ನನ್ನ ಸಿನಿಮಾ ಶುರುವಾದ 30 ನಿಮಿಷಕ್ಕೆ ಮಗಳು ಹಾಗೂ ಹೆಂಡತಿ ಎದ್ದು ಹೊರಹೋಗಿದ್ರು: ಸುದೀಪ್
ಕಿಚ್ಚ ಸುದೀಪ್ ಸದ್ಯ ಕನ್ನಡ ಚಿತ್ರರಂಗದ ಪ್ರಮುಖ ಪಿಲ್ಲರ್ಗಳಲ್ಲಿ ಓರ್ವರು ಎನಿಸಿಕೊಂಡಿರುವ ನಟ. ಇವರ ಚಿತ್ರಗಳು ಬಿಡುಗಡೆಯಾಗುತ್ತವೆ ಎಂದರೆ ದೊಡ್ಡ ಮಟ್ಟದಲ್ಲಿ ಸಿನಿ ರಸಿಕರು ಚಿತ್ರಮಂದಿರಗಳಿಗೆ ಕಾಲಿಡುತ್ತಾರೆ. ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾಗಳಲ್ಲಿ ನಟಿಸುವ ಸುದೀಪ್ ಅವರೆಂದರೆ ಮಹಿಳಾ ಅಭಿಮಾನಿಗಳಿಗೂ ಸಹ ಅಚ್ಚುಮೆಚ್ಚು.
1997ರಲ್ಲಿ ಬಿಡುಗಡೆಗೊಂಡ ತಾಯವ್ವ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ ಸುದೀಪ್ ತನ್ನ ಅದ್ಭುತ ನಟನೆಯಿಂದ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಚಿತ್ರರಂಗದಲ್ಲಿ ಕಳೆದ ವಾರವಷ್ಟೇ 27 ವರ್ಷಗಳ ಸಿನಿ ಜರ್ನಿಯನ್ನು ಪೂರೈಸಿರುವ ಕಿಚ್ಚ ಸುದೀಪ್ ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ ಹಾಗೂ ಸೋಲುಗಳನ್ನೂ ಸಹ ಕಂಡಿದ್ದಾರೆ.
ಇನ್ನು ಸಿನಿಮಾ ನಟರ ಪಯಣದಲ್ಲಿ ಸೋಲು ಗೆಲುವು ಎಂಬುದು ಮಾಮೂಲು. ಕೆಲವೊಮ್ಮೆ ತಾವು ಭರ್ಜರಿ ಗೆಲುವು ಸಾಧಿಸಲಿದೆ ಎಂದು ಊಹಿಸುವ ಚಿತ್ರಗಳೇ ಸೋಲನ್ನು ಒಪ್ಪುತ್ತವೆ, ಇನ್ನೂ ಕೆಲವು ಬಾರಿ ಸಾಮಾನ್ಯ ಯಶಸ್ಸು ಗಳಿಸಬಹುದು ಎಂದು ನಟರು ಊಹಿಸುವ ಚಿತ್ರಗಳೇ ಬ್ಲಾಕ್ಬಸ್ಟರ್ ಹಿಟ್ಗಳಾಗಿ ಹೊರಹೊಮ್ಮುತ್ತವೆ. ಚಿತ್ರಗಳು ಸೋತಾಗ ಅದರಿಂದ ಪಾಠ ಕಲಿತು, ತಪ್ಪುಗಳನ್ನು ತಿದ್ದಿಕೊಳ್ಳಬೇಕಾದದ್ದು ನಟನ ಜವಾಬ್ದಾರಿಯುತ ನಡೆ ಹಾಗೂ ತನ್ನ ಚಿತ್ರ ಹೇಗಿದೆ ಎಂದು ವಿಮರ್ಶಿಸಿದಾಗ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಕುರಿತಾಗಿಯೇ ಇದೀಗ ಕಿಚ್ಚ ಸುದೀಪ್ ಸಹ ಮುಕ್ತವಾಗಿ ಮಾತನಾಡಿ ತಮ್ಮ ಚಿತ್ರವೊಂದನ್ನು ತಮ್ಮ ಹೆಂಡತಿ ಹಾಗೂ ಮಗಳೇ ನೋಡಲಾಗದೇ ಅರ್ಧಗಂಟೆಗೆ ಚಿತ್ರಮಂದಿರದಿಂದ ಹೊರನಡೆದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಸೈಲೆಂಟಾಗಿ ಚಿತ್ರಮಂದಿರದಿಂದ ಹೊರನಡೆದಿದ್ದ ಸಾನ್ವಿ ಸುದೀಪ್
ಸಿಎನ್ಎನ್ ನ್ಯೂಸ್ 18 ನಡೆಸಿದ ಟೌನ್ಹಾಲ್ ಬೆಂಗಳೂರು ಲೈವ್ ಸಂದರ್ಶನದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ತಾವು ಕೆಟ್ಟ ಸಿನಿಮಾಗಳನ್ನು ಮಾಡಿದಾಗ ಮಗಳು ಯಾವ ರೀತಿಯ ಪ್ರತಿಕ್ರಿಯಿಸುತ್ತಿದ್ದಳು ಎಂಬುದನ್ನು ತಿಳಿಸಿದರು. ಒಮ್ಮೆ ತನ್ನದೇ ಚಿತ್ರವನ್ನು ನೋಡಲು ಹೆಂಡತಿ ಹಾಗೂ ಮಗಳ ಜತೆ ತೆರಳಿದ್ದೆ ಎಂದ ಸುದೀಪ್ ಚಿತ್ರ ಶುರುವಾದ ಕೇವಲ 30 ನಿಮಿಷಕ್ಕೆ ತನ್ನ ಮಗಳು ಯಾವುದೇ ಮಾತನ್ನಾಡದೇ ಚಿತ್ರಮಂದಿರದಿಂದ ಹೊರನಡೆದಳು ಹಾಗೂ ಕೆಲವೇ ನಿಮಿಷಗಳಲ್ಲಿ ತನ್ನ ಪತ್ನಿಯೂ ಸಹ ಹೊರನಡೆದರು ಎಂಬುದನ್ನು ತಿಳಿಸಿದರು. ಆದರೆ ಕಿಚ್ಚ ಸುದೀಪ್ ಅದು ಯಾವ ಚಿತ್ರವೆಂಬುದನ್ನು ಮಾತ್ರ ಬಿಟ್ಟುಕೊಡಲಿಲ್ಲ.

ಇಂತಹ ನಡೆ ಒಳ್ಳೆಯದು ಎಂದ ಸುದೀಪ್
ಇನ್ನು ತನ್ನ ಮಗಳು ಅಂದು ಈ ರೀತಿ ಏನೂ ಮಾತನಾಡದೇ ಚಿತ್ರಮಂದಿರದಿಂದ ಹೊರನಡೆದು ಮತ್ತೆ ಸಿನಿಮಾ ನೋಡಲು ಬಾರದೇ ಇದ್ದ ನಡೆ ಒಳ್ಳೆಯದೇ ಎಂದೂ ಸಹ ತಿಳಿಸಿದರು. ಮನೆಯಲ್ಲಿ ತಮ್ಮ ತಪ್ಪುಗಳನ್ನು ಗುರುತಿಸಿ ಹೇಳುವವರು ಇರದಿದ್ದರೆ, ತಾವು ಆ ತಪ್ಪುಗಳನ್ನು ತಿದ್ದಿಕೊಳ್ಳಲು ಆಗುವುದಿಲ್ಲ, ಈ ರೀತಿಯ ನಡೆಯಿಂದ ತಾನು ಮಾಡಿದ ತಪ್ಪೇನು, ಎಲ್ಲಿ ಹಾಗೂ ಏನನ್ನು ತಿದ್ದಿಕೊಳ್ಳಬೇಕು ಎಂಬುದು ತಿಳಿಯುತ್ತದೆ ಎಂದು ಸುದೀಪ್ ತಿಳಿಸಿದರು. ಸದ್ಯ ಸುದೀಪ್ ಅವರ ಈ ಹೇಳಿಕೆಗೆ ಮೆಚ್ಚುಗೆ ವ್ಯಕ್ಯವಾಗಿದ್ದು, ಇಂತಹ ತಪ್ಪುಗಳನ್ನು ಅರಿತು ತಿದ್ದಿಕೊಳ್ಳುವವನೇ ನಿಜವಾದ ನಟ ಹಾಗೂ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಚಿತ್ರ ಗೆಲ್ಲಲು ಹೊಸತನ ಮುಖ್ಯ
ಇನ್ನು ಇದೇ ಸಂದರ್ಶನದಲ್ಲಿ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಲು ಏನು ಮುಖ್ಯ ಎಂಬುದನ್ನೂ ಸಹ ಸುದೀಪ್ ತಿಳಿಸಿದ್ದರು. ಹೊಸತನವಿರುವ ಚಿತ್ರಗಳನ್ನು ವೀಕ್ಷಿಸಲು ಸಿನಿ ರಸಿಕರು ಇಚ್ಛಿಸುವ ಕಾರಣ ಹೊಸ ಹೊಸ ಕಥೆಗಳನ್ನು ತೆರೆ ಮೇಲೆ ತಂದರೆ ಅವುಗಳನ್ನು ಸಿನಿ ರಸಿಕ ವೀಕ್ಷಿಸಲಿದ್ದಾನೆ ಹಾಗೂ ಆ ಚಿತ್ರಗಳು ಗೆಲ್ಲಲಿವೆ ಎಂದು ಸುದೀಪ್ ಹೇಳಿದರು. ಕಾಂತಾರ ಚಿತ್ರವನ್ನೇ ಉದಾಹರಣೆಯಾಗಿ ನೀಡಿದ ಸುದೀಪ್ ಕಾಂತಾರ ಚಿತ್ರದ ಕಥೆ ಬೇರೆ ರಾಜ್ಯಗಳಿಗೆ ಹೊಸತು, ಹೀಗಾಗಿಯೇ ಕುತೂಹಲದಿಂದ ಆ ಚಿತ್ರವನ್ನು ಜನರು ದೊಡ್ಡಮಟ್ಟದಲ್ಲಿ ಸಿನಿ ರಸಿಕರು ವೀಕ್ಷಿಸಿದರು ಎಂದು ಸುದೀಪ್ ತಿಳಿಸಿದರು.


Click it and Unblock the Notifications











