'ಮೈನಾ' ಚೇತನ್ ಜೊತೆ ನಾಗಶೇಖರ್ ಹೊಸ ಚಿತ್ರ
ಸೂಪರ್ ಡೂಪರ್ ಕಲರ್ ಫುಲ್ ಚಿತ್ರ 'ಮೈನಾ' ಬಳಿಕ ನಾಗಶೇಖರ್ ಅವರ ನಿರ್ದೇಶನದಲ್ಲಿ ಯಾವುದೇ ಚಿತ್ರ ಬರಲಿಲ್ಲ. ಆದರೆ ಅವರು ಸುಮ್ಮನೆ ಕೂರಲಿಲ್ಲ. ನಟನಾಗಿ ಪ್ರೇಕ್ಷಕರ ಮುಂದೆ ಬಂದರು. ಚಂದ್ರಲೇಖ, ಮಾಣಿಕ್ಯ, ಕಟ್ಟೆ ಚಿತ್ರಗಳಲ್ಲಿ ಬಣ್ಣ ಹಚ್ಚಿದರು.
ನಟನಾಗಿ ಅಷ್ಟಾಗಿ ಕ್ಲಿಕ್ ಆಗದ ನಾಗಶೇಖರ್ ನಿರ್ದೇಶಕನಾಗಿ ಗೆದ್ದಿದ್ದಾರೆ. ಅವರ ನಿರ್ದೇಶನದ ಚಿತ್ರ ಮತ್ತೆ ಯಾವಾಗ ಬರುತ್ತದೆ ಎಂದು ಪ್ರೇಕ್ಷಕರು ಕಾದಿದ್ದರು. ಇದೀಗ ಅವರಿಗೆ ಸಿಹಿ ಸುದ್ದಿ ಕೊಡುತ್ತಿದ್ದಾರೆ ನಾಗಶೇಖರ್. [ನಾಗಶೇಖರ್ 'ಮೈನಾ' ಕಲರ್ ಫುಲ್ ಸೆಂಚುರಿ]

ತಮ್ಮ ಹೊಸ ಚಿತ್ರಕ್ಕೆ ರಾಜ ರಾಣಿ ಎಂದು ಹೆಸರಿಟ್ಟಿದ್ದಾರೆ. ಇದೀಗ ತಮ್ಮ ಹೊಸ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದಿರುವ ಚಿತ್ರವಿದು. ಕನಕಪುರ ಶ್ರೀನಿವಾಸ್ ಮತ್ತು ಕೆಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
'ಮೈನಾ' ಚಿತ್ರದ ಮೂಲಕ ಹೆಂಗೆಳೆಯರ ಮನಗೆದ್ದ 'ಆ ದಿನಗಳು' ಚೇತನ್ ಈ ಚಿತ್ರದ ನಾಯಕ ನಟ. ರಾಜ ರಾಣಿ ಚಿತ್ರದ ಮೂಲಕ ಮತ್ತೊಮ್ಮೆ ಯಶಸ್ವಿ ಜೋಡಿ ಒಂದಾಗುತ್ತಿದೆ. ಸದ್ಯಕ್ಕೆ ಸ್ಕ್ರಿಪ್ಟ್ ವರ್ಕ್ ಮುಗಿದಿದ್ದು ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ.
ಚೇತನ್ ಅವರ ವೃತ್ತಿ ಬದುಕಿಗೆ ತಿರುವು ಕೊಟ್ಟಂತಹ ಚಿತ್ರ 'ಮೈನಾ'. ಅದಾದ ಬಳಿಕ ಚೇತನ್ ಸಹ ಯಾವುದೇ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಇದೀಗ ರಾಜ ರಾಣಿ ಮೂಲಕ ಮತ್ತೆ ಒಂದಾಗುತ್ತಿದೆ ಸಕ್ಸಸ್ ಫುಲ್ ಜೋಡಿ. (ಏಜೆನ್ಸೀಸ್)


Click it and Unblock the Notifications











