ಗಣೇಶ್ 'ಮುಂಗಾರು ಮಳೆ 2'ಕ್ಕೆ ಮುಹೂರ್ತ ಫಿಕ್ಸ್
ಸ್ಯಾಂಡಲ್ ವುಡ್ ದುನಿಯಾದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಿತ್ರ 'ಮುಂಗಾರು ಮಳೆ'. ಈ ಚಿತ್ರ ಹಲವು ತಾರೆಗಳು, ತಂತ್ರಜ್ಞರಿಗೆ ಲೈಫ್ ಕೊಟ್ಟಂತ ಚಿತ್ರ. ಇದೀಗ 'ಮುಂಗಾರು ಮಳೆ 2' ಶೀರ್ಷಿಕೆ ಪಕ್ಕಾ ಆಗಿರುವುದು ಗೊತ್ತೇ ಇದೆ. ಶಶಾಂಕ್ ಆಕ್ಷನ್ ಕಟ್ ನಲ್ಲಿ ಮೂಡಿಬರಲಿರುವ ಚಿತ್ರದಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಅವರದೇ ನಿರ್ದೇಶನದ ಕೃಷ್ಣಲೀಲಾ ಚಿತ್ರವೂ ಸಿದ್ಧವಾಗಿದ್ದು, ಇನ್ನೇನು ತೆರೆಗೆ ಅಪ್ಪಳಿಸುವುದರಲ್ಲಿದೆ. ಸದ್ಯಕ್ಕೆ ಶಶಾಂಕ್ ಅವರು ಮುಂಗಾರು ಮಳೆಯ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದಾರೆ. ಇನ್ನೇನಿದ್ದರೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕಾಲ್ ಶೀಟ್ ಹೊಂದಿಸುವುದೊಂದೇ ಬಾಕಿ ಉಳಿದಿರುವುದು. [ಸದ್ದಿಲ್ಲದೇ ಶುರುವಾಯ್ತು 'ಮುಂಗಾರು ಮಳೆ' ಅಬ್ಬರ]

ಇದೇ ಏಪ್ರಿಲ್ ನಿಂದ ಮುಂಗಾರು ಮಳೆ ಆರಂಭವಾಗಲಿದೆಯಂತೆ. ಏಪ್ರಿಲ್ ವೇಳೆಗೆ ಗಣೇಶ್ ಅವರ 'ಸ್ಟೈಲ್ ಕಿಂಗ್' ಹಾಗೂ 'ಜೂಮ್' ಚಿತ್ರಗಳ ಶೂಟಿಂಗ್ ಸಹ ಮುಗಿಯಲಿದೆ. ಮಾರ್ಚ್ 20ಕ್ಕೆ 'ಕೃಷ್ಣಲೀಲಾ' ತೆರೆಕಾಣುತ್ತಿದೆ. ಸೆನ್ಸಾರ್ ನಲ್ಲಿ ಯು ಸರ್ಟಿಫಿಕೇಟ್ ಪಡೆದಿರುವ ಚಿತ್ರದ ಬಗ್ಗೆ ಶಶಾಂಕ್ ಅವರು ಭಾರಿ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಈ ಬಾರಿ ಯಾರು ನಾಯಕಿಯಾಗುತ್ತಾರೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಪೂಜಾಗಾಂಧಿ ಅವರ ಲುಕ್ ಅವರ ಸ್ಟೈಲ್ ಬದಲಾಗಿದೆ. ಮುಂಗಾರು ಮಳೆ ಭಾಗ 2ಕ್ಕೆ ಅವರು ಎಷ್ಟರ ಮಟ್ಟಿಗೆ ಹೊಂದಾಣಿಕೆಯಾಗುತ್ತಾರೆ ಎಂಬುದನ್ನು ಕಾದುನೋಡಬೇಕು.
ಈ ಚಿತ್ರಕ್ಕೆ ಇ ಕೆ ಪಿಕ್ಚರ್ಸ್ ಲಾಂಛನದಲ್ಲಿ ಜೆ ಗಂಗಾಧರ್ ಅವರು ನಿರ್ಮಿಸುತ್ತಿದ್ದಾರೆ. ಬಹಳ ಗ್ಯಾಪ್ ನ ಬಳಿಕ ಸ್ಯಾಂಡಲ್ ವುಡ್ ಗೆ ಬರುತ್ತಿರುವ ಅವರು ಮತ್ತೊಬ್ಬ ಈ ಕೃಷ್ಣಪ್ಪ ಆಗುತ್ತಾರಾ ಎಂಬುದನ್ನು ಕಾದುನೋಡಬೇಕು. (ಏಜೆನ್ಸೀಸ್)


Click it and Unblock the Notifications











