ಲಂಡನ್ನಲ್ಲಿರುವ ಮಗಳನ್ನು ಕರೆತರುವ ವ್ಯವಸ್ಥೆ ಮಾಡಿ: ಜಯಮಾಲಾ ಮನವಿ
ಕೊರೊನಾ ಭೀತಿಯಿಂದ ವಿದೇಶದಲ್ಲಿ ಸಿಲುಕಿರುವ ಭಾರತೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲಿಯೂ ಇಟಲಿ, ಚೀನಾ, ಅಮೆರಿಕೆ, ದುಬೈಗಳಲ್ಲಿನ ಭಾರತೀಯರು ಜೀವ ಕೈಯಲ್ಲಿ ಹಿಡಿದುಕೊಂಡು ಸ್ವದೇಶಕ್ಕೆ ಯಾವಾಗ ಹೋದೇವೋ ಎಂದು ಕಾಯುತ್ತಿದ್ದಾರೆ.
ಹಲವು ಸೆಲೆಬ್ರಿಟಿಗಳು, ಅವರ ಮಕ್ಕಳೂ ಸಹ ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ನಿನ್ನೆಯಷ್ಟೆ ಸಚಿವ ಆನಂದ್ ಸಿಂಗ್ ಅವರು ತಮ್ಮ ಪುತ್ರಿ ಇಟಲಿಯಲ್ಲಿ ಸಿಲುಕಿದ್ದಾಳೆಂದು ಹೇಳಿ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಇಂದು ನಟಿ, ಮಾಜಿ ಸಚಿವೆ ಜಯಮಾಲಾ ಅವರು ತಮ್ಮ ಪುತ್ರಿಯ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ.
'ನನ್ನ ಮಗಳು ಲಂಡನ್ನಲ್ಲಿ ಸಿಲುಕಿಕೊಂಡಿದ್ದಾಳೆ, ಅವಳನ್ನು ಭಾರತಕ್ಕೆ ಕರೆ ತರಲು ಸಹಾಯ ಮಾಡಿರಿ' ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ ಮಾಜಿ ಸಚಿವೆ ಜಯಮಾಲಾ.

ಪರಿಷತ್ನಲ್ಲಿ ಇಂದು ಮಾತನಾಡಿದ ಜಯಮಾಲಾ, 'ನನ್ನ ಮಗಳು ಲಂಡನ್ನಲ್ಲಿ ಇದ್ದಾಳೆ. ಅಲ್ಲಿಂದ ಭಾರತಕ್ಕೆ ಬರಲು ವಿಮಾನಗಳಿಲ್ಲ. ಆಕೆಯ ಜೊತೆ ಇನ್ನೂ ಹಲವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆ ತರುವ ವ್ಯವಸ್ಥೆ ಆಗಬೇಕಿದೆ' ಎಂದು ಜಯಮಾಲಾ ಹೇಳಿದ್ದಾರೆ.
ಕೊರೊನಾ ಭೀತಿ ದಿನೇ-ದಿನೇ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಈವರೆಗೆ 14 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ವಿದೇಶದಲ್ಲಿ ಸಿಲುಕಿರುವ ಹಲವು ಭಾರತೀಯರು ಸ್ವದೇಶಕ್ಕೆ ಮರಳಲಾಗದೆ ಒದ್ದಾಡುತ್ತಿದ್ದಾರೆ.


Click it and Unblock the Notifications











