ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೊರೊನಾಕ್ಕೆ ಬಲಿ
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೊರೊನಾ ಸೋಂಕಿಗೆ ತುತ್ತಾಗಿ ನಿಧನ ಹೊಂದಿದ್ದಾರೆ. ಈ ವಿಷಯವನ್ನು ಅರ್ಜುನ್ ಜನ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Recommended Video
'ಕೋವಿಡ್ನಿಂದಾಗಿ ನನ್ನ ಸಹೋದರನನ್ನು ನಾನು ಕಳೆದುಕೊಂಡೆ. ಕಿರಣ್, ಈ ದುಃಖವನ್ನು ಹೇಗೆ ಹೇಳಿಕೊಳ್ಳಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ನೀನಿರದೆ ಇರುವುದು ಕಷ್ಟ. ನನ್ನ ಕೊನೆಯ ಉಸಿರಿನವರೆಗೆ ನೀನು ನನ್ನ ಉಸಿರಿನಲ್ಲಿ ಇರುತ್ತೀಯ' ಎಂದು ಅರ್ಜುನ್ ಜನ್ಯ ಪೋಸ್ಟ್ ಮಾಡಿದ್ದಾರೆ.
ತಮ್ಮ ಏಳಿಗೆಯಲ್ಲಿ ಸಹೋದರ ಕಿರಣ್ ಪಾತ್ರ ದೊಡ್ಡದು ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು ಅರ್ಜುನ್ ಜನ್ಯ. ಹಾಗಾಗಿ ಸಹೋದರನ ಅಗಲಿಕೆ ಅರ್ಜುನ್ ಜನ್ಯ ಅವರಿಗೆ ತೀವ್ರ ದುಃಖ ತಂದಿದೆ.

ಅರ್ಜುನ್ ಜನ್ಯಗೆ ಸಹ ಕೊರೊನಾ ಬಂದಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದ ಅರ್ಜುನ್ ಜನ್ಯ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಐಸೋಲೇಷನ್ಗೆ ಒಳಗಾಗಿದ್ದರು. ಹತ್ತು ದಿನಗಳ ನಂತರ ಜನ್ಯ ಅವರಿಗೆ ನೆಗೆಟಿವ್ ಬಂತು.
ಕಳೆದ ವರ್ಷ ಫೆಬ್ರವರಿಯಲ್ಲಿ ಅರ್ಜುನ್ ಜನ್ಯ ತೀವ್ರ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅರ್ಜುನ್ ಜನ್ಯಗೆ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು.
ಚಂದನವನದ ಹಲವು ಮಂದಿ ಸೆಲೆಬ್ರಿಟಿಗಳು ಕೆಲವೇ ದಿನಗಳಲ್ಲಿ ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ಚಂದನವನದ ಯುವ ನಿರ್ಮಾಪಕ ರಾಜಶೇಖರ್, ಖ್ಯಾತ ನಿರ್ಮಾಪಕ ರಾಮು, ನಿರ್ಮಾಪಕ ಚಂದ್ರಶೇಖರ್, ಮೇಕಪ್ಮ್ಯಾನ್ ಸೀನ, ಪುಟ್ಟಣ ಕಣಗಾಲ್ ಪುತ್ರ, ಡಿಸೈನರ್ ಮಸ್ತಾನ್ ಇವರೆಲ್ಲರುಗಳು ಕೆಲವೇ ದಿನಗಳ ಅಂತರದಲ್ಲಿ ಕೊರೊನಾಕ್ಕೆ ಬಲಿ ಆಗಿದ್ದಾರೆ. ನಿನ್ನೆಯಷ್ಟೆ ಯುವ ನಿರ್ದೇಶಕ ಸಂತೋಶ್ ಕೋವಿಡ್ನಿಂದ ಸಾವನ್ನಪ್ಪಿದ್ದರು.


Click it and Unblock the Notifications











