ದರ್ಶನ್ ವಿಷಯ ಕೆದಕಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರ್ಪೊರೇಟರ್
ದರ್ಶನ್ ವಿಷಯ ಮುಂದಿಟ್ಟುಕೊಂಡು ಮಹಿಳಾ ಕಾರ್ಪೊರೇಟರ್ ಒಬ್ಬರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
Recommended Video
ಮೈಸೂರಿನ ಕಾರ್ಪೊರೇಟರ್ ಭಾಗ್ಯ ಮಹೇಶ್ ಅವರು ಇಂದು ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಲು ಹೋಗಿದ್ದಾರೆ. ಆದರೆ ಈ ವೇಳೆ ಪೊಲೀಸರು ಅವರನ್ನು ತಡೆದ ಕಾರಣ ಮಾತಿನ ಚಕಮಕಿ ನಡೆದಿದೆ.
ಆಷಾಢ ಕೊನೆಯ ಶುಕ್ರವಾರ ಇಂದು, ಹಾಗಾಗಿ ಕಾರ್ಪೊರೇಟರ್ ಭಾಗ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಇನ್ನೂ ಹಲವಾರು ಮಂದಿ ಚಾಮುಂಡೇಶ್ವರಿ ದರ್ಶನಕ್ಕೆ ತೆರಳಿದ್ದರು. ಆದರೆ ಪೊಲೀಸರು ಯಾರನ್ನೂ ಒಳಗೆ ಬಿಡಲಿಲ್ಲ. ಆದರೆ ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರ್ಪೊರೇಟರ್ ದರ್ಶನ್ ವಿಷಯವನ್ನು ಪ್ರಸ್ತಾಪಿಸಿದರು.

ದರ್ಶನ್ ಗೆ ಕೊಟ್ಟಿದ್ದ ಅವಕಾಶ ನಮಗೇಕಿಲ್ಲ: ಪ್ರಶ್ನೆ
ನಟ ದರ್ಶನ್, ಸಂಸದೆ ಶೋಭಾ ಕರಂದ್ಲಾಜೆ ಗೆ ದೇವಾಲಯಕ್ಕೆ ಹೋಗಲು ಅವಕಾಶ ಮಾಡಿಕೊಡುತ್ತೀರ ಆದರೆ ನಮ್ಮನ್ನು ಏಕೆ ಬಿಡುತ್ತಿಲ್ಲ ಎಂದು ಭಾಗ್ಯಾ ಮಹೇಶ್ ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಸಾರ್ವಜನಿಕರು ಸಹ ದನಿ ಗೂಡಿಸಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಕಳೆದ ಶುಕ್ರವಾರ ದೇವಸ್ಥಾನಕ್ಕೆ ಹೋಗಿದ್ದ ದರ್ಶನ್
ದರ್ಶನ್ ಅವರು ಕಳೆದ ಶುಕ್ರವಾರ ಅಂದರೆ ಆಷಾಡ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ದೇವರ ಆಶೀರ್ವಾದ ಪಡೆದರು. ಆಗಲೂ ಸಹ ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಭಂಧಿಸಲಾಗಿತ್ತು.

ಪ್ರವೇಶ ನಿರ್ಬಂಧವಿದ್ದರೂ ಹೋಗಿದ್ದ ದರ್ಶನ್
ಸಾರ್ವಜನಿಕ ಪ್ರವೇಶ ನಿರ್ಬಂಧವಿದ್ದರೂ ಸಹ ದರ್ಶನ್ ಅವರನ್ನು ದರ್ಶನಕ್ಕೆ ಬಿಟ್ಟುದ್ದು ಹೇಗೆ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಚಿತ್ರಗಳಲ್ಲಿ ಸಾಮಾಜಿಕ ಅಂತರ ಇಲ್ಲದಿರುವುದನ್ನು ಸಹ ಕೆಲವರು ಬೊಟ್ಟು ಮಾಡಿ ಪ್ರಶ್ನಿಸಿದ್ದರು.

ಸಂಸದೆ ಶೋಭಾ ಕರಂದ್ಲಾಜೆ ಗೆ ಅವಕಾಶ ನೀಡಲಾಗಿದೆ
ಇಂದು ಸಹ ಸಂಸದೆ ಶೋಭಾ ಕರಂದ್ಲಾಜೆ ಗೆ ಅವಕಾಶ ನೀಡಲಾಗಿದೆ. ಅವರು ಬೆಳಿಗ್ಗೆ ಚಾಮುಂಡೇಶ್ವರಿ ದರ್ಶನ ಪಡೆದು, ಪೂಜೆ ನೆರವೇರಿಸಿದ್ದಾರೆ. ಆದರೆ ಬೇರೆಯವರಿಗೆ ಅವಕಾಶ ನಿರಾಕರಿಸಲಾಗಿದೆ. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರನ್ನೂ ಸಹ ವಾಪಸ್ ಕಳಿಸಲಾಗಿದೆ.

ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ
ದರ್ಶನ್, ಸಂಸದೆ ಶೋಭಾ ಕರಂದ್ಲಾಜೆ ಅಂಥಹವರಿಗೆ ಮಾತ್ರವೇ ಏಕೆ ಅವಕಾಶ ನೀಡಲಾಗುತ್ತಿದೆ. ಬೇರೆಯವರಿಗೆ ಏಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಕಾರ್ಪೊರೇಟರ್ ಭಾಗ್ಯಾ ಮಹೇಶ್ ಪ್ರಶ್ನಿಸಿದ್ದಾರೆ. ಸಾರ್ವಜನಿಕರೂ ಸಹ ಇದೇ ಕಾರಣಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು ಕ್ಷಣಕಾಲ ಬಿಗುವಿನ ವಾತಾವರಣ ಸ್ಥಳದಲ್ಲಿ ನಿರ್ಮಾಣವಾಗಿತ್ತು.


Click it and Unblock the Notifications











