ಡೆವಿಲ್ ಅಬ್ಬರ, ದರ್ಶನ್ಗೆ ಅಭಿಮಾನಿಗಳ ಉಘೇ ಉಘೇ ; ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ವಿಜಯಲಕ್ಷ್ಮಿ ಭಾವುಕ ಸಂದೇಶ
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಚಿತ್ರ ಬಿಡುಗಡೆಯಾಗಿದೆ. ಆದರೆ ನೋಡುವ ಸೌಭಾಗ್ಯ ದರ್ಶನ್ಗೆ ಇಲ್ಲ. ಆದರೂ .. ದರ್ಶನ್ ಅವರ ಕೈಯನ್ನು ಈ ಹಿಂದೆಯೂ....
ಅಭಿಮಾನಿಗಳು ಬಿಟ್ಟಿರಲಿಲ್ಲ. ಈಗಲೂ ಬಿಟ್ಟಿಲ್ಲ. ಬದಲಿಗೆ ದರ್ಶನ್ ಮೇಲಿನ ಅಭಿಮಾನದಿಂದ ''ಡೆವಿಲ್'' ಜಾತ್ರೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಇಂದು (ಡಿಸೆಂಬರ್ 11) ಬೆಳಗ್ಗೆಯಿಂದಲೇ ಚಿತ್ರಮಂದಿರಗಳ ಎದುರು ಬಿಡಾರ ಹೂಡಿದ್ದಾರೆ. ಬೆಳ್ಳಿತೆರೆಯಲ್ಲಿ ತಮ್ಮ ನೆಚ್ಚಿನ ನಾಯಕನ ಎರಡು ಮುಖಗಳನ್ನು ಕಂಡು ಕುಣಿದು ಕುಪ್ಪಳಿಸಿದ್ದಾರೆ. ರಣಕೇಕೆಯನ್ನು ಹಾಕಿದ್ದಾರೆ.

ಅಭಿಮಾನಿಗಳ ಅಭಿಮಾನದ ಈ ಕೂಗು ಜೈಲಿನಲ್ಲಿರುವ ದರ್ಶನ್ ಅವರಿಗೆ ಇನ್ನೂ ತಲುಪಿದೆಯಾ ಇಲ್ವಾ ಗೊತ್ತಿಲ್ಲ. ಆದರೆ.. ಅಭಿಮಾನಿಗಳ ಈ ಅಭಿಮಾನ ಕಂಡು ವಿಜಯಲಕ್ಷ್ಮಿ ಅವರ ಹೃದಯ ತುಂಬಿ ಬಂದಿದೆ. ಬೆಳ್ಳಿತೆರೆಯಲ್ಲಿ ''ಡೆವಿಲ್'' ಕಣ್ತುಂಬಿಕೊಂಡ ನಂತರ ಆನಂದಬಾಷ್ಪದ ಜೊತೆ ಕೃತಜ್ಞತೆ ಉಕ್ಕಿದೆ. ಈ ಹಿನ್ನೆಲೆ ''ಡೆವಿಲ್'' ಚಿತ್ರದ ಕುರಿತು ವಿಮರ್ಶೆ ಮಾಡಿರುವ ವಿಜಯಲಕ್ಷ್ಮಿ ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ್ದಾರೆ. ಹಾಗಿದ್ದರೆ ವಿಜಯಲಕ್ಷ್ಮಿ ಹಂಚಿಕೊಂಡ ಫೋಸ್ಟ್ನಲ್ಲಿ ಏನಿದೆ ? ಎಂದು ತಿಳಿಯಲು ಮುಂದೆ ಓದಿ.
ವಿಜಯಲಕ್ಷ್ಮಿ ದರ್ಶನ್ ಅವರ ಬರಹ
ಚಿತ್ರಮಂದಿರದಿಂದ ಹೊರಬಂದ ಕ್ಷಣದಲ್ಲೇ ಹೃದಯ ತುಂಬಿ ಹರಿಯಿತು. ನಿರ್ದೇಶಕ ಪ್ರಕಾಶ್ ಅವರ ದೃಷ್ಟಿ, ಕಥನಶೈಲಿ, ಪ್ರತಿಯೊಂದು ಫ್ರೇಮ್ ಮೇಲಿನ ಹಿಡಿತ-ಎಲ್ಲವೂ ವಿಶೇಷ. ಕ್ಯಾಮೆರಾ ಕೆಲಸ ಮತ್ತು ತಾಂತ್ರಿಕ ತಂಡದ ಶ್ರಮದಿಂದ ಚಿತ್ರವು ದೃಶ್ಯಾತ್ಮಕವಾಗಿ ನಿಜವಾದ ಸಿನೆಮಾ ಹಬ್ಬದಂತೆ ಹೊಳೆಯುತ್ತದೆ.
ರಚನಾ ರೈ ಪರದೆ ಮೇಲೆ ಮುದ್ದಾಗಿಯೂ, ಹತ್ತಿರದ ಮನೆಯ ಹುಡುಗಿಯಂತೆಯೂ ಕಾಣಿಸಿಕೊಂಡಿದ್ದಾರೆ. ಅವರ ನೈಸರ್ಗಿಕವಾದ ಆಕರ್ಷಣೆ ಮನಸೂರೆ ಗೊಳಿಸುತ್ತದೆ. ಅವರ ಮುಂದಿನ ಪ್ರಯಾಣ ತುಂಬಾ ಬೆಳಕಿನದ್ದು ಎಂದು ನಂಬುವಷ್ಟು ಸುಂದರ ಅಭಿನಯ. ಶರ್ಮಿಳಾ ಮಾಂಡ್ರೆ ಅವರ ಪಾತ್ರ ಚಿಕ್ಕದಾಗಿದ್ದರೂ, ಅವರು ಪರದೆ ಮೇಲಿನ ಅಂದದಿಂದ ಗಮನ ಸೆಳೆದಿದ್ದಾರೆ.
ಕಥೆ ಆರಂಭದಿಂದ ಅಂತ್ಯವರೆಗೂ ಹಿಡಿಕೆಯನ್ನು ಬಿಡಲಿಲ್ಲ. ವಿಶೇಷವಾಗಿ ಎರಡು ಪಾತ್ರಗಳ ನಡುವಿನ ಟ್ವಿಸ್ಟ್ಗಳನ್ನು ನಿರ್ದೇಶಕರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಪ್ರತಿಯೊಬ್ಬ ಕಲಾವಿದ ಮತ್ತು ತಾಂತ್ರಿಕರು ತಮ್ಮ ಹೃದಯದಿಂದ ದುಡಿದಿದ್ದಾರೆ ಎಂಬುದು ಪ್ರತಿಯೊಂದು ದೃಶ್ಯದಲ್ಲೂ ಸ್ಪಷ್ಟ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

ದರ್ಶನ್ ಬಗ್ಗೆ ವಿಜಯಲಕ್ಷ್ಮಿ ಮಾತು
ಮುಂದುವರೆದು ಮತ್ತು ಈಗ ದರ್ಶನ್ ಬಗ್ಗೆ ಹೇಳುವುದಾದರೆ ಎಂದುಬರಹ ಮುಂದುವರೆಸಿರುವ ವಿಜಯಲಕ್ಷ್ಮಿ, ಅವರನ್ನು ನೋಡುವಾಗ ನನಗೆ ಏನು ಅನಿಸಿತೋ ಪದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಅವರ ಪಾತ್ರ ಚಿತ್ರಣ, ಅಭಿನಯ, ಹಾಸ್ಯ ಟೈಮಿಂಗ್, ಪರದೆ ಮೇಲೆ ಅವರ ಅದ್ಭುತ ಹಾಜರಾತಿ-ಎಲ್ಲವೂ ಜಾದುವಿನಂತೆ ಅನಿಸಿತು. ನಾನು ಬೆರಗಾಗಿದ್ದೆ. ಅವರು ಎರಡು ಪಾತ್ರಗಳನ್ನೂ ಅಷ್ಟು ಸೊಗಸಾಗಿ ಹೊತ್ತೊಯ್ದ ರೀತಿ, ಹಾಲ್ನಲ್ಲಿ ಕುಳಿತಿದ್ದ ಪ್ರತಿಯೊಬ್ಬ ಅಭಿಮಾನಿಗೂ ಒಂದು ಅದ್ಭುತ ಅನುಭವ.
ಆದರೆ ಇಂದು ನನ್ನ ಮನಸ್ಸಿಗೆ ಹೆಚ್ಚು ತಾಗಿದ್ದು ನೀವು ಎಲ್ಲರೂ. ನಿಮ್ಮ ಕ್ರೇಜ್, ನಿಮ್ಮ ಕೂಗಾಟ, ನಿಮ್ಮ ಚಪ್ಪಾಳೆಗಳು, ದರ್ಶನ್ರ ಮೇಲೆ ನೀವು ತೋರಿಸಿದ ಪ್ರೀತಿ... ಅದನ್ನು ನೋಡಿದಾಗ ನಾನು ಭಾವನೆಗಳನ್ನು ಹಿಡಿದುಕೊಳ್ಳಬೇಕಾಯಿತು. ನಿಮ್ಮ ಈ ಪ್ರೀತಿಯ ಪ್ರತಿಯೊಂದು ಹನಿ ಅವರಿಗೆ ತಲುಪುವಂತೆ ಮಾಡುತ್ತೇನೆ. ಇದೇ ಹುಚ್ಚುತನವನ್ನು ಅವರು ಬೇಗನೇ ಸ್ವತಃ ನೋಡಿ ಅನುಭವಿಸಲಿ ಎಂಬುದು ನನ್ನ ಹಾರೈಕೆ.
ಇಂದು ವಿಶೇಷವಾಗಿಸಲು ಸಹಕಾರ ಮಾಡಿದ ಎಲ್ಲಾ ಸೆಲೆಬ್ರಿಟಿಸ್ ಗಳಿಗೆ ಸಿನಿತಾರೆಯರಿಗೆ ಮತ್ತು ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ವಿಜಯಲಕ್ಷ್ಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಈ ಮೂಲಕ ಭಾವುಕ ಸಂದೇಶ ನೀಡಿದ್ಧಾರೆ.


Click it and Unblock the Notifications











