ನಾನು ಅವನನ್ನು ಮತ್ತೆ ನೋಡೊವರ್ಗೂ ನನ್ನ ಆತ್ಮಕ್ಕೆ ಶಾಂತಿಯಿಲ್ಲ; ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಭಾವುಕ
ಕನ್ನಡ ಸಿನಿಮಾ ಹಾಗೂ ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿನ್ನೆ(ಮೇ 13) ನಿಧನರಾಗಿದ್ದರು. ಪತ್ನಿ ಶ್ರೀವಿದ್ಯಾ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ. ಸಂಜೆ ವೇಳೆಗೆ ರಾಮನಗರದ ಫಾರ್ಮ್ಹೌಸ್ನಲ್ಲಿ ದಿಲೀಪ್ ರಾಜ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿತು. ಆಪ್ತರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು.
ಪತಿ ದಿಲೀಪ್ ರಾಜ್ ಅಗಲಿಕೆ ಬಗ್ಗೆ ಪತ್ನಿ ಶ್ರೀವಿದ್ಯಾ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ಇಷ್ಟು ಬೆಂಬಲ ನೀಡಿದ್ದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞಳಾಗಿದ್ದೇನೆ. ದಿಲೀಪ್ ಯಾವಾಗಲೂ ಕಲೆ, ಸಿನಿಮಾ ಮತ್ತು ಇಲ್ಲಿ ನಮ್ಮ ದಯೆಯ ರೂಪದಲ್ಲಿ ನಮ್ಮೊಂದಿಗೆ ಇರುತ್ತಾನೆ. ನಾನು ಅವನನ್ನು ಶಾಂತಿಯಿಂದ ಹೋಗಲು ಬಿಟ್ಟು ಹೊಸ ಜೀವನವನ್ನು ಕಂಡುಕೊಳ್ಳಲು ನಿರ್ಧರಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

"ಒಂದು ವಿಷಯ ಖಚಿತ.. ನಾನು ಅವನನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿಯಿಲ್ಲ" ಎಂದು ಶ್ರೀವಿದ್ಯಾ ಭಾವುಕವಾಗಿ ಹೇಳಿರುವುದು ಮನ ಮಿಡಿಯುಂತಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ. "ದಿಲೀಪ್ ರಾಜ್ ಸರ್ ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಧೈರ್ಯವಾಗಿರಿ ಶ್ರೀವಿದ್ಯಾ ಮೇಡಂ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಮಾದರಿ ದಂಪತಿಯಾಗಿದ್ದರು. ತಮ್ಮದೇ ಸಂಸ್ಥೆ ಹುಟ್ಟು ಹಾಕಿ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದರು. ವೃತ್ತಿ ಜೀವನದಲ್ಲಿ ಒಬ್ಬರಿಗೆ ಮತ್ತೊಬ್ಬರು ಹೆಗಲಾಗಿದ್ದರು. ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಅವರದ್ದು ಲವ್ ಮ್ಯಾರೇಜ್. ಕಾಲೇಜು ದಿನಗಳಲ್ಲೇ ಇಬ್ಬರ ಪರಿಚಯವಾಗಿತ್ತು. ಪ್ರತಿ ಹಂತದಲ್ಲೂ ಜೊತೆ ನಿಂತರು. 'ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್' ಎಂಬ ಸಂಸ್ಥೆ ಹುಟ್ಟು ಹಾಕಿದ್ದರು. ದಿಲೀಪ್ ನಟನೆಯ ಜೊತೆಗೆ ಕ್ರಿಯೇಟಿವ್ ವಿಭಾಗದಲ್ಲಿ ಗುರ್ತಿಸಿಕೊಂಡಿದ್ದರು. ಶ್ರೀವಿದ್ಯಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
'ಹಿಟ್ಲರ್ ಕಲ್ಯಾಣ' ಧಾರಾವಾಹಿಯನ್ನ ತಮ್ಮದೇ ಸಂಸ್ಥೆಯಲ್ಲಿ ನಿರ್ಮಿಸಿದ್ದರು. ದಿಲೀಪ್ ರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 'ಪಾರು' ಹಾಗೂ 'ಕೃಷ್ಣ ರುಕ್ಕು' ಆ ಸಂಸ್ಥೆಯ ಮತ್ತೆರಡು ಧಾರಾವಾಹಿಗಳು. ಪತಿಯ ಪಾರ್ಥೀವ ಶರೀರ ನೋಡಿ ಶ್ರೀವಿದ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ನನ್ನ ಬಿಟ್ಟು ಎಲ್ಲಿ ಹೋಗ್ತೀಯಾ ಎಂದು ಕಣ್ಣೀರಾಗಿದ್ದರು. 25 ವರ್ಷಗಳ ದಾಂಪತ್ಯ ಜೀವನ ಹಂಚಿಕೊಂಡಿದ್ದ ದಿಲೀಪ್ ಅಗಲಿಕೆ ಆಕೆಗೆ ಆಘಾತ ತಂದಿದೆ.
ಕಾಲೇಜು ದಿನಗಳಲ್ಲಿ ದಿಲೀಪ್ ರಾಜ್ ಅವರಿಗೆ ಶ್ರೀವಿದ್ಯಾ ಅಭಿಮಾನಿ ಆಗಿದ್ದರು. ಸ್ನೇಹಿತರ ಮೂಲಕ ಈ ವಿಷಯ ಗೊತ್ತಾಗಿ ಶ್ರೀವಿದ್ಯಾ ಅವರನ್ನು ಕರೆದು ಯಾಕೆ ನನ್ನ ಮಾತನಾಡಿಸಲಿಲ್ಲ. ಇನ್ಮುಂದೆ ದಿನಾ ಬಂದು ನನ್ನ ಮಾತನಾಡಿಸಿಕೊಂಡು ಹೋಗಬೇಕು ಎಂದು ದಿಲೀಪ್ ರಾಜ್ ತಾಕೀತು ಮಾಡಿದ್ದರಂತೆ. ಬಳಿಕ ದಿನಾ ಶ್ರೀವಿದ್ಯಾ ಹೋಗಿ ಮಾತನಾಡಿಸುತ್ತಿದ್ದಂತೆ. ಕಾಲೇಜಿನಲ್ಲಿ ಒಮ್ಮೆ ಯಾವಾಗಲೂ ನನ್ನ ಜೊತೆ ಇರ್ತೀಯಾ ಎಂದು ದಿಲೀಪ್ ರಾಜ್ ಕೇಳಿದಾಗಲೂ ಹ್ಞೂಂ ಎಂದಿದ್ದರು. ಹೀಗೆ ಇಬ್ಬರ ಪ್ರೀತಿ ಶುರುವಾಗಿತ್ತು.
ಒಮ್ಮೆ ಫೋನ್ನಲ್ಲಿ ಮಾತನಾಡುತ್ತಾ ಇವಾಗಲೂ ನೀನು ನನ್ನ ಜೊತೆ ನಿಲ್ತೀಯಾ ಎಂದಾಗ ಕಂಡಿತ ಎಂದು ಶ್ರೀವಿದ್ಯಾ ಉತ್ತರಿಸಿದ್ದರಂತೆ. ಹಾಗಿದ್ರೆ, ಇನ್ಮುಂದೆ ನೀನೇ ನನ್ನ ಗರ್ಲ್ಫ್ರೆಂಡ್ ಎಂದು ಫಿಕ್ಸ್ ಆಗಿಬಿಟ್ಟಿದ್ದರು. ದಿಲೀಪ್ ರಾಜ್ ಬಹಳ ತರಲೆ, ಹೋಗಿ ಹೋಗಿ ಅವನನ್ನು ನಂಬಿಕೊಂಡಿದ್ದೀಯಾ ಎಂದು ಶ್ರೀವಿದ್ಯಾ ಸ್ನೇಹಿತೆಯರು ಆಕೆಗೆ ಹೇಳುತ್ತಿದ್ದರಂತೆ. ತಮ್ಮ ಲವ್ ಸ್ಟೋರಿಯನ್ನು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸ್ವಃತ ದಿಲೀಪ್ ರಾಜ್ ನೆನಪಿಸಿಕೊಂಡಿದ್ದರು.
ನನಗೆ 23, ಶ್ರೀವಿದ್ಯಾಗೆ 21 ವರ್ಷ ವಯಸ್ಸಾಗಿದ್ದಾಗ ಇಬ್ಬರ ಮದುವೆ ಆಗಿತ್ತು. 'ಪ್ರೀತಿಗಾಗಿ' ಧಾರಾವಾಹಿಯಲ್ಲಿ ಆಗ ನಟಿಸುತ್ತಿದ್ದರು. ಅದೇ ಸಮಯದಲ್ಲಿ 'ಬಾಯ್ ಫ್ರೆಂಡ್' ಸಿನಿಮಾ ಅವಕಾಶ ಸಿಕ್ಕಿತ್ತು. ದಿಢೀರನೆ ಧಾರಾವಾಹಿ ಬಿಟ್ಟು ಸಿನಿಮಾ ಹಿಂದೆ ಬಿದ್ದರು. ಎರಡೂವರೆ ವರ್ಷ ನಯಾಪೈಸೆ ಆದಾಯ ಇರಲಿಲ್ಲ. ಆಗ ಶ್ರೀವಿದ್ಯಾ ಯಾವ್ದೋ ಹಿಯರಿಂಗ್ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದರು. 7ರಿಂದ 8 ಸಾವಿರ ಸಂಬಳ. ಮೊದಲ ಮಗಳು ಹುಟ್ಟಿದ್ದಳು. ಅಂತಹ ಸಮಯದಲ್ಲಿ ಶ್ರೀವಿದ್ಯಾ ಆದಾಯದಲ್ಲೇ ಜೀವನ ಸಾಗಿಸಿದ್ದರು. ಆ ದಿನಗಳನ್ನು ಯಾವತ್ತೂ ದಿಲೀಪ್ ರಾಜ್ ಮರೆತಿರಲಿಲ್ಲ.


Click it and Unblock the Notifications