ಹಾಸನ ಭೂಸಮರಕ್ಕೆ 93ವರ್ಷದ ಲಕ್ಷ್ಮಮ್ಮ ಎಂಟ್ರಿ ; ಕಂದಾಯ ಕಟ್ಟಿದ್ದು ನಾನು- ಖಡಕ್ ಎಚ್ಚರಿಕೆ ನೀಡಿದ ಯಶ್ ತಾಯಿ
ಹೆಣ್ಣು, ಹೊನ್ನು, ಮಣ್ಣು.. ಈ ಮೂರನ್ನು ಮಾಯೆ ಎನ್ನುತ್ತಾರೆ ಕೆಲವರು. ಆದರೂ ಹೆಣ್ಣು, ಹೊನ್ನು, ಮಣ್ಣಿನ ಆಸೆ ಮಾತ್ರ ಕಡಿಮೆಯಾಗಿಲ್ಲ. ಕೇವಲ ಸಾಮಾನ್ಯ ಮನುಷ್ಯನಲ್ಲಿ ಮಾತ್ರವಲ್ಲ ಕೀರ್ತಿಯ ಶಿಖರಕ್ಕೇರಿದರೂ ಕೂಡ ಹಲವರಲ್ಲಿ ಈ ಆಸೆ ಇದ್ದೇ ಇರುತ್ತೆ. ಬದಲಿಗೆ ಯಶಸ್ಸು ಸಿಗುತ್ತಿದ್ದಂತೆಯೇ ಇನ್ನೂ ಹೆಚ್ಚೇ ಆಗುತ್ತೆ. ವಯಸ್ಸಾದಂತೆ ಕೂಡ ಮೋಹ ಹೆಚ್ಚಾಗುತ್ತೆ.
ಹಾಸನದ ಮಣ್ಣಿಗಾಗಿ ಹೋರಾಡುತ್ತಿರುವ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಮತ್ತು ಜಿಪಿಎ ಹೋಲ್ಡರ್ ದೇವರಾಜ್ ಅವರಲ್ಲಿ ಯಾರಲ್ಲಿ ಆಸೆ, ದುರಾಸೆ, ಹೆಚ್ಚಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಇಡೀ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿ ಈ ವಿವಾದದ ಕೇಂದ್ರಬಿಂದುವೂ ಆಗಿರುವ ಲಕ್ಷ್ಮಮ್ಮ ಮಾತನಾಡಿದ್ದಾರೆ. ಮಾಧ್ಯಮದರಿಗೆ ಹೇಳಿಕೆಯನ್ನು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಲಕ್ಷ್ಮಮ್ಮ ನಾನು ಈಗ ಮೈಸೂರಿನಲ್ಲಿದ್ದೇನೆ, ನನಗೆ ಈಗ 93 ವರ್ಷ ಈ ಕಾರಣಕ್ಕೆ ಹಾಸನಕ್ಕೆ ಬರುವುದು ಕಷ್ಟವಾಗುತ್ತೆ ಎಂದು ಹೇಳಿದ್ದಾರೆ. ಈ ಕಾರಣದಿಂದ ದೇವರಾಜ್ ಅವರನ್ನು ನಾನು ಜಿಪಿಎ ಹೋಲ್ಡರ್ ಮಾಡಿದ್ದೇನೆ ಎಂದು ಹೇಳಿರುವ ಲಕ್ಷ್ಮಮ್ಮ ನಮ್ಮ ಜಾಗದಲ್ಲಿ ಅವರು ಕಾಂಪೌಂಡ್ ಕಟ್ಟಿಸಿದ್ದರು. ನಾವು ಅದನ್ನು ತೆರವುಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಅವರ ಜಾಗಕ್ಕೂ ನಮ್ಮ ಜಾಗಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿರುವ ಲಕ್ಷ್ಮಮ್ಮ ಅವರು ಯಾಕೆ ಪದೇ ಪದೇ ನಮ್ಮ ಜಾಗಕ್ಕೆ ಹೋಗುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಲಕ್ಷ್ಮಮ್ಮ ಅವರ ಈ ಮಾತುಗಳಿಗೆ ''ಟಿವಿ9 ಕನ್ನಡ'' ಮೂಲಕ ಪ್ರತಿಕ್ರಿಯೆಯನ್ನು ನೀಡಿರುವ ಯಶ್ ಅವರ ತಾಯಿ ಪುಷ್ಪಾ, ಲಕ್ಷ್ಮಮ್ಮ ಅವರಿಂದ ಬೇರೆಯವರಿಗೆ ಹಸ್ತಾಂತರವಾಗಿ 45 ವರ್ಷಗಳಾಗಿವೆ ಎಂದು ಹೇಳಿದ್ದಾರೆ. ಖಾತೆ ಮಾಡಿದ್ದು ನಾನು, ಕಂದಾಯ ಕಟ್ಟಿದ್ದು ಕೂಡ ನಾನು ಎಂದು ಹೇಳಿರುವ ಪುಷ್ಪಾ ಅರುಣ್ ಕುಮಾರ್ ಅವರ ಹೆಸರಿನಲ್ಲಿ ಯಾಕೆ ಕಂದಾಯ ಬಂದಿಲ್ಲ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಸತ್ಯ ಇಂದಲ್ಲ.. ನಾಳೆ.. ಹೊರಗಡೆ ಬರುತ್ತೆ ಎಂದಿದ್ದಾರೆ.
ಮುಂದುವರೆದು ಅವರು ಮಾಡ್ತಿರುವುದು, ಮಾಡಿರುವುದು, ನಮಗೆಲ್ಲ ಗೊತ್ತಿಲ್ಲ ಎಂದುಕೊಂಡಿದ್ದಾರೆ ಎಂದು ಹೇಳಿರುವ ಪುಷ್ಪಾ ಅರುಣ್ ಕುಮಾರ್, ಹಿಂದೆ ಇರುವ ಎರಡು ಸೈಟ್ಗಳಿಗೂ ಇದೇ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಸತೀಶ್ ಪಟೇಲ್, ಲಾಯರ್ ಶೇಖರ್, ಪಿಡಿಒ ನಟರಾಜ್, ದೇವರಾಜೇಗೌಡ, ಇವರೆಲ್ಲರೂ ಸೇರಿ ಹಾಸನದಲ್ಲಿ ಈ ದಂಧೆ ಮಾಡಿದ್ದಾರೆ ಎಂದು ಹೇಳಿರುವ ಯಶ್ ತಾಯಿ ಪುಷ್ಪಾ ಎಲ್ಲವನ್ನೂ ನಾನು ಬಯಲಿಗೆಳೆಯುತ್ತೇನೆ ಎಂದು ಹೇಳಿದ್ದಾರೆ. ನನ್ನೊಬ್ಬಳಿಗೆ ಮಾತ್ರ ಅಲ್ಲ ತುಂಬಾ ಜನಕ್ಕೆ ಇವರಿಂದ ತೊಂದೆಯಾಗಿರುವ ಮಾಹಿತಿ ಇದೆ ಎಂದಿದ್ದಾರೆ.

ಲಕ್ಷ್ಮಮ್ಮ ಮತ್ತು ಅವರ ಕಡೆಯವರಿಗೆ ಸರ್ಕಾರದಿಂದ ಮೋಸ ಆಗಿದ್ದರೆ, ಅವರು ಸರ್ಕಾರವನ್ನು ಕೇಳಬೇಕು ಎಂದು ಹೇಳಿರುವ ಪುಷ್ಪಾ ಅರುಣ್ ಕುಮಾರ್, ಅದನ್ನು ಮಾಡದೇ ನಮ್ಮ ಜೊತೆ ಜಗಳ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 2020ಕ್ಕಿಂತ ಮೊದಲೇ ನಾನು ಈ ನಿವೇಶನ ತೆಗೆದುಕೊಂಡಿದ್ದೆ ಎಂದು ಕೂಡ ಹೇಳಿರುವ ಪುಷ್ಪಾ ಅರುಣ್ ಕುಮಾರ್ ಈ ಹಿಂದೆ ತಪ್ಪು ಏನಾದರೂ ಆಗಿತ್ತಾ ಎಂಬುದನ್ನು ವಿಚಾರಿಸಿದ್ದೇನೆ. ಆ ರೀತಿ ಆಗಿಲ್ಲ ಎಂದಿದ್ದಾರೆ. ದೇವರಾಜ್, ಸತೀಶ್ ಅವರು ಹೆಣ್ಮಕ್ಕಳ ಬಗ್ಗೆ ತುಂಬಾನೇ ಕೀಳಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ನಾನು ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಕೂಡ ಹೇಳಿದ್ದಾರೆ.
ಮತ್ತೊಂದು ಕಡೆ ಪಿಡಿಒ ನಟರಾಜ್ ಯಶ್ ತಾಯಿ ವಿರುದ್ಧ ಮಾನನಷ್ಟ ಮೊಕದಮ್ಮೆ ಹೂಡುವ ಮಾತುಗಳನ್ನು ಕೆಲ ದಿನದ ಹಿಂದೆ ಆಡಿದ್ದರು. ಮುಂಬರುವ ದಿನಗಳಲ್ಲಿಈ ಪ್ರಕರಣ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











