ಕಥೆಗೆ ಸಾವಿಲ್ಲ ಎನ್ನುತ್ತಿದ್ದಾರೆ ಕನ್ನಡಿಗ ಸಿನಿಮಾ ನಿರ್ದೇಶಕ ಬಿ.ಎಂ ಗಿರಿರಾಜ
ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕ ಬಿ ಎಂ. ಗಿರಿರಾಜ ಅವರು ಕಾದಂಬರಿಗಾರನಾಗಿದ್ದಾರೆ. ನವಿಲಾದವರು, ಜಟ್ಟ, ಮೈತ್ರಿ, ಅಮರಾವತಿಯಂಥ ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರ ಮುಂದಿಟ್ಟ ನಟ, ನಿರ್ದೇಶಕ ಗಿರಿರಾಜ ಅವರು ತಮ್ಮ ಚೊಚ್ಚಲ ಕಾದಂಬರಿಯನ್ನು ಸಿದ್ಧಪಡಿಸಿದ್ದಾರೆ.
ಈ ನಡುವೆ ಕನ್ನಡ ಚಿತ್ರರಂಗದ ಶೋ ಮ್ಯಾನ್ ವಿ ರವಿಚಂದ್ರನ್ ಅವರನ್ನು ವಿಭಿನ್ನ ಪಾತ್ರದ ಮೂಲಕ ''ಕನ್ನಡಿಗ'' ನಾಗಿ ತೆರೆಗೆ ತರುವ ಯತ್ನದಲ್ಲಿದ್ದಾರೆ ಗಿರಿರಾಜ್. ಈ ಚಿತ್ರಕ್ಕಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡಾ ವಿಶೇಷ ಪ್ರೋತ್ಸಾಹ ನೀಡಿ, ಕನ್ನಡ ಭಾಷೆ, ಸಂಸ್ಕೃತಿ ಕುರಿತ ವಿಶೇಷ ಹಾಡಿಗೆ ದನಿಗೂಡಿಸಿದ್ದಾರೆ.
ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನ (ಏಪ್ರಿಲ್ 24) ದಂದು ನಾದ ಬ್ರಹ್ಮ ಹಂಸಲೇಖ ಅವರು ಗಿರಿರಾಜ ಅವರ ಕಾದಂಬರಿ "ಕಥೆಗೆ ಸಾವಿಲ್ಲ" ಲೋಕಾರ್ಪಣೆ ಮಾಡಲಿದ್ದಾರೆ.

"ಕಥೆಗೆ ಸಾವಿಲ್ಲ" ಕಾದಂಬರಿಯ ಮುಖಪುಟವನ್ನು ಚನ್ನಕೇಶವ ಅಂದವಾಗಿ ಚಿತ್ರಿಸಿದ್ದಾರೆ. ಕನ್ನಡ ಲೋಕ ಆನ್ಲೈನ್ ಪುಸ್ತಕ ಮಳಿಗೆಯಲ್ಲಿ ಪ್ರೀ ಆರ್ಡರ್ ಮಾಡಬಹುದು ಎಂದು ಕಾನ್ಕೇವ್ ಪಬ್ಲಿಕೇಷನ್ನ ನಂದೀಶ್ ತಿಳಿಸಿದ್ದಾರೆ.
ಹೆಂಗಸರ ಧ್ವನಿಯಲ್ಲಿ ಮಾಟವಿದೆ
ಅದು ಹೀಯಾಳಿಸಿದಾಗ ಸಹಿಸಲಾಗುವುದಿಲ್ಲ
ಅದು ಹೊಗಳಿದಾಗ ಉಬ್ಬದೇ ಇರಲಾಗುವುದಿಲ್ಲ
ಅದು ಸಹಾಯ ಕೇಳಿ ಬಂದಾಗ
''ಇಲ್ಲ'' ಅನ್ನಲು ಆಗುವುದೇ ಇಲ್ಲ ಎಂಬ ಸಾಲು ಬೆನ್ನುಡಿಯಲ್ಲಿದ್ದರೆ..
ಕಥೆಗೆ ಸಾವಿಲ್ಲ ಕಾದಂಬರಿಯ ಮುನ್ನುಡಿ ನಮ್ಮ ಓದುಗರಿಗಾಗಿ ಇಲ್ಲಿದೆ...
ಸಾವಿರದ ಕಥೆಗೆ ಮೊದಲು.
ನಮ್ಮ 'ಮಾಧ್ಯಮ್' ಬೀದಿ ನಾಟಕ ಬಳಗದಲ್ಲಿ ನನಗೆ ಕಲಾವಿದನಾಗಿ ಪರಿಚಯವಾದ ಗೆಳೆಯ ಬಿ.ಎಂ. ಗಿರಿರಾಜ. ಮುಂದೆ ಅವನೊಡನೆ ಒಡನಾಟ ಹೆಚ್ಚಾದಂತೆ 'ಗಿರಿ ನವಿಕೋ' ಎಂದರೆ ನಡೆದಾಡುವ ವಿಶ್ವಕೋಶ ಎಂದೇ ನಮಗೆ ಚಿರಪರಿಚಿತ.

ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯದ ಬಹುತೇಕ ಎಲ್ಲಾ ಪ್ರಾಕಾರಗಳನ್ನು ಓದಿಕೊಂಡಿರುವ ನಮ್ಮ ಗೆಳೆಯರ ಪೈಕಿ ಗಿರಿ ಬಿಟ್ಟರೆ ಮತ್ತೊಬ್ಬರಿಲ್ಲವೆಂದೇ ಹೇಳಬಹುದು. ಗಿರಿಯ ಜ್ಞಾನ, ಮಾಹಿತಿ, ಅರಿವು ಬಾನಿನ ಆಕಾಶಗಂಗೆಯಿಂದ ಹಿಡಿದು ಪಾತಾಳದ ಉಲ್ಕಾಪಾತಗಳವರೆಗೂ ಅಗಲ-ವಿಸ್ತಾರ ಉಳ್ಳದ್ದು.
ಗಿರಿಯ ಬರವಣಿಗೆಯ ಪ್ರಥಮ ಪ್ರಯತ್ನವೇ 'ಕಾದಂಬರಿ' ಆಗಿರುವುದು ಒಂದು ದಾಖಲೆಯೇ ಸರಿ. ನೇರವಾಗಿ ಮೊದಲಿಗೇ ಕಾದಂಬರಿಯನ್ನು ಆಯ್ದುಕೊಳ್ಳುವ ಧೈರ್ಯ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ. ಕಾದಂಬರಿಯ ಒಟ್ಟಾರೆ ನಿರೂಪಣೆಯಲ್ಲ ಇಂಗ್ಲೀಷ್ ಸಾಹಿತ್ಯದ ಘಮಲು ತುಂಬಿಕೊಂಡಿರುವುದು ಇಂಗ್ಲೀಷ್ ನಾವೆಲ್ಗಳ ಓದಿನ ಪ್ರಭಾವ ಢಾಳಾಗಿ ಕಾಣಿಸುತ್ತದೆ.
ಪಾತ್ರಗಳ ವಿನ್ಯಾಸದಲ್ಲಿ ಅವುಗಳನ್ನು ವಿಕಸಿಸುವ ರೀತಿ ಹಾಗೂ ಚಿಕ್ಕಚಿಕ್ಕ ವಿವರಗಳನ್ನು ಒಪ್ಪವಾಗಿ, ಪ್ರತ್ಯಕ್ಷ ಕಂಡಂತೆ ಕಟ್ಟಿಕೊಟ್ಟಿರುವ ಬಗೆ ಕಥೆಯ ಗಟ್ಟಿತನವನ್ನು ಕಾಯ್ದುಕೊಂಡಿದೆ. ಇದರಿಂದ ಗಿರಿ ಪ್ರಥಮ ಪ್ರಯತ್ನದಲ್ಲಿ ಇದು ನಾನು ಬರೆಯುತ್ತಿರುವ ಮೊದಲ ಮುನ್ನುಡಿ.
'ಕಥೆಗೆ ಸಾವಿಲ್ಲ' ವಿದೇಶದಲ್ಲಿದ್ದು ತಾಯ್ನೆಲಕ್ಕೆ ವಾಪಾಸ್ಸಾಗುವ ಕೌಸ್ತುಭನ ಪಾತ್ರದೊಂದಿಗೆ ಕವಲೊಡೆಯುತ್ತಾ ಹೋಗುತ್ತದೆ. ಮಲೆನಾಡಿನ ಪರಿಸರ, ಅಲ್ಲಿನ ವೈಶಿಷ್ಟತೆಗಳು, ಅಲ್ಲಿನ ಭಾಷೆಯ ಸೊಗಡು, ಆಚರಣೆ-ಮಾಧ್ಯಮಗಳೊಂದಿಗೆ ಬೆಳೆಯುವ ಕಥೆ ಕೌಸ್ತುಭನ ಮೂಲಕ ಎರಡು ತಲೆಮಾರುಗಳ, ಎರಡು ಸಂಸ್ಕೃತಿಗಳ (ಪೌರತ್ಯ/ಪಾಶ್ಚಿಮಾತ್ಯ) ಮುಖಾಮುಖಿಗೂ ಸಾಕ್ಷಿಯಾಗುತ್ತದೆ.
ಒಟ್ಟಾರೆ ಕಥೆಯ ನಿರೂಪಣೆಯಲ್ಲಿ ಇಂಗ್ಲೀಷ್ ಥ್ರಿಲ್ಲರ್ ಸಮನಾದ ಶೈಲಿಯನ್ನು ಅನುಸರಿಸಿರುವುದು ಇಡೀ ಕಥೆ ಕುತೂಹಲವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
'ಕಥೆಗೆ ಸಾವಿಲ್ಲ' ಕಾದಂಬರಿಯನ್ನು ಓದಿ ಮುಗಿಸುವ ಹೊತ್ತಿಗೆ ಒಂದು ಗಾಢ ಅನುಭೂತಿಗೆ ಒಳಗಾದ ಭಾವ ಓದುಗನನ್ನು ಆವರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟರಮಟ್ಟಿಗೆ 'ಗಿರಿ' ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಾನೆ. ನವ್ಯೋತ್ತರ ಕನ್ನಡ ಸಾಹಿತ್ಯ ಪ್ರಕಾರದ ಎಲ್ಲಾ ಗುಣಲಕ್ಷಣಗಳನ್ನೂ ತೋರುತ್ತಾ ಸಾಗುವ 'ಕಾದಂಬರಿ' ಬಂಡಾಯದ, ಜಾಗತೀಕರಣದ ಅಂಡರ್ ಕರೆಂಟ್ ಇರುವುದನ್ನೂ ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಕಾಣಿಸುತ್ತದೆ.
"ಏನೋ ಕಾರಣ ಇರಬೇಕು ತಾನೇ ನಿನ್ನ ಜೊತೆ ಆದದೆಲ್ಲ ನಿನ್ನ ಜೊತೆಯೇ ಆಗಲಿಕ್ಕೆ" ಎನ್ನುವ ಮಾತು ಮುರ್ನಾಲ್ಕು ಕಡೆ ಬರುವ ಈ ವಾಕ್ಯ ಓದುಗನನ್ನು ಚಿಂತೆಗೆ ಹಚ್ಚುತ್ತೆ/ಕಾಡುತ್ತೆ. ಒಟ್ಟಾರೆ ಕಥಾನಕದ ಒನ್-ಲೈನರ್ ಕೂಡಾ ಆಗುತ್ತೆ.
ಸಿನೆಮಾ ಜೊತೆಗೆ ಕಾದಂಬರಿ ಮತ್ತು ಸಣ್ಣ ಕಥೆಗಳ ಪ್ರಾಕಾರದಲ್ಲಿ ತೊಡಗಿರುವ ಗಿರಿ, ಮತ್ತಷ್ಟು ವಿಸ್ತಾರವಾಗಿ ತನ್ನ ಜ್ಞಾನದ ಕಸುವನ್ನು ಬರವಣಿಗೆಯ ಮೂಲಕ ಹೆಚ್ಚಿಸಿಕೊಳ್ಳಲೆಂದು ಹಾಗೂ ಲೇಖಕನಾಗಿ ಗಿರಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ.
Recommended Video
-ಎಂ ದಯಾನಂದ.


Click it and Unblock the Notifications











