'ಮುಂಗಾರು ಮಳೆ' ಕಾಂಬಿನೇಷನ್ನಲ್ಲಿ ಭಟ್ರು ಹೊಸ ಸಿನಿಮಾ; ಟೈಟಲ್ ಏನು? ನಾಯಕ ನಾಯಕಿ ಯಾರು?
ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯದ ಸಿನಿಮಾ 'ಮುಂಗಾರು ಮಳೆ'. ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ, ಯೋಗರಾಜ್ ಭಟ್ ಹೀಗೆ ಆ ಚಿತ್ರದಲ್ಲಿ ಎಲ್ಲರಿಗೂ ನೇಮು ಫೇಮು ತಂದುಕೊಟ್ಟ ಸಿನಿಮಾ ಅದು. ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು ಆ ಮಳೆ.
ಇ. ಕೆ ಎಂಟರ್ಟ್ರೈನರ್ಸ್ ಬ್ಯಾನರ್ ಅಡಿಯಲ್ಲಿ ಇ. ಕೃಷ್ಣಪ್ಪ 'ಮುಂಗಾರುಮಳೆ' ಸಿನಿಮಾ ನಿರ್ಮಿಸಿದ್ದರು. ಇದೀಗ 18 ವರ್ಷಗಳ ಬಳಿಕ ಅದೇ ಸಂಸ್ಥೆಗೆ ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಬಹಳ ಹಿಂದೆಯೇ ಸಿನಿಮಾ ಶುರುವಾಗಿತ್ತು. ಇದೀಗ ಟೈಟಲ್ ರಿವೀಲ್ ಆಗಿದೆ. ಈ ರೊಮ್ಯಾಂಟಿಕ್ ಲವ್ ಸ್ಟೋರಿಗೆ 'ಮನದ ಕಡಲು' ಎಂಬ ಟೈಟಲ್ ಫಿಕ್ಸ್ ಆಗಿದೆ.

ಹೊಸ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಭಟ್ರು ಪರಿಚಯಿಸುತ್ತಿದ್ದಾರೆ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗೆ ಬರ್ತಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಇತ್ತೀಚೆಗೆ ಭಟ್ರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಇದೀಗ ತಮ್ಮ ಹಳೇ ಶೈಲಿಯಲ್ಲೇ ರೊಮ್ಯಾಂಟಿಕ್ ಸಿನಿಮಾ ಮಾಡಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ.
ಮಾಜಿ ಎಂಎಲ್ಸಿ ಇ.ಕೃಷ್ಣಪ್ಪ ಮತ್ತೆ ಚಿತ್ರ ನಿರ್ಮಾಣಕ್ಕೆ ಮರಳಿರುವುದು ವಿಶೇಷ. 'ಮುಂಗಾರು ಮಳೆ' ಬಳಿಕ ಅವರು 'ಮೊಗ್ಗಿನ ಮನಸು' ಹಾಗೂ 'ಮತ್ತೆ ಮುಂಗಾರು' ಚಿತ್ರಗಳನ್ನು ನಿರ್ಮಿಸಿದ್ದರು. ಇದೀಗ ಬಹಳ ವರ್ಷಗಳ ನಂತರ 'ಮನದ ಕಡಲು' ಚಿತ್ರ ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ಸುಮುಖ್ ಹೀರೊ ಆಗಿ ನಟಿಸುತ್ತಿದ್ದಾರೆ. ಇಬ್ಬರು ನಾಯಕಿಯರು ಚಿತ್ರದಲ್ಲಿದ್ದಾರೆ.
ಇದೊಂದು ತ್ರಿಕೋನ ಪ್ರೇಮಕಥೆ ಸಿನಿಮಾ. 'ಮನದ ಕಡಲು' ಎಂಬ ವರ್ಕಿಂಗ್ ಟೈಟಲ್ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದೇ ಟೈಟಲ್ ಅನ್ನು ಇದೀಗ ಫೈನಲ್ ಮಾಡಿದ್ದಾರೆ. ಇನ್ನು ಎರಡು ಟೈಟಲ್ ಚರ್ಚೆಗೆ ಬಂದಿತ್ತು. ಕೊನೆಗೆ ಅದೇ ಇರಲಿ ಎಂದು ತಂಡ ತೀರ್ಮಾನಿಸಿದೆ.
'ಮನದ ಕಡಲು' ಸಿನಿಮಾ ಕಥೆ ಬೆಂಗಳೂರು, ಮಂಗಳೂರು ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿ ಕೂಡ ಮುಂದುವರೆಯಲಿದೆ. ವೈದ್ಯನೊಬ್ಬನ ಜೀವನದ ಪ್ರೇಮ್ ಕಹಾನಿಯನ್ನು ಈ ಚಿತ್ರದಲ್ಲಿ ಭಟ್ರು ಬಿಚ್ಚಿಡಲಿದ್ದಾರೆ. ನೇತ್ರಾ, ಶಿವಧ್ವಜ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. 'ಫಿಸಿಕ್ಸ್ ಟೀಚರ್' ಎಂಬ ಚಿತ್ರದಲ್ಲಿ ಸುಮುಖ್ ನಟಿಸಿದ್ದರು. ತಾವೇ ಆ ಚಿತ್ರ ನಿರ್ದೇಶಿಸಿದ್ದರು.
ಕಿರುತೆರೆ ಕಲಾವಿದರಾದ ಶಶಿಕುಮಾರ್ ಹಾಗೂ ನಂದಿತಾ ದಂಪತಿ ಮಗ ಸುಮುಖ್. ಇದೀಗ ಯೋಗರಾಜ್ ಭಟ್ಟರ ಗರಡಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಟೈಟಲ್ನಿಂದಲೇ ಹೊಸ ಸಿನಿಮಾ ಕುತೂಹಲ ಮೂಡಿಸಿದೆ. ಬೆಂಗಳೂರು, ಮಂಗಳೂರು, ಮಹಾರಾಷ್ಟ್ರದಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ ತೆರೆಗೆ ಬರಲಿದೆ.


Click it and Unblock the Notifications











