ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಸವಿನೆನಪಿನಲ್ಲಿ ಸಂಗೀತ ಸಂಜೆ
ಸಿನಿಮಾ ಮಾಡಲು ಕನ್ನಡದಲ್ಲಿ ಕಥೆಗಳಿಲ್ಲ ಎನ್ನುವ ಸುಳ್ಳಿನ ಬಲೂನನ್ನು ಒಡೆದವರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್. ಅವರ ಕುಶಲ ಕಸುಬುಗಾರಿಕೆಯಲ್ಲಿ ಕನ್ನಡದ ಹಲವಾರು ಕೃತಿಗಳು ಅಜರಾಮರವಾದವು.
ಮಹಿಳೆಯನ್ನು ಆಕೆಯ ವ್ಯಕ್ತಿತ್ವದ ಎಲ್ಲ ಮಜಲುಗಳಲ್ಲಿಯೂ ಅರ್ಥ ಮಾಡಿಕೊಂಡು ಅಭಿವ್ಯಕ್ತಿಸಿದ ಅದ್ವಿತೀಯ ಕಲಾಕಾರ ಪುಟ್ಟಣ್ಣ ಕಣಗಾಲ್. ಅವರೊಬ್ಬ ಚಿತ್ರರಂಗದ ಸವ್ಯಸಾಚಿ.

ನಮ್ಮ ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಸ್ಕಾರಗಳ ಸಂಪೂರ್ಣ ಅರಿವಿದ್ದ ಪುಟ್ಟಣ್ಣ ನಿಜಕ್ಕೂ ಸಿನಿಮಾ ಜಗತ್ತಿನ ಕ್ಯಾಪ್ಟನ್ ಆಗಿದ್ದವರು.
ಪುಟ್ಟಣ್ಣ ನಮ್ಮನ್ನು ಅಗಲಿದ್ದು 1985 ಜೂನ್ 5 ರಂದು. ಅವರ ಸ್ಮರಣೆಗಾಗಿ 'ಗಾನವೆಂಬ ಗಂಧ ಚೆಲ್ಲಿ..' ಎಂಬ ಸಂಗೀತ ಸಂಜೆ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದ ಹಿಂಭಾಗ, ಸಂಸ ಬಯಲು ರಂಗಮಂದಿರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ಬರುವ ಭಾನುವಾರ (ಜೂನ್ 5) ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ. [ಪುಟ್ಟಣ್ಣ ಕಣಗಾಲ್ ನಮ್ಮನಗಲಿ 30 ವರ್ಷ: ಅವರ ಚಿತ್ರಗಳ ಮೆಲುಕು]

ಸಂಗೀತ ಸಂಜೆ ಸಮಾರಂಭದಲ್ಲಿ ಕನ್ನಡ ಚಲನಚಿತ್ರರಂಗದ ಹಿರಿಯ ನಟ ಹಾಗೂ ರಾಜ್ಯ ವಸತಿ ಸಚಿವ ಡಾ.ಎಂ.ಹೆಚ್.ಅಂಬರೀಶ್, ಚಲನಚಿತ್ರ ನಿರ್ದೇಶಕ ಎನ್.ಸೀತರಾಮ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಬಿ.ಆರ್.ಛಾಯಾ ಪಾಲ್ಗೊಳ್ಳಲಿದ್ದಾರೆ. [ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ]
ಈ ಸಂದರ್ಭದಲ್ಲಿ ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ಶ್ರೀಮತಿ ಅಪರ್ಣ ಹಾಗೂ ಭ್ರಮೆ ತಂಡದಿಂದ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಚಲನಚಿತ್ರ ಗೀತೆಗಳ ಗಾಯನ ಏರ್ಪಡಿಸಲಾಗಿದೆ.


Click it and Unblock the Notifications











