ಕುಂದಾಪುರ ಜನತೆ ಬಗ್ಗೆ ಬೇಸರ: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರವಿ ಬಸ್ರೂರ್
'ಉಗ್ರಂ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕನಾಗಿ ಎಂಟ್ರಿಯಾದವರು ರವಿ ಬಸ್ರೂರ್. ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಕೆಲಸ ಮಾಡಿದ ಬಸ್ರೂರ್ ಜನಪ್ರಿಯತೆ ಪಡೆದರು.
ಆ ಬಳಿಕ, ಒಂದರ ನಂತರ ಒಂದು ಸಿನಿಮಾಗಳು ಅವರ ಕೈಗೆ ಸಿಕ್ಕಿತು. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸಿನಿಮಾಗಳಿಗೆ ಸಂಗೀತ ನೀಡಿದರು. 'ಕೆಜಿಎಫ್' ಸಿನಿಮಾದ ಮೂಲಕ ದೇಶಮಟ್ಟದಲ್ಲಿ ಹೆಸರು ಮಾಡಿದರು. ಆದರೆ ಇಂತಹ ಪ್ರತಿಭಾವಂತ ತಂತ್ರಜ್ಞ ಈಗ ಕಣ್ಣೀರು ಹಾಕಿದ್ದಾರೆ.
ಸಂಗೀತ ನಿರ್ದೇಶನ ಮಾತ್ರವಲ್ಲದೆ, ಸಿನಿಮಾ ನಿರ್ದೇಶನ, ನಟನೆ, ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದರು. ಪ್ರತಿ ಹೆಜ್ಜೆಯಲ್ಲಿಯೂ ಹೊಸ ಪ್ರಯತ್ನ ಮಾಡುವ ರವಿ ಬಸ್ರೂರ್ 'ಗಿರ್ಮಿಟ್' ಎಂಬ ಸಿನಿಮಾ ಮಾಡಿದ್ದರು. ಈ ಸಿನಿಮಾ ಕಳೆದ ವಾರ ಬಿಡುಗಡೆ ಆಗಿತ್ತು. ಆದರೆ, ಈ ಸಿನಿಮಾ ಪ್ರೇಕ್ಷಕರ ಸಮಸ್ಯೆ ಎದುರಿಸುತ್ತಿದೆ.
ರವಿ ಬಸ್ರೂರ್ ಊರು ಕುಂದಾಪುರದಲ್ಲಿಯೇ ಸಿನಿಮಾ ಓಡುತ್ತಿಲ್ಲ. ಬೆಂಗಳೂರಿಗೆ ಎರಡು ಮಲ್ಟಿಪ್ಲೆಕ್ಸ್ ನಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಆಗುತ್ತಿದೆ. ವಾರದ ನಂತರ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆಗೆದು ಹಾಕಿದ್ದಾರೆ. ಕಷ್ಟ ಪಟ್ಟು ಸಿನಿಮಾ ಮಾಡಿದ್ದ ರವಿ ಬಸ್ರೂರ್ ಇದನೆಲ್ಲ ನೆನೆದು ಕಣ್ಣೀರು ಹಾಕಿದ್ದಾರೆ.

'ಗಿರ್ಮಿಟ್' ಸಿನಿಮಾಗೆ ಪ್ರೇಕ್ಷಕರ ಕೊರತೆ
ರವಿ ಬಸ್ರೂರ್ ನಿರ್ದೇಶನದ 'ಗಿರ್ಮಿಟ್' ಸಿನಿಮಾ ಕಳೆದ ವಾರ ಬಿಡುಗಡೆ ಆಗಿತ್ತು. ಆದರೆ, ಈ ಸಿನಿಮಾವನ್ನು ಪ್ರೇಕ್ಷಕರು ಸರಿಯಾಗಿ ಸ್ವೀಕರಿಸಿಲ್ಲ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಇದರಿಂದ ರವಿ ಬಸ್ರೂರ್ ಬೇಸರಗೊಂಡಿದ್ದಾರೆ. ವಿಡಿಯೋ ಮಾಡಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ.

ಒಳ್ಳೆಯದನ್ನು ಆಲೋಚನೆ ಮಾಡುವುದು ತಪ್ಪಾ
''ಬೆಳಗ್ಗೆಯಿಂದ ಕಣ್ಣಿನಲ್ಲಿ ನೀರು ಬರುತ್ತಿದೆ. ಇದನ್ನು ಯಾವ ರೀತಿ ಸಮರ್ಥಿಸಿಕೊಳ್ಳಬೇಕೋ ಗೊತ್ತಿಲ್ಲ. ಒಳ್ಳೆಯದನ್ನು ಆಲೋಚನೆ ಮಾಡುವುದು ತಪ್ಪಾ ಎನಿಸುತ್ತದೆ. ನನ್ನ ರೀತಿಯೇ ನಾಲ್ಕು ಜನ ಮುಂದೆ ಬರಬೇಕು ಎನ್ನುವ ಕಾರಣಕ್ಕೆ ಪ್ರಯತ್ನ ಮಾಡುತ್ತಿದ್ದೆ, ಅದು ತಪ್ಪು ಅನಿಸುತ್ತಿದೆ. ಬೆಂಗಳೂರಿಗೆ ಬಂದು ಎಷ್ಟೋ ಜನ ಕಷ್ಟ ಪಡುತ್ತಾರೆ ಅಂತವರಿಗೆ ಸಹಾಯ ಮಾಡುವುದು ತಪ್ಪು ಎಂದು ಹೇಳುತ್ತಾರೆ.''

ನಮ್ಮ ಊರಿನಲ್ಲಿಯೇ ಮಕ್ಕಳ ಕೂಗು ಕೇಳಿಸಲಿಲ್ಲ
''ಮೊದಲ ಆಲ್ಬಂ ಸಾಂಗ್ ಮಾಡಿದಾಗಿನಿಂದ ಇಲ್ಲಿಯವರೆಗೆ, ನಾನು ಏನೇ ಮಾಡಿದರೂ, ಅದರಲ್ಲಿ ನಮ್ಮ ಊರು ಇರುತ್ತಿತ್ತು. ನಮ್ಮ ಜನ, ನಮ್ಮ ಭಾಷೆ, ನಮ್ಮ ಸ್ನೇಹಿತ ಬಳಗ ಇರುತ್ತಿತ್ತು. ವರ್ಷಕ್ಕೆ ಒಂದು ಸಿನಿಮಾ ಮಾಡಿ ಅದರ ಮೂಲಕ ಹೊಸ ಪ್ರತಿಭೆಗಳನ್ನು ತರಬೇಕು ಎನ್ನುವುದು ನಮ್ಮ ಆಸೆ. ಆದರೆ, ಬೇಸರದ ಸಂಗತಿ ಏನೆಂದರೆ, ನಮ್ಮ ಊರಿನಲ್ಲಿಯೇ ಆ 280 ಮಕ್ಕಳ ಕೂಗು ಕೇಳಿಸಲಿಲ್ಲ.''

1280 ಜನ ಮಾತ್ರ ಚಿತ್ರಮಂದಿರಕ್ಕೆ ಬಂದಿದ್ದಾರೆ
''ನನಗೆ ತುಂಬ ಬೇಸರ ಆಗುತ್ತಿದೆ. ನಮ್ಮ ಊರಿನಲ್ಲಿ ಬರೀ 1280 ಜನ ಚಿತ್ರಮಂದಿರಕ್ಕೆ ಬಂದಿದ್ದಾರೆ. ಎಲ್ಲ ಕಡೆ ಸಿನಿಮಾವನ್ನು ತೆಗೆದಿದ್ದಾರೆ. ಜನ ಬರಲಿಲ್ಲ ಅಂದರೆ, ಅವರೆನೂ ಮಾಡುತ್ತಾರೆ. ನನಗೂ ನೋವು ತಡೆದುಕೊಳ್ಳಲು ಆಗಲಿಲ್ಲ. ಗ್ರಾಮ ಬೆಳೆದರೆ ಮಾತ್ರ ದೇಶ ಬೆಳೆಯುತ್ತದೆ ಅಂತ ನನ್ನ ಹಳ್ಳಿಗಳ ಬಗ್ಗೆ ಹೇಳುತ್ತಿದೆ. ಮನಸ್ಸು ಈಗ ಗಟ್ಟಿ ಆಗಿದೆ. ಆದರೂ, ಮುಂದೆ ನಾನು ಇನ್ನೊಂದು ಪ್ರಯೋಗ ಮಾಡುತ್ತೇವೆ. ನಮ್ಮ ಪ್ರಯತ್ನ ಮುಂದುವರೆಯುತ್ತಾ ಇರುತ್ತದೆ.''

ಮಕ್ಕಳ ಸಿನಿಮಾ ಮಾಡಿದ್ದ ರವಿ ಬಸ್ರೂರ್
'ಗಿರ್ಮಿಟ್' ಮಕ್ಕಳ ಸಿನಿಮಾ. ರವಿ ಬಸ್ರೂರ್ ಈ ಚಿತ್ರದ ನಿರ್ದೇಶನ ಮಾಡಿದ್ದರು. ಎನ್ ಎಸ್ ರಾಜಕುಮಾರ್ ನಿರ್ಮಾಣ ಮಾಡಿದ್ದರು. ಮಕ್ಕಳ ನಟನೆಗೆ ಸ್ಟಾರ್ ಗಳು ಧ್ವನಿ ನೀಡಿದ್ದರು. ನಟ ಯಶ್, ರಾಧಿಕಾ ಪಂಡಿತ್ ಮುಖ್ಯ ಪಾತ್ರಗಳಿಗೆ ಧ್ವನಿ ನೀಡಿದ್ದರು. 280 ಮಕ್ಕಳು ಸಿನಿಮಾದಲ್ಲಿ ನಟಿಸಿದರು. ಆರು ಭಾಷೆಗಳಲ್ಲಿ ಸಿನಿಮಾ ಡಬ್ ಆಗಿತ್ತು.


Click it and Unblock the Notifications











