'ಬೀದಿ ಬಸವಣ್ಣ' ಚಿತ್ರದ ಪಾತ್ರ ಇಂದಿಗೂ ಇಷ್ಟ
ಈ ಸಿನಿಮಾ ಬಿಡುಗಡೆಯಾದ ಸ್ವಲ್ಪ ದಿನಕ್ಕೇ ನರಸಿಂಹರಾಜು ತೀರಿಕೊಂಡು ಬಿಟ್ಟರು. ನಮ್ಮ ಮತ್ತು ನರಸಿಂಹರಾಜು ಜೊತೆ ನಾಲ್ಕೈದು ವರ್ಷಗಳಷ್ಟು ಕಾಲ ಒಡನಾಟವಿತ್ತು. ಹೆಚ್ಚಾಗಿ ಪತ್ರವ್ಯವಹಾರ ನಡೆಯುತ್ತಿತ್ತು. ಯಾವುದೇ ಕಾರಣಕ್ಕೂ ಓದನ್ನು ಬಿಡಬೇಡ ಎಂದು ಅವರು ನಮಗೆ ಹಿತವಚನ ಹೇಳುತ್ತಿದ್ದರು.
ಆಗೆಲ್ಲಾ ಚಿತ್ರೀಕರಣಕ್ಕೆ ಮದ್ರಾಸ್ ಗೆ ಹೋಗುತ್ತಿದ್ದರು. ಮುಂದೆ ಅವರು ಬೆಂಗಳೂರಿನ ಜಯಮಹಲ್ ನಲ್ಲೇ ಮನೆ ಕಟ್ಟಿಕೊಂಡರು. ನಾನೂ ಅಲ್ಲೇ ಉಳಿದುಕೊಂಡು ಬಿಡುತ್ತಿದ್ದೆ. ಈಗ ಅಲ್ಲಿಗೆ ಹೋದರೆ ಹಳೆಯ ನೆನಪುಗಳು ಕಾಡುತ್ತವೆ. ಹಾಗಾಗಿ ಅಲ್ಲಿಗೆ ಹೋಗುವುದನ್ನೇ ಬಿಟ್ಟುಬಿಟ್ಟೆ.
ನರಸಿಂಹರಾಜು ಅವರ 'ಬೇಡರಕಣ್ಣಪ್ಪ' ಚಿತ್ರದಿಂದ ಹಿಡಿದು ಎಲ್ಲಾ ಚಿತ್ರಗಳನ್ನೂ ನೋಡಿದ್ದೇನೆ. ಆಗ ಮಾರ್ನಿಂಗ್ ಶೋನಲ್ಲಿ ಹಳೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದರು. ಅವರ ಯಾವುದೇ ಚಿತ್ರಗಳೂ ಬಿಟ್ಟಿಲ್ಲ. ಓಹಿಲೇಶ್ವರ, ಕೃಷ್ಣ ಗಾರುಡಿ ಇರಬಹುದು ಅವರ ಎಲ್ಲಾ ಚಿತ್ರಗಳನ್ನೂ ನೋಡಿದ್ದೇವೆ. ಅವರ 'ಬೀದಿ ಬಸವಣ್ಣ' ಚಿತ್ರ ನನಗೆ ತುಂಬಾ ಇಷ್ಟವಾದ ಚಿತ್ರ.

ಅದರಲ್ಲಿ ಅವರದು ಸಿಐಡಿ ಪಾತ್ರ. ಆ ಚಿತ್ರದ ಕ್ಲೈಮ್ಯಾಕ್ಸ್ ಎಲ್ಲರಿಗೂ ಇಷ್ಟವಾಯಿತು. ಅರೆಸ್ಟ್ ಮಾಡಲು ಕಡೆಗೆ ಪೊಲೀಸ್ ಇನ್ಸ್ ಪೆಕ್ಟರ್ ಡ್ರೆಸ್ ನಲ್ಲಿ ಬರುತ್ತಾರೆ. ಗುಡ್ ಮಾರ್ನಿಂಗ್ ಮಿಸ್ಟರ್ ಸಿಂಗ್ ಅಂತ ಒಂದು ಕ್ಲೋಸ್ ಅಪ್ ಬರುತ್ತದೆ. ಆ ಸೀನ್ ಬರುತ್ತಿದ್ದಂತೆ ಜನ ಥಿಯೇಟರ್ ಕಿತ್ತೋಗೋ ತರಹ ಚಪ್ಪಾಳೆ ತಟ್ಟುತ್ತಿದ್ದರು.
ನಮ್ಮಂತಹ ಜೂನಿಯರ್ ಕಲಾವಿದರಿಗೂ ಒಂದು ಸಂಘ ಇದೆ. ಆದರೆ ಸರ್ಕಾರ ಕಡೆಯಿಂದ ನಮಗೆ ನಯಾಪೈಸೆ ಪ್ರಯೋಜನವಾಗಿಲ್ಲ. ನಮಗೇ ಅಲ್ಲ ಬಿಡಿ. ಯಾವುದೇ ಕಲಾವಿದರೂ ಪ್ರಯೋಜನವಾಗಿಲ್ಲ ಎಂದು ಜೂ.ನರಸಿಂಹರಾಜು ಬೇಸರ ವ್ಯಕ್ತಪಡಿಸುತ್ತಾರೆ.
ಅಣ್ಣಾವ್ರು ನನ್ನನ್ನು ನೋಡಿದಾಗಲೆಲ್ಲಾ ಓ ನರಸಿಂಹರಾಜು, ನಮ್ಮ ಸೀಮೆಯವರು ಎಂದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರಜೊತೆ ಅನುರಾಗ ಅರಳಿತು, ಗುರಿ, ವಸಂತಗೀತ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.
ಹಾಸ್ಯ ಎನ್ನುವುದು ಜೀವನದಲ್ಲಿ ಹಾಸುಹೊಕ್ಕಾಗಿದೆ. ಮೊನ್ನೆ ಒಂದು ವರ್ಷದ ಮಗುಗೆ ಹೇಳ್ದೆ. ಸಿಕ್ಕಿದ್ರು ನಿಮ್ಮಜ್ಜಿ ಕೊಟ್ಲು ನಾಲ್ಕ್ ಬಜ್ಜಿ ಎಂದೆ ಸುಮ್ಮನೆ. ಆ ಮಗುಗೆ ಏನರ್ಥ ಆಯ್ತೋ ಏನೋ ನಕ್ಕು ಬಿಡ್ತು. ಈಗ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಆಗಾಗ ಬರುತ್ತಿವೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಮಂಜಿನಹನಿ' ಚಿತ್ರದಲ್ಲಿ ಮಾಡುತ್ತಿದೇನೆ.
ಸದ್ಯಕ್ಕೆ ಒಂದಷ್ಟು ಕಲಾವಿದರು ಸೇರಿಕೊಂಡು 'ಹಾಸ್ಯ ನಗೆ ಬುಗ್ಗೆ' ಎಂಬ ತಂಡ ಕಟ್ಟಿಕೊಂಡಿದ್ದೇವೆ. ಗಣೇಶೋತ್ಸವ, ರಾಜ್ಯೋತ್ಸವ, ಅಣ್ಣಮ್ಮದೇವಿ ಉತ್ಸವ, ಮದುವೆ, ಶಾಲಾ ಕಾಲೇಜಿನ ಸಮಾರಂಭಗಳಿಗಾಗಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೇವೆ. ಕಲಾರಸಿಕರು, ಕಲಾಭಿಮಾನಿಗಳು ಕರೆದರೆ ನಾವು ನಗೆ ಬುಗ್ಗೆ ಉಕ್ಕಿಸಲು ರೆಡಿ.
ಆದರೆ ಯಾಕೋ ಏನೋ ನಮ್ಮ ಟಿವಿ ವಾಹಿನಿಗಳು ನಮ್ಮಂತಹ ಹಾಸ್ಯ ಕಲಾವಿದರನ್ನು ಕಡೆಗಣಿಸುತ್ತಿವೆ. ಅವರು ಕರೆದರೆ ತಾವೂ ಹಾಸ್ಯ ಕಾರ್ಯಕ್ರಮ ನಡೆಸಿಕೊಡುತ್ತೇವೆ. ತಮ್ಮದು ಶುದ್ಧವಾದ ತಿಳಿಹಾಸ್ಯ. ಡಬಲ್ ಮೀನಿಂಗ್ ಇರುವುದಿಲ್ಲ ಎಂದು ಹೇಳಿ ತಮ್ಮ ಮೊಬೈಲ್ ನಂಬರ್ ಇನ್ನೊಮ್ಮೆ ಕೊಡಲು ಮರೆಯಲಿಲ್ಲ: 98441 76060.


Click it and Unblock the Notifications











