ಬಹುಮುಖ ಪ್ರತಿಭೆ ಮಣಿವಣ್ಣನ್ ವಿಧಿವಶ
ಚೆನ್ನೈ, ಜೂ.16: ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ, ನಟ, ನಿರ್ಮಾಪಕ, ನಿರ್ದೇಶಕ ಆರ್ ಮಣಿವಣ್ಣನ್ (59) ಹೃದಯಾಘಾತದಿಂದಾಗಿ ಶನಿವಾರ ನಿಧನ ಹೊಂದಿದ್ದಾರೆ. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕೆಎಫ್ ಸಿಸಿ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗ ಮೃತರ ಆತ್ಮಕ್ಕೆ ಶಾಂತಿ ಕೋರಿದೆ.
ಚೆನ್ನೈನ ರಾಮವರಂ ನಿವಾಸದಲ್ಲಿ ಕೊನೆಯುಸಿರೆಳೆದ ಮಣಿವಣ್ಣನ್ ಅವರು ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗಕ್ಕೆ ಕಾಲಿಟ್ಟ ರೀತಿ ಕುತೂಹಲಕಾರಿಯಾಗಿದೆ. ಕೊಯಮತ್ತೂರು ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಮಣಿವಣ್ಣನ್ ಅವರು ನಿರ್ದೇಶಕ ಭಾರತಿ ರಾಜಾ ಅವರಿಗೆ 100 ಪುಟಗಳ ಅಭಿಮಾನ ಪತ್ರ ಬರೆದು ಕಳಿಸಿ ತಮ್ಮ ಪ್ರತಿಭೆ ತೋರಿದ್ದರು.

ಖ್ಯಾತ ನಿರ್ದೇಶಕ ಭಾರತಿ ರಾಜಾ ಅವರ ಸಹಾಯಕರಾಗಿ 'ಗೋಪುರಂಗಳ್ ಶೈವತ್ತಿಲ್ಲೆ' ಎನ್ನುವ ಚಿತ್ರವನ್ನು ನಿರ್ದೇಶಿಸುವ ಮೂಲಕ 1982ರಲ್ಲಿ ಮಣಿವಣ್ಣನ್ ಚಿತ್ರರಂಗಕ್ಕೆ ಕಾಲಿರಿಸಿದರು. ಭಾರತಿರಾಜಾ ನಿರ್ದೇಶಿಸಿದ ರಜನಿಕಾಂತ್ ನಾಯಕ ನಟನಾಗಿ ಅಭಿನಯಿಸಿದ 'ಕೊಡಿ ಪರಕ್ಕುತು' ಎನ್ನುವ ಚಿತ್ರದಲ್ಲಿ ಮಣಿವಣ್ಣನ್ ಖಳನಾಯಕನ ಪಾತ್ರ ನಿರ್ವಹಿಸಿ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
'ನಾಗರಾಜ ಚೋಳನ್ ಎಂಎ, ಎಂಎಲ್ ಎ' ಮಣಿವಣ್ಣನ್ ಅವರ 50ನೆಯ ಮತ್ತು ಕೊನೆಯ ಚಿತ್ರ. ಮಣಿವಣ್ಣನ್ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುದಲ್ ವನ್, ಸಂಗಮನ್, ಉಳ್ಳಥೈ ಅಲ್ಲಿಥಾ, ಅಮೈಧಿ ಪಡೈ, ಅವೈ ಷಣ್ಮುಖಿ ಚಿತ್ರಗಳಲ್ಲಿ ಇವರ ನಟನೆ ಮೆಚ್ಚುಗೆ ಗಳಿಸಿದರೆ, ಟಿಕ್ ಟಿಕ್ ಟಿಕ್, ಅಗಾಯಾ ಗಂಗೈ, ಕಾದಲ್ ಓವಿಯಂ ಚಿತ್ರಕ್ಕೆ ಕಥೆ ಬರೆದು ಜನಪ್ರಿಯರಾದರು, ಖ್ಯಾತ ನಟ ಸತ್ಯರಾಜ್ ಅವರ ಜೊತೆ 25 ಚಿತ್ರಗಳಲ್ಲಿ ಕೆಲಸ ಮಾಡಿದ್ದಲ್ಲದೆ ಅವರಿಗೆ ತುಂಬಾ ಆಪ್ತರಾಗಿದ್ದರು.
ಮಣಿವಣ್ಣನ್ ಗರಡಿಯಿಂದ ಬಂದ ವಿಕ್ರಮನ್, ಆರ್ ಕೆ ಸೆಲ್ವಮಣಿ, ಸುಂದರ್ ಸಿ, ಸೀಮನ್, ಕೆ ಸೆಲ್ವ ಭಾರತಿ, ರಾಧಾಭಾರತಿ ಹಾಗೂ ಇ ರಾಮದಾಸ್ ಈಗ ತಮಿಳು ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕರಾಗಿ ಬೆಳೆದಿದ್ದಾರೆ.


Click it and Unblock the Notifications











