ಅಪ್ಪ ಟ್ಯಾಕ್ಸಿ ಡ್ರೈವರ್ ಆಗಿದ್ರು, ತೆಂಗಿನಕಾಯಿ ಅಂಗಡಿ ಇಟ್ಟಿದ್ರು; ಕಷ್ಟದ ದಿನಗಳನ್ನು ನೆನೆದ ರಮೇಶ್
ರಮೇಶ್ ಅರವಿಂದ್.. ಕನ್ನಡ ಚಲನಚಿತ್ರ ಕಂಡ ಪ್ರತಿಭಾವಂತ ನಟರಲ್ಲಿ ಓರ್ವರು. ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನೀಡಿದ ರಮೇಶ್ ತೊಂಬತ್ತರ ದಶಕದಲ್ಲಿಯೇ ಘಟಾನುಘಟಿ ನಟರ ಮಧ್ಯೆ ಸ್ಟಾರ್ ಆಗಿ ಗೆದ್ದು ಯಶಸ್ಸನ್ನು ಸಾಧಿಸಿದವರು. ಸುಂದರ ಸ್ವಪ್ನಗಳು ಎಂಬ ಕನ್ನಡ ಸಿನಿಮಾದ ಮೂಲಕ 1986ರಲ್ಲಿ ನಟನೆ ಆರಂಭಿಸಿದ ರಮೇಶ್ ಸದ್ಯ 2023ರಲ್ಲಿಯೂ ಸಹ ತಮ್ಮ ಮುಂದಿನ ಸಿನಿಮಾಗೆ ಕಾತರರಾಗಿ ಕಾಯುವಂತಹ ಸಿನಿ ರಸಿಕರುನ್ನು ಉಳಿಸಿಕೊಂಡಿದ್ದಾರೆ.
ಹೌದು, ನಾಳೆ ಶುಕ್ರವಾರ ( ಏಪ್ರಿಲ್ 14 ) ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ 2 ಚಿತ್ರ ಬಿಡುಗಡೆಯಾಗುತ್ತಿದ್ದು ಸಿನಿ ರಸಿಕರು ಮತ್ತೊಂದು ಥ್ರಿಲ್ಲರ್ ಚಿತ್ರವನ್ನು ನೋಡಲು ಕಾತರರಾಗಿದ್ದಾರೆ. 2020ರಲ್ಲಿ ತೆರೆಗೆ ಬಂದಿದ್ದ ಶಿವಾಜಿ ಸುರತ್ಕಲ್ ಚಿತ್ರ ಹಿಟ್ ಆದ ಬಳಿಕ ಬರುತ್ತಿರುವ ಸೀಕ್ವೆಲ್ ಚಿತ್ರ ಇದಾಗಿದ್ದು ಚಿತ್ರ ವೀಕ್ಷಿಸಲು ಸಿನಿ ರಸಿಕರ ಗುಂಪು ಚಿತ್ರಮಂದಿರಗಳಿಗೆ ನುಗ್ಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಈ ಚಿತ್ರದ ಪ್ರಚಾರಕ್ಕಾಗಿ ನಟ ರಮೇಶ್ ಅರವಿಂದ್ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದು, ಟಿವಿ 9 ಕನ್ನಡ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ ತಮ್ಮ ಬಾಲ್ಯದಿಂದ ಹಿಡಿದು ಸಿನಿಮಾ ಜೀವನದವರೆಗಿನ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಮಾತಾನಾಡಿದ್ದಾರೆ. ರಮೇಶ್ ಅರವಿಂದ್ ಸದ್ಯ ಸ್ಟಾರ್ ನಟರಾಗಿ ಮೆರೆಯುತ್ತಿದ್ದರೂ ಸಹ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಮಾತ್ರ ಮರೆತಿಲ್ಲ. ತಮ್ಮ ಏಳಿಗೆಗಾಗಿ ತಮ್ಮ ತಂದೆ ಪಟ್ಟ ಕಷ್ಟಗಳು ಇನ್ನೂ ಸಹ ರಮೇಶ್ ಅರವಿಂದ್ ಅವರ ಮನದಲ್ಲಿವೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಇತರೆ ತಾರೆಯರ ಬಾಲ್ಯದ ದಿನಗಳ ಕಷ್ಟಗಳನ್ನು ಆಲಿಸುವ ರಮೇಶ್ ಅರವಿಂದ್ ಅವರ ಬಾಲ್ಯ ಸಹ ಕಷ್ಟದ ದಿನಗಳಿಂದಲೇ ಕೂಡಿತ್ತು. ಈ ವಿಷಯವನ್ನು ರಮೇಶ್ ಸಂದರ್ಶನದಲ್ಲಿ ಹಂಚಿಕೊಂಡಿದ್ದು "ನಮ್ಮಪ್ಪ ಬಿಎ ಓದಿದ್ರು. ಕೆಲಸ ಸಿಕ್ತಾ ಇಲ್ಲ. ನಾನು ಬಿಎ ಓದಿದ್ದೀನಿ, ಟ್ಯಾಕ್ಸಿ ಎಲ್ಲಾ ಓಡಿಸಬಾರದು. ಅದೆಲ್ಲಾ ಇಲ್ವೇ ಇಲ್ಲ ನಮ್ ಅಪ್ಪನಿಗೆ. ನನ್ ಫ್ಯಾಮಿಲಿ ನನ್ನ ಮೇಲೆ ಅವಲಂಬಿತವಾಗಿದೆ. ಹೇಗಾದ್ರೂ ಮಾಡಿ ನಾನು ಸಂಪಾದಿಸಬೇಕು, ನನ್ ಫ್ಯಾಮಿಲಿನ ನಾನು ಕಾಪಾಡಬೇಕು, ನನಗೆ ಮೂರು ಜನ ಮಕ್ಕಳಿದ್ದಾರೆ, ಅವರನ್ನು ಸ್ಕೂಲ್ಗೆ ಕಳುಹಿಸಬೇಕು ಅಂತ ಟ್ಯಾಕ್ಸಿ ಓಡಿಸುವುದನ್ನು ಟ್ರೈ ಮಾಡಿದ್ರು" ಎಂದು ಹೇಳಿಕೊಂಡರು.

ಮುಂದುವರಿದು ಮಾತನಾಡಿದ ರಮೇಶ್ "ಆದರೆ ಟ್ಯಾಕ್ಸಿ ಕೆಲಸ ಗಿಟ್ಟಲಿಲ್ಲ. ನಂತರ ತೆಂಗಿನಕಾಯಿ ಅಂಗಡಿ ಶುರು ಮಾಡಿದಾರೆ, ಬ್ಯುಸಿನೆಸ್ ಟ್ರೈ ಮಾಡಿದಾರೆ, ಅದೂ ಸಹ ಫ್ಲಾಪ್ ಆಗಿದೆ. ಸಾಲಗಳು ಜಾಸ್ತಿ ಆಗ್ತಾನೇ ಇದೆ. ಆದ್ರೆ ನಮ್ಮ ಅಪ್ಪನಿಗೆ ಏನಂದ್ರೆ ಎಷ್ಟೇ ಸಾಲ ಆದರೂ, ಕೈನಲ್ಲಿ ದುಡ್ಡು ಕಡಿಮೆ ಇದೆ ಎಂತ ಹೇಳಿ ಮಕ್ಕಳ ವಿದ್ಯಾಭ್ಯಾಸ ಕಡಿಮೆ ಮಾಡಬೇಕು ಅಂತ ಅನ್ಸೇ ಇಲ್ಲ ಅವರಿಗೆ. ಅವರು ನಮ್ಮನ್ನು ಬೆಸ್ಟ್ ಸ್ಕೂಲ್ನಲ್ಲಿ ಓದಿಸಿದ್ರು. ಆಗ ಒಂದು ತಿಂಗಳಿಗೆ 25 ರೂಪಾಯಿ ಸ್ಕೂಲ್ ಫೀಸ್ ಇತ್ತು. ಅಕೌಂಟೆಂಟ್ ಆಗಿ ಸೇರಿಕೊಂಡಿದ್ದ ನಮ್ಮಪ್ಪನಿಗೆ 500 ರೂಪಾಯಿ ಸಂಬಳ. ಬಹಳ ಕಷ್ಟ ಸರ್. ಮೂರು ಜನ ಮಕ್ಕಳಿಗೆ 75 ರೂಪಾಯಿ ಅಲ್ಲೇ ಹೋಗ್ತಿತ್ತು. ಬಾಡಿಗೆ ಕಟ್ಟಬೇಕು. ಆದ್ರೆ ನಮ್ಮಪ್ಪ ನಾವು ಚಿಕ್ಕ ಮನೆಯಲ್ಲಿದ್ರೂ ಪರವಾಗಿಲ್ಲ, ನಮ್ಮ ಮಕ್ಕಳನ್ನು ಸರಿಯಾದ ಶಾಲೆಗೆ ಸೇರಿಸಬೇಕು ಎಂಬ ಸರಿಯಾದ ಯೋಚನೆ ಇದ್ದಂತಹ ವ್ಯಕ್ತಿ. ಹೀಗಾಗಿ ವಿದ್ಯಾಭ್ಯಾಸವೇ ನಮಗೆ ದೊಡ್ಡ ಪ್ಲಸ್ ಪಾಯಿಂಟ್ ಆಗೋಯ್ತು ನಮಗೆ" ಎಂದು ತಂದೆಯಿಂದ ತಾವು ವಿದ್ಯಾಭ್ಯಾಸ ಪಡೆದು ಬದುಕಿನಲ್ಲಿ ಯಶಸ್ಸು ಕಂಡೆವು ಎಂದು ತಿಳಿಸಿದ್ದಾರೆ.


Click it and Unblock the Notifications











