ಕಳೆದ 30 ವರ್ಷಗಳಿಂದ ಅಮ್ಮ ಮತ್ತು ತಮ್ಮಂದಿರನ್ನು ನೋಡದ ಪಾರು ಶ್ರೀಧರ್ಗೆ ಈಗ ಅವರೇ ಆಸರೆ..!
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಈ ಕಡೆ ಬರುತ್ತಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ. ಇನ್ನು, ಸಾಮಾನ್ಯವಾಗಿ ಚಿತ್ರರಂಗ ಅಂದರೆ ಅನೇಕರು ಮೂಗು ಮುರಿಯುತ್ತಾರೆ. ಹೀಗಾಗಿ ಹಲವರು ಮನೆಯವರ ವಿರೋಧ ಕಟ್ಟಿಕೊಂಡು ಈ ಬಣ್ಣದಲ್ಲಿ ಭವಿಷ್ಯವನ್ನು ಹುಡುಕುತ್ತಾರೆ.
ಹೆತ್ತವರಿಂದ ದೂರವಾಗಿ ಸಾಧನೆಯ ಶಿಖರಕ್ಕೇರಲೇಬೇಕೆಂಬ ಶಪಥ ಮಾಡಿ ಹಗಲಿರುಳು ಪ್ರಯತ್ನ ಮಾಡುತ್ತಾರೆ. ಆದರೆ ಕೆಲ ಒಮ್ಮೆ ಈ ಪ್ರಯಾಣದಲ್ಲಿ ಅಗ್ನಿ ಪರೀಕ್ಷೆಗಳು ಎದುರಾಗುತ್ತಾವೆ. ಇದರಿಂದ ಕೆಲವರ ಕನಸು ಕಮರಿ ಹೋದರೆ, ಇನ್ನು ಕೆಲವರಿಗೆ ಆರೋಗ್ಯ ಕೈ ಕೊಡುತ್ತೆ. ಉದಾಹರಣೆಗೆ ವಧು ಮತ್ತು ಪಾರು ಖ್ಯಾತಿಯ ಶ್ರೀಧರ್ ಅವರ ಬದುಕನ್ನೇ ತೆಗೆದುಕೊಳ್ಳಿ.

ಹೌದು, ಶ್ರೀಧರ್.. ಕನ್ನಡದ ಕಿರುತೆರೆಯ ಖ್ಯಾತ ಕಲಾವಿದ. ಕಳೆದ ಕೆಲ ದಿನಗಳಿಂದ ತೀವೃ ಅನಾರೋಗ್ಯಕ್ಕೀಡಾಗಿ ನರಳುತ್ತಿರುವ ಶ್ರೀಧರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುತು ಸಿಗದಷ್ಟು ಬದಲಾಗಿದ್ದಾರೆ. ಆರ್ಥಿಕ ಸಹಾಯಕ್ಕಾಗಿ ಮನವಿಯನ್ನು ಕೂಡ ಮಾಡಿದ್ದಾರೆ.
ಶ್ರೀಧರ್ ಅವರ ಅನಾರೋಗ್ಯದ ಕುರಿತು ಕಮಲಿ ಖ್ಯಾತಿಯ ಅಂಕಿತಾ ಮಾಹಿತಿಯನ್ನು ಹಂಚಿಕೊಂಡಿದ್ದು ವಿಡಿಯೋ ಮೂಲಕ ಸಹಾಯ ಮಾಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಸ್ವಪ್ನಾ ದೀಕ್ಷಿತ್, ವರ್ಷಿತಾ ಸೇನಿ ಸೇರಿ ಹಲವಾರು ಕಿರುತೆರೆಯ ಕಲಾವಿದರು ಶ್ರೀಧರ್ ಅವರ ಕಷ್ಟಕ್ಕೆ ಮಿಡಿದಿದ್ದಾರೆ.
ಇವರೆಲ್ಲರ ಮನವಿಗೆ ಜನಸಾಮಾನ್ಯರಿಂದ ಮತ್ತು ಕಿರುತೆರೆಯ ಬಾಕಿ ಕಲಾವಿದರಿಂದ ಸ್ಪಂದನೆ ಸಿಗುತ್ತಿದೆ. ಇದರ ನಡುವೆ ಈಗ ಶ್ರೀಧರ್ ತಮ್ಮ ವ್ಯೆಯಕ್ತಿಕ ಬದುಕಿನ ಕೆಲ ಖಾಸಗಿ ಪುಟಗಳನ್ನು ತಿರುವಿ ಹಾಕುತ್ತಿದ್ದಾರೆ. 30 ವರ್ಷ ಆದ ಮೇಲೆ ಅಮ್ಮ ನನ್ನನ್ನು ನೋಡಲು ಬಂದಿದ್ದಾರೆ ಎಂದು ಭಾವುಕರಾಗಿದ್ದಾರೆ.
ಹೌದು, ಮೊನ್ನೆ ಮೊನ್ನೆಯಷ್ಟೇ ತಮ್ಮ ಸಾಂಸಾರಿಕ ಜೀವನ, ಓಡಿ ಹೋದ ತಮ್ಮ ಪತ್ನಿಯ ಕುರಿತು ಮಾತನಾಡಿದ್ದ ಶ್ರೀಧರ್ ಇದೀಗ ಅಮ್ಮ ಎಂದರೆ ಅಮೃತದ ಕಡಲು ಎಂದಿದ್ದಾರೆ. ಕುಟುಂಬಸ್ಥರಿಂದ ದೂರವಾಗಿ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ವಿಶ್ವವಾಣಿ ಯೂಟ್ಯೂಬ್ಗೆ ಈ ಕುರಿತು ಮಾತನಾಡಿರುವ ಶ್ರೀಧರ್ ನಾನು ಆರನೇ ತರಗತಿಯಲ್ಲಿದ್ದಾಗಲೇ ನನ್ನ ತಂದೆ ತೀರಿಕೊಂಡರು, ಆಗ ನಾವು ಬೀದಿಗೆ ಬಂದು ಬಿಟ್ಟಿದ್ದೆವು ಎಂದು ಹೇಳಿದ್ಧಾರೆ. ತಂದೆ ತೀರಿಕೊಂಡ ನಂತರ ಕೆಲಸ ಮಾಡಿಕೊಂಡು ಅಮ್ಮ ನಮ್ಮನ್ನೆಲ್ಲ ಚಿಕ್ಕ ಮನೆಯಲ್ಲಿ ಸಾಕುತ್ತಿದ್ದರು ಎಂದಿರುವ ಶ್ರೀಧರ್ ಮನೆಯಲ್ಲಿ ತುಂಬಾ ಕಷ್ಟ ಇತ್ತು, ನಾನು ನನ್ನ 22ರ ಹರೆಯದಲ್ಲಿ ಕಲಾವಿದ ಆಗಬೇಕೆಂದು ಮನೆಯಿಂದ ಹೊರ ಬಂದೆ ಎಂದು ಹೇಳಿದ್ದಾರೆ.
ಮುಂದುವರೆದು ಚಿಕ್ಕ ವಯಸ್ಸಿನಲ್ಲಿಯೇ ಸಂಬಂಧಗಳನ್ನು ಕಳೆದುಕೊಂಡು, ಆರ್ಥಿಕವಾಗಿ ನಷ್ಟ ಅನುಭವಿಸಿ, ಸಾಂಸಾರಿಕ ಜೀವನದಲ್ಲಿ ಕೂಡ ನೊಂದುಕೊಂಡು, ಎಲ್ಲವನ್ನು ಅನುಭವಿಸಿದೆ ಎಂದಿರುವ ಶ್ರೀಧರ್ ಈ ವರ್ಷ ನನಗೆ 50 ವರ್ಷ ತುಂಬುತ್ತದೆ, 30 ವರ್ಷ ಆದ ಮೇಲೆ ಅಮ್ಮ ನನ್ನನ್ನು ನೋಡಲು ಬಂದಿದ್ದಾರೆ, ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮ್ಮಂದಿರು ಕೂಡ ಬಂದು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ. ಮೊದಲಿಂದ ಜೀವನದಲ್ಲಿ ಬದುಕಬೇಕೆಂಬ ಆಸೆ ಇತ್ತು ಆ ಆಸೆ ಈಗ ಇನ್ನೂ ಹೆಚ್ಚಾಗಿದೆ ಎಂದು ಹೇಳಿರುವ ಶ್ರೀಧರ್ ಈ 50 ವರ್ಷ ಬರೀ ಕಷ್ಟಗಳನ್ನೇ ನೋಡಿದ್ಧೇನೆ ಎಂದು ಭಾವುಕರಾಗಿದ್ದಾರೆ. ನಾನು ಖಂಡಿತವಾಗಿಯೂ ಹಳೆಯ ಶ್ರೀಧರ್ ಆಗಿ ಮತ್ತೆ ನಿಮ್ಮೆದುರು ಬರುತ್ತೇನೆ ಎಂದು ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.


Click it and Unblock the Notifications











