20 ನಿಮಿಷ ಬೆಟ್ಟದ ಹೂ ನೋಡಿ ಹೊರನಡೆದ ಅಶ್ವಿನಿ ಪುನೀತ್ ರಾಜ್ಕುಮಾರ್; ಅಪ್ಪು ನಮನದಲ್ಲೂ ಕಣ್ಣೀರು
ನಿನ್ನೆಯಿಂದ ( ಸೆಪ್ಟೆಂಬರ್ 28 ) ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮ ಆರಂಭಗೊಂಡಿದೆ. ನಿನ್ನೆ ಸಂಜೆ 6 ಗಂಟೆಗೆ ಉದ್ಘಾಟನೆಗೊಂಡ ಯುವ ದಸರಾ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಇನ್ನು 6 ಗಂಟೆಗೆ ಆರಂಭಗೊಂಡ ಯುವ ದಸರಾ ಕಾರ್ಯಕ್ರಮದ ಮೊದಲನೇ ದಿನವನ್ನು ಸಂಪೂರ್ಣವಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಯಿತು. 7 ಗಂಟೆಯಿಂದ 10 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮಕ್ಕೆ ಅಪ್ಪು ನಮನ ಎಂದೇ ಹೆಸರನ್ನು ಇಟ್ಟು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಲಾಯಿತು.
ಅಪ್ಪು ನಿಧನದ ನಂತರ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಇದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಗಾಯಕರಾದ ವಿಜಯ್ ಪ್ರಕಾಶ್, ಕುನಾಲ್ ಗಾಂಜಾವಾಲಾ ಹಾಗೂ ಗುರುಕಿರಣ್ ಅಪ್ಪು ಅವರ ಹಾಡುಗಳನ್ನು ಹಾಡಿ ರಂಜಿಸಿದರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಗಂಧದ ಗುಡಿ ಟೀಸರ್ ಕಂಡು ಭಾವುಕರಾದ ಅಶ್ವಿನಿ
ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರವಾದ ಗಂಧದಗುಡಿ ಸಿನಿಮಾದ ಟೀಸರ್ ಅನ್ನು ಈ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಟೀಸರ್ ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಮೆಂಟ್ ಮೂಲಕ ಜನತೆ ಸಾಂತ್ವನ ಹೇಳಿದ್ದಾರೆ. ಇನ್ನು ಗಂಧದಗುಡಿ ಚಿತ್ರ ಅಕ್ಟೋಬರ್ 28ರಂದು ಬಿಡುಗಡೆಗೊಳ್ಳಲಿದ್ದು, ತಿಂಗಳಿಗೂ ಮುನ್ನವೇ ಈ ಚಿತ್ರದ ಕ್ರೇಜ್ ಆರಂಭಗೊಂಡಿದೆ.

ಬೆಟ್ಟದ ಹೂ ವೀಕ್ಷಿಸಿದ ಅಶ್ವಿನಿ
ಇನ್ನು ಈ ಅಪ್ಪು ನಮನ ಕಾರ್ಯಕ್ರಮಕ್ಕೂ ಮುನ್ನ ಇದೇ ದಿನ ಬೆಳಿಗ್ಗೆ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅಪ್ಪು ಅವರ ಬೆಟ್ಟದ ಹೂ ಚಿತ್ರವನ್ನು ಮೊದಲು ಪ್ರದರ್ಶಿಸಲಾಯಿತು. ಅಶ್ವಿನಿ ಪುನೀತ್ ರಾಜ್ ಕುಮಾರ್ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಇನ್ನಿತರ ಮುಖಂಡರ ಜತೆ ಬೆಟ್ಟದ ಹೂ ಚಿತ್ರವನ್ನು ಇಪ್ಪತ್ತಕ್ಕೂ ಹೆಚ್ಚು ನಿಮಿಷಗಳ ಕಾಲ ವೀಕ್ಷಿಸಿದರು. ಹಾಗೂ ಈ ಚಿತ್ರ ವೀಕ್ಷಣೆಗೆ ಶಕ್ತಿಧಾಮದ ಮಕ್ಕಳು ಬರಬೇಕಿತ್ತು ಆದರೆ ಕಾರಣಾಂತರಗಳಿಂದ ಮಕ್ಕಳು ಗೈರಾಗಿದ್ದರು.

ಅಪ್ಪುಗೆ ಜೈಕಾರ ಹಾಕಿದ ಯುವಜನತೆ
ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಮುಂದಿನ ತಿಂಗಳಿಗೆ ವರ್ಷ ಕಳೆಯಲಿದೆ. ಹೀಗಿದ್ದರೂ ಸಹ ಜನತೆ ಅಪ್ಪುವನ್ನು ಮರೆತಿಲ್ಲ. ಅದರಲ್ಲೂ ಯುವಜನತೆ ತಮ್ಮ ನೆಚ್ಚಿನ 'ಯುವರತ್ನ'ನನ್ನು ನೆನೆಯದ ದಿನವಿಲ್ಲ. ನಿನ್ನೆಯೂ ಸಹ ಅಪ್ಪು ನಮನ ಕಾರ್ಯಕ್ರಮದ ವೇಳೆ ಯುವಕರು ಅಪ್ಪುಗೆ ಜೈಕಾರ ಹಾಕಿದ್ದಾರೆ. ದಸರಾ ವೇಳೆ ಅಪ್ಪು ಅವರ ಫೋಟೋಗೆ ದೀಪದಿಂದ ಅಲಂಕರಿಸಿರುವ ಕಟ್ ಔಟ್ ಮುಂದೆ ನಿಂತು ಅಪ್ಪು ಅಪ್ಪು ಎಂದು ಕೂಗಿದ್ದಾರೆ. ಒಟ್ಟಿನಲ್ಲಿ ನಿನ್ನೆಯ ಮೈಸೂರಿನ ಯುವ ದಸರಾ ಅಪ್ಪುಮಯವಾಗಿತ್ತು.


Click it and Unblock the Notifications











