ಈ ಚಿತ್ರಮಂದಿರದಲ್ಲಿ ಅಣ್ಣಾವ್ರ ಚಿತ್ರದಷ್ಟೇ ಹೌಸ್ಫುಲ್ ಪ್ರದರ್ಶನವನ್ನು 'ದಾಸ' ಕಂಡಿತ್ತು: ದರ್ಶನ್
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದ ರಾಬರ್ಟ್ ಬಳಿಕ ದರ್ಶನ್ ಅಭಿನಯದ ಯಾವ ಚಿತ್ರವೂ ಸಹ ಚಿತ್ರಮಂದಿರದ ಅಂಗಳಕ್ಕೆ ಬಂದೇ ಇಲ್ಲ. ಹೀಗಾಗಿ ನೆಚ್ಚಿನ ನಟನ ಚಿತ್ರ ವೀಕ್ಷಿಸಲು ದರ್ಶನ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಎಲ್ಲಾ ಯೋಜನೆಯಂತೆ ನಡೆದಿದ್ದರೆ ಈ ವರ್ಷ ಕನ್ನಡ ರಾಜ್ಯೋತ್ಸವದ ದಿನದಂದು ದರ್ಶನ್ ಅಭಿನಯದ ಮುಂದಿನ ಚಿತ್ರ ಕ್ರಾಂತಿ ತೆರೆಗೆ ಬರಬೇಕಿತ್ತು. ಆದರೆ ಚಿತ್ರದ ಕೆಲಸಗಳು ಇನ್ನೂ ಬಾಕಿ ಇದ್ದ ಕಾರಣ ಚಿತ್ರವನ್ನು ಮುಂದಿನ ಜನವರಿ ತಿಂಗಳಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಕ್ರಾಂತಿ ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿರುವ ಕಾರಣ ಕ್ರಾಂತಿ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದು, ನಟ ದರ್ಶನ್ ಯುಟ್ಯೂಬ್ ಚಾನೆಲ್ಗಳಿಗೆ ವಿಶೇಷ ಸಂದರ್ಶನಗಳಲ್ಲಿ ಭಾಗವಹಿಸಿ ಚಿತ್ರದ ಬಗ್ಗೆ ಹಾಗೂ ತಮ್ಮ 25 ವರ್ಷಗಳ ಸಿನಿ ಜರ್ನಿ ಕುರಿತು ಮಾತನಾಡುತ್ತಿದ್ದಾರೆ. ಅದೇ ರೀತಿ 'ಡೆಕ್ಕನ್ ಹೆರಾಲ್ಡ್' ನಡೆಸಿದ ಯುಟ್ಯೂಬ್ ಸಂದರ್ಶನದಲ್ಲಿಯೂ ಭಾಗವಹಿಸಿದ್ದ ನಟ ದರ್ಶನ್ ತಮ್ಮ ಸಿನಿ ಜೀವನದ ಬಗ್ಗೆ ಮಾತನಾಡುತ್ತಾ ತಮಗೆ ದೊಡ್ಡ ಬ್ರೇಕ್ ಕೊಟ್ಟ ದಾಸ ಚಿತ್ರದ ಬಗೆಗಿನ ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ.
ಹೌದು, 2003ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳ ಮೂರು ವಾರದ ಅಂತರದಲ್ಲಿ ದರ್ಶನ್ ಅಭಿನಯದ ನನ್ನ ಪ್ರೀತಿಯ ರಾಮು, ದಾಸ ಹಾಗೂ ಅಣ್ಣಾವ್ರು ಚಿತ್ರಗಳು ಬಿಡುಗಡೆಯಾಗಿದ್ದರ ಕುರಿತು ಮಾತನಾಡಿದ ದರ್ಶನ್ ದಾಸ ಚಿತ್ರ ಯಾವ ಮಟ್ಟಿಗಿನ ಯಶಸ್ಸು ಕಂಡಿತ್ತು ಎಂಬುದನ್ನು ತಿಳಿಸಿದರು.

ಮೂರು ಚಿತ್ರಗಳಲ್ಲಿ ಗೆದ್ದದ್ದು ದಾಸ
ಇನ್ನೂ ಈ ಮೂರು ಚಿತ್ರಗಳೂ ಕ್ಲಾಷ್ ಆಗಿದ್ದರ ಬಗ್ಗೆ ವಿಶೇಷವಾಗಿ ಮಾತನಾಡಿದ ದರ್ಶನ್ ನನ್ನ ಪ್ರೀತಿಯ ರಾಮು ಕ್ಲಾಸ್ ಚಿತ್ರ, ಅಣ್ಣಾವ್ರು ತಮಿಳಿನ ದಳಪತಿ ಚಿತ್ರದ ರಿಮೇಕ್ ಆಗಿತ್ತು ಎಂದರು. ಹಾಗೂ ಈ ಎರಡೂ ಚಿತ್ರಗಳ ನಡುವೆ ಹೊಸ ಕತೆಯನ್ನು ಹೊಂದಿದ್ದ ದಾಸ ಗೆದ್ದು ಬೀಗಿತು ಮತ್ತು ಇನ್ನೆರಡು ಚಿತ್ರಗಳು ಬಿದ್ದೋದವು ಎಂದೂ ಸಹ ದರ್ಶನ್ ತಿಳಿಸಿದರು.

ಅಣ್ಣಾವ್ರ ಚಿತ್ರ ಬಿಟ್ರೆ ದಾಸನೇ
ಇನ್ನೂ ಮುಂದುವರಿದು ಮಾತನಾಡಿದ ದರ್ಶನ್ ದಾಸ ಚಿತ್ರ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿತ್ತು ಎಂಬುದನ್ನು ತಿಳಿಸಿದರು. "ನೀವು ಇತಿಹಾಸ ತೆಗೆದರೆ ಮೈಸೂರಿನ ರಣ್ಜಿತ್ ಎಂಬ ಚಿತ್ರಮಂದಿರದಲ್ಲಿ ಈ ಹಿಂದೆ ಅಣ್ನಾವ್ರ ಚಿತ್ರವೊಂದು 120ರಿಂದ 125 ಶೋಗಳು ಸತತವಾಗಿ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಅದಾದ ಮೇಲೆ ಅಲ್ಲಿ ಓಡಿದ್ದೇ ದಾಸ. ಮಾಸ್ ಸಿನಿಮಾ ಅದು" ಎಂದು ದರ್ಶನ್ ತಿಳಿಸಿದರು.

ಸ್ನೇಹಿತರೇ ದಂಗಾಗಿ ಹೋದರು
ಇನ್ನು ದಾಸ ಚಿತ್ರ ಮೈಸೂರಿನ ರಣಜಿತ್ ಚಿತ್ರಮಂದಿರದಲ್ಲಿ ಈ ಮಟ್ಟಿಗಿನ ಪ್ರದರ್ಶನ ಕಂಡಿದ್ದನ್ನು ನೋಡಿದ ಸ್ನೇಹಿತರು ತನಗೆ ಕರೆ ಮಾಡಿ "ಏನ್ ದರ್ಶನ್ ಇದು ಈ ಥರ ಓಡ್ತಿದೆ, ಏನಿದೆ ಅಂಥದ್ದು ಚಿತ್ರದಲ್ಲಿ ಎಂದು ಕೇಳಿದ್ರು. ನಾನು ನಂಗೇನ್ರಯ್ಯ ಗೊತ್ತು ಎಂದಿದ್ದೆ. ಈ ರೀತಿಯಾಗಿ ದಾಸ ಗೆದ್ದಿತ್ತು" ಎಂದು ತಿಳಿಸಿದರು.


Click it and Unblock the Notifications











