ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಸ್ಟುಡಿಯೋದಲ್ಲಿ ಕಳ್ಳತನ: ಸಂಗೀತ ಸಾಧನ ಕದ್ದು ಪರಾರಿ
ಸ್ಯಾಂಡಲ್ ವುಡ್ನ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಮ್ಯೂಸಿಕ್ ಸ್ಟುಡಿಯೋದಲ್ಲಿ ಕಳ್ಳತನ ನಡೆದಿದೆ. ಬೆಂಗಳೂರಿನ ಬನಶಂಕರಿ 6 ಸ್ಟೇಜ್ನಲ್ಲಿದ್ದ ನಿರ್ಮಾಣ ಹಂತದ ಸ್ಟುಡಿಯೋದಲ್ಲಿ ತಡರಾತ್ರಿ ಕಳ್ಳರು ಕೈಚಳಕ ತೋರಿದ್ದಾರೆ. ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಉಪೇಂದ್ರ ಐ ಲವ್ ಯು ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ಕಿರಣ್ ಸದ್ಯ ಹೊಸ ಸ್ಟುಡಿಯೋ ನಿರ್ಮಾಣ ಮಾಡಿಸುತ್ತಿದ್ದರು. ನಿರ್ಮಾಣ ಹಂತದಲ್ಲಿದ್ದ ಸ್ಟೂಡಿಯೋದಲ್ಲಿ ಸಂಗೀತ ಸಾಧನಗಳನ್ನು ತಂದು ಜೋಡಿಸುತ್ತಿದ್ದರು. ಸ್ಟುಡಿಯೋದಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಕಿಟಕಿಗಳನ್ನು ಕೊರೆದು ಒಳ್ಳನುಗ್ಗಿದ್ದಾರೆ.
ಸ್ಟುಡಿಯೋದಲ್ಲಿದ್ದ ಸುಮಾರು 35 ಲಕ್ಷ ಮೌಲ್ಯದ ಸಂಗೀತ ಸಾಧನಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತನಾಡಿದ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು, 'ತಡರಾತ್ರಿ ಈ ಘಟನೆ ನಡೆದಿದೆ. ಸ್ಟುಡಿಯೋ ಇನ್ನು ನಿರ್ಮಾಣ ಹಂತದಲ್ಲಿದೆ. ಈಗಾಗಲೇ ಸಾಕಷ್ಟು ಸಂಗೀತ ಸಾಧನಗಳನ್ನು ತಂದು ಜೋಡಿಸಿದ್ದೆ. ಸಿಸಿ ಕ್ಯಾಮರಾ ಹಾಕಿಸಿ, ಸ್ಟುಡಿಯೋ ನೋಡಿಕೊಳ್ಳಲು ಒಬ್ಬರನ್ನು ನಿಯೋಜಿಸಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ಹೀಗೆ ಆಗಿದೆ' ಎಂದು ಹೇಳಿದ್ದಾರೆ.

Recommended Video
ಇಂದು ತಲಘಟ್ಟಪುರ ಪೋಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸುವುದಾಗಿ ಕಿರಣ್ ಹೇಳಿದ್ದಾರೆ. ಕಿರಣ್ ಬಳಿ ಸದ್ಯ 15ಕ್ಕೂ ಹೆಚ್ಚು ಸಿನಿಮಾಗಳಿವೆ. ಕನ್ನಡದ ಜೊತೆಗೆ ತಮಿಳು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಹೀಗೆ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಒಲವೆ ಮಂದಾರ-2 ಸೇರಿದಂತೆ ಅನೇಕ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ.


Click it and Unblock the Notifications











