ತನ್ನ ಮಗ ಓದುವ ಶಾಲೆಯ ವರ್ಷದ ಫೀಸ್ ಎಷ್ಟೆಂದು ತಿಳಿಸಿ ಬೇಸರ ಹೊರ ಹಾಕಿದ ದರ್ಶನ್!

ಕಳೆದ ವರ್ಷ ಮಾರ್ಚ್ ತಿಂಗಳ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಗೊಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಯಶಸ್ಸನ್ನು ಕೂಡ ಸಾಧಿಸಿತ್ತು. ಇದಾದ ಬಳಿಕ ದರ್ಶನ್ ಅಭಿನಯದ ಯಾವುದೇ ಚಿತ್ರ ಕೂಡಾ ತೆರೆಗೆ ಬಂದಿಲ್ಲ. ಸದ್ಯ ಈ ವರ್ಷವೂ ಸಹ ಮುಗಿಯುವ ಹಂತಕ್ಕೆ ತಲುಪಿದ್ದು, ಡಿಸೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದ್ದ ದರ್ಶನ್ ಅಭಿನಯದ ಮುಂದಿನ ಚಿತ್ರ ಕ್ರಾಂತಿ ಜನವರಿ 26ಕ್ಕೆ ಮುಂದೂಡಲ್ಪಟ್ಟಿದೆ.
ಹೌದು, ಈ ಮೊದಲು ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ ಎಲ್ಲಾ ಅಂದುಕೊಂಡಂತೆ ಅಚ್ಚುಕಟ್ಟಾಗಿ ನಡೆದಿದ್ದರೆ ದರ್ಶನ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕ್ರಾಂತಿ ಚಿತ್ರ ಇದೇ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಚಿತ್ರ ಮುಂದಿನ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಅಪ್ಪಳಿಸಲಿದೆ ಎಂದು ಇತ್ತೀಚೆಗಷ್ಟೇ ಕ್ರಾಂತಿ ಚಿತ್ರತಂಡ ಯೂ ಟ್ಯೂಬರ್ಸ್ ಹಾಗೂ ಟ್ರೋಲ್ ಪೇಜ್ಗಳನ್ನು ಕರೆಸಿ ಕಾರ್ಯಕ್ರಮ ಮಾಡುವುದರ ಮೂಲಕ ಬಹಿರಂಗಪಡಿಸಿತು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್ ಕ್ರಾಂತಿ ಚಿತ್ರದ ಕುರಿತು ಕೆಲವೊಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಕ್ರಾಂತಿ ಚಿತ್ರ ಯಾವ ವಿಷಯದ ಕುರಿತ ಕತೆ ಎಂಬುದನ್ನು ದರ್ಶನ್ ಇದೇ ವೇಳೆ ತಿಳಿಸಿದರು. ಚಿತ್ರದ ಬಗೆಗೆ ಮಾತನಾಡುವಾಗ ತಮ್ಮ ಮಗನ ವಾರ್ಷಿಕ ಶಾಲಾ ಶುಲ್ಕವನ್ನು ತಿಳಿಸಿದ ನಟ ದರ್ಶನ್ ಬೇಸರ ವ್ಯಕ್ತಪಡಿಸಿದರು.

ಮೊದಲಿಗೆ ಅಭಿಮಾನಿಗಳ ಬಗ್ಗೆ ದರ್ಶನ್ ಮಾತು
ಕಾರ್ಯಕ್ರಮದಲ್ಲಿ ಮಾತನಾಡಲು ಆರಂಭಿಸಿದ ದರ್ಶನ್ ತನ್ನ ಅಭಿನಯದ ಕ್ರಾಂತಿ ಚಿತ್ರಕ್ಕಾಗಿ ತಮ್ಮ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಹಾಗೂ ಕಾಳಜಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲುವುದಿಲ್ಲ, ಇಲ್ಲಿ ಕೂತು ಧನ್ಯವಾದ ತಿಳಿಸಿದರೂ ಕೂಡ ಅದು ತಪ್ಪಾಗುತ್ತದೆ ಈ ಜನ್ಮದಲ್ಲಂತೂ ಅವರಿಗೆ ಕೃತಜ್ಞತೆ ಅರ್ಪಿಸಲು ನನ್ನಿಂದಾಗುವುದಿಲ್ಲ ಎಂದರು. ಹಾಗೂ ಅವರು ಚಿತ್ರವನ್ನು ಪ್ರಚಾರ ಮಾಡುತ್ತಿರುವ ರೀತಿಯನ್ನು ಯೂಟ್ಯೂಬ್ ಮೂಲಕ ಸಾಕಷ್ಟು ವೀಕ್ಷಿಸಿದ್ದು ಅದಕ್ಕೆ ಚಿರಋಣಿಯಾಗಿರುತ್ತೇನೆ ಎಂದು ಅಭಿಮಾನಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ದೊಡ್ಡದಾಗಿ ಏನೂ ಮಾಡಿಲ್ಲ
ಮಾತು ಮುಂದುವರಿಸಿದ ದರ್ಶನ್ 'ಕ್ರಾಂತಿ ಚಿತ್ರದ ಕುರಿತು ನಾನು ಹೆಚ್ಚೇನು ಮಾತನಾಡುವುದಿಲ್ಲ, ನಾವು ದೊಡ್ಡದಾಗಿ ಏನೋ ಮಾಡಿಬಿಟ್ಟಿದ್ದೇವೆ, ಎಲ್ಲರನ್ನು ಹಿಂದಿಕ್ಕುವಂತ ಸಿನಿಮಾ ಮಾಡಿದ್ದೇವೆ ಎನ್ನುವುದಿಲ್ಲ. ಆದರೆ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳಲು ಇಷ್ಟಪಡುತ್ತೇನೆ' ಎಂದರು. ಇದೇ ಸಮಯದಲ್ಲಿ ಯಜಮಾನ ಚಿತ್ರದಲ್ಲಿದ್ದ ಸಂದೇಶವನ್ನು ಮೆಲುಕು ಹಾಕಿದ ನಟ ದರ್ಶನ್ ಈ ಚಿತ್ರದಲ್ಲಿ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ನಡುವಿನ ವ್ಯತ್ಯಾಸವನ್ನು ತಿಳಿಸಲಿದ್ದೇವೆ ಎಂದರು.

ಮಗನ ಶಾಲೆಯ ಶುಲ್ಕ ತಿಳಿಸಿದ ದರ್ಶನ್
ಹೀಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಕುರಿತಾದ ಸಿನಿಮಾ ಕ್ರಾಂತಿ ಎಂದ ದರ್ಶನ್ 'ಇದರಿಂದ ಏನೇನು ತೊಂದರೆಯಾಗುತ್ತಿದೆ ಎಂಬುದನ್ನು ಚಿತ್ರ ತಿಳಿಸುತ್ತೆ ಏಕೆಂದರೆ ನಾನು ಓದುವಾಗ ಶಾಲೆಯ ಶುಲ್ಕ ತಿಂಗಳಿಗೆ ನಲವತ್ತರಿಂದ ಐವತ್ತು ರೂಪಾಯಿಗಳಿತ್ತು, ಹತ್ತನೇ ತರಗತಿಯಲ್ಲಿ ಸುಮಾರು ಅರುವತ್ತು ರೂಪಾಯಿಗಳಿತ್ತು. ಆದರೆ ಈಗ ಅದ್ಯಾವುದೋ ಶಾಲೆಯಲ್ಲಿ ವರ್ಷಕ್ಕೆ 24 ಲಕ್ಷ ಶುಲ್ಕವಂತೆ. ನನ್ನ ಮಗ ಓದುವ ಶಾಲೆಯಲ್ಲಿಯೂ ವರ್ಷಕ್ಕೆ ಎಂಟರಿಂದ ಒಂಬತ್ತು ಲಕ್ಷ ಶುಲ್ಕ' ಎಂದು ತಿಳಿಸಿದರು. ಸರ್ ಎಂ ವಿಶ್ವೇಶ್ವರಯ್ಯ ಅಂತಹ ಮಹನೀಯರನ್ನು ನೆನೆದ ದರ್ಶನ್ ಅವರೂ ಸಹ ಸರ್ಕಾರಿ ಶಾಲೆಯಲ್ಲಿ ಓದಿ ಬಂದವರು ಅಂತಹವರೇ ಜಗತ್ತಿಗೆ ಮಾದರಿ ಆಗಿರುವಾಗ ಖಾಸಗಿ ಶಾಲೆಗಳಲ್ಲಿ ಇಷ್ಟು ಶುಲ್ಕವೇಕೆ ಎಂದು ಆಗಾಗ ಯೋಚಿಸುತ್ತಿರುತ್ತೇನೆ ಎಂದು ದರ್ಶನ್ ತಿಳಿಸಿದರು. ಈ ಮೂಲಕ ಕ್ರಾಂತಿ ಚಿತ್ರ ವಿದ್ಯಾಭ್ಯಾಸದ ನೆಪದಲ್ಲಿ ಲಕ್ಷ ಲಕ್ಷ ಹಣ ದೋಚುವ ಶಾಲಾ ಕಾಲೇಜುಗಳ ವಿರುದ್ಧ ದನಿ ಎತ್ತಲಿದೆ ಎನ್ನುವುದು ಖಚಿತವಾಗಿದೆ.


Click it and Unblock the Notifications











