು ಆದ್ಯ ಕರ್ತವ್ಯ. ಅಂಥಹವರ ವಿರುದ್ಧ ಜನ ದಂಗೆ ಎದ್ದರೆ ನಾವೇನೂ ಮಾಡುವುದಕ್ಕಾಗುವುದಿಲ್ಲ'' ಎಂದರು.

''ಭಾಷೆಗೆ ಅನ್ಯಾಯವಾದಾಗ ಪ್ರತಿಭಟಿಸಬೇಕಾದುದ್ದು ಕರ್ತವ್ಯ''
''ಯಾವ ಭಾಷೆಯನ್ನು ಕಡಿಮೆಯೆಂದು ಹೇಳುತ್ತಿಲ್ಲ. ತಿರಸ್ಕಾರ ಮಾಡುತ್ತಿಲ್ಲ. ಆದರೆ ನಿನ್ನ ಭಾಷೆಗೆ ಅನ್ಯಾಯ ಆದಾಗ ಎದುರಿಸಿ ನಿಲ್ಲಬೇಕಾದ್ದುದ್ದು ಕರ್ತವ್ಯವಾಗಿರುತ್ತದೆ. ಹೆಸರು ಮಾಡಿದ್ದು ಕನ್ನಡ ಭಾಷೆಯಿಂದಲ್ಲವೆ, ಅದರ ಪರವಾಗಿಯೇ ನಿಲ್ಲದಿದ್ದರೆ ಹೇಗೆ?'' ಎಂದು ಚಂದ್ರು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಉದ್ಧಟತನಗಳನ್ನು ಪ್ರದರ್ಶನಕ್ಕಿಡಬೇಡಿ: ಮುಖ್ಯ ಮಂತ್ರಿ ಚಂದ್ರು ಸಲಹೆ
''ನಾವು ಸೆಲೆಬ್ರಿಟಿಗಳು ಜನರಿಗೆ ನಮ್ಮ ಬಗ್ಗೆ ಆಸಕ್ತಿ ಇದೆ. ರಾಜ್ ಕುಮಾರ್ ಅವರಂತೆ ಮಾದರಿ ವ್ಯಕ್ತಿ ಆಗಲು ಸಾಧ್ಯ ಆಗದೇ ಇದ್ದರೂ ಪರ್ವಾಗಿಲ್ಲ. ನಾನೊಬ್ಬ ಆದರ್ಶ ವ್ಯಕ್ತಿ ಎಂದು ಜನರಿಗೆ ತೋರಿಸಿ, ನಿಮ್ಮ ನಡುವಳಿಕೆಯನ್ನು ಎಲ್ಲರೂ ಇಷ್ಟ ಪಡುವಂತೆ ಮಾಡಿಕೊಳ್ಳಿ. ನಿಮ್ಮ ಎಲ್ಲ ವ್ಯವಹಾರವನ್ನೂ ಪಾರದರ್ಶಕವನ್ನಾಗಿಡಲು ಸಾಧ್ಯವಿಲ್ಲ. ಆದರೆ ಎಲ್ಲವನ್ನೂ ಬಹಿರಂಗಗೊಳಿಸಬೇಡಿ. ನಿಮ್ಮ ಉದ್ಧಟತನ, ದುರಹಂಕಾರಗಳನ್ನು ನಾಲ್ಕು ಗೋಡೆಯ ಮಧ್ಯೆ ಪ್ರದರ್ಶಿಸಿಕೊಳ್ಳಿ, ಸಾರ್ವಜನಿಕವಾಗಿ ಬೇಡ'' ಎಂಬ ಸಲಹೆಯನ್ನು ಸೆಲೆಬ್ರಿಟಿಗಳಿಗೆ ನೀಡಿದರು ಮುಖ್ಯ ಮಂತ್ರಿ ಚಂದ್ರು.

ಚಿತ್ರರಂಗದಲ್ಲಿ ನಾಯಕತ್ವ ಕೊರತೆ ಬಗ್ಗೆ ಚಂದ್ರು ಮಾತು
ಚಿತ್ರರಂಗದಲ್ಲಿ ನಾಯಕತ್ವದ ಕೊರತೆಯ ಬಗ್ಗೆಯೂ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ''ಆಗ ರಾಜ್ಕುಮಾರ್ ಇದ್ದರು. ಅವರ ಮಾತು ನಮಗೆಲ್ಲ ವೇದವಾಕ್ಯವಾಗಿತ್ತು. ನಂತರ ಅಂಬರೀಶ್ ಇದ್ದರು, ದೈತ್ಯ ದೇಹಿ, ಅವರ ಮಾತಿಗೆ ಎಲ್ಲರೂ ಮೌಲ್ಯ ಕೊಡುತ್ತಿದ್ದರು. ಆದರೆ ಈಗ ಅಂಥಹವರು ಇಲ್ಲ. ನಾನು ರಾಕ್ಲೈನ್ ಅವರಿಗೆ ಇತರರಿಗೆ ಹೇಳುತ್ತಲೇ ಇರುತ್ತೇನೆ. ನಾವು ಒಂದು ಬಾಡಿ ಮಾಡಿ ಗಟ್ಟಿಯಾಗೋಣ, ನಮ್ಮ ಶಕ್ತಿ ಪ್ರದರ್ಶಿಸೋಣ, ಅದು ಚಿತ್ರರಂಗಕ್ಕೂ ಒಳ್ಳೆಯದು, ರಾಜ್ಯಕ್ಕೂ ಒಳ್ಳೆಯದು ಎಂದು'' ಎಂದಿದ್ದಾರೆ ಚಂದ್ರು.


Click it and Unblock the Notifications











