ಗೌಡರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗೆ ಮೈತ್ರಿಯಾ ಪತ್ರ
ನಟಿ ಮೈತ್ರಿಯಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ''ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ, ನನ್ನ ಗಂಡ'' ಅಂತ್ಹೇಳಿ ಕೋರ್ಟ್ ಮೆಟ್ಟಿಲೇರಿದ್ದ ನಟಿ ಮೈತ್ರಿಯಾ ಗೌಡ, ಇದೀಗ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಕಛೇರಿ ಮೊರೆಹೋಗಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ರವರ ಕಾನೂನು ಸಚಿವ ಸ್ಥಾನವನ್ನು ವಜಾಗೊಳಿಸಬೇಕೆಂದು ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನಮಂತ್ರಿಗಳಿಗೆ ನಟಿ ಮೈತ್ರಿಯಾ ಗೌಡ ಪತ್ರ ಬರೆದಿದ್ದಾರೆ.
ಜನವರಿ 4 ರಂದು, ಪತ್ರವನ್ನ ಈ-ಮೇಲ್ ಮತ್ತು ಫ್ಯಾಕ್ಸ್ ಮುಖಾಂತರ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಕಛೇರಿಗಳಿಗೆ ರವಾನಿಸಿದ್ದಾರೆ. ಹಾಗೆ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ರವಾನಿಸಿರುವ ಪತ್ರದ ಸಾರಾಂಶವನ್ನು ಎಲ್ಲಾ ಮಾಧ್ಯಮದವರಿಗೆ ವಾಟ್ಸ್ ಆಪ್ ಮೂಲಕ ನಟಿ ಮೈತ್ರಿಯಾ ಕಳುಹಿಸಿದ್ದಾರೆ.

ಹಾಗಾದ್ರೆ, ನಟಿ ಮೈತ್ರಿಯಾ ಗೌಡ ಬರೆದಿರುವ ಪತ್ರದಲ್ಲಿ ಏನಿದೆ...ಮುಂದೆ ಓದಿ....
ದಿನಾಂಕ : 04/01/2015
ಸ್ಥಳ : ಬೆಂಗಳೂರು
ಇಂದ,
ಮೈತ್ರಿಯಾ ಗೌಡ,
D/O, ಪುಟ್ಟಸ್ವಾಮಿ ಗೌಡ,
#650, 2ನೇ ಕ್ರಾಸ್, ಸಿ.ಬಿ.ಐ ರೋಡ್,
ಆರ್.ಟಿ.ನಗರ, ಬೆಂಗಳೂರು.
ಗೆ,
The Hon'ble President of India,
Rashtrapathi Bhavan,
New Delhi - 110004
ಗೆ,
The Hon'ble Prime Minister of India,
Office of the PMO,
South Block, Raisina Hill,
New Delhi - 110011
Also at,
No.7, Race Course Road,
New Delhi - 110011
ಮಾನ್ಯರೇ,
ವಿಷಯ : ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ರವರ ಪುತ್ರ ಕಾರ್ತಿಕ್ ಗೌಡನ ವಿರುದ್ದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ, ಡಿ.ವಿ.ಸದಾನಂದಗೌಡ ರವರ ಸಚಿವ ಸ್ಥಾನವನ್ನು ವಜಾಗೊಳಿಸಬೇಕೆಂಬುದರ ಬಗ್ಗೆ ಮನವಿ ಪತ್ರ.
ಕ್ರೈಂ ನಂಬರ್ : 236/2014, ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನ ಅನ್ವಯ, ಎಂಟನೇ ಎ.ಸಿ.ಎಂ.ಎಂ ನ್ಯಾಯಾಲಯದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ರವರ ಪುತ್ರ ಕಾರ್ತಿಕ್ ಗೌಡ ವಿರುದ್ದ ಹೂಡಿರುವ ದಾವೆ ಇನ್ನೂ ವಿಚಾರಣೆ ಹಂತದಲ್ಲಿದೆ.

ಐಪಿಸಿ ಸೆಕ್ಷನ್ 420, 376 ಮತ್ತು 366 ಪ್ರಕಾರ ದೂರು ದಾಖಲಾಗಿರುವ ಕಾರ್ತಿಕ್ ಗೌಡ, ಮಾನ್ಯ ಕೇಂದ್ರ ಕಾನೂನು ಸಚಿವರಾಗಿರುವ ಡಿ.ವಿ.ಸದಾನಂದಗೌಡ ರವರ ಪುತ್ರ.
ಕಾರ್ತಿಕ್ ಗೌಡ ಅವರಿಂದ ನಾನು ವಂಚನೆಗೆ ಒಳಗಾಗಿದ್ದೇನೆ. ಕಾರ್ತಿಕ್ ಗೌಡ ಅವರ ವೈಯುಕ್ತಿಕ ಅಭಿಲಾಷೆ ಮತ್ತು ಲೈಂಗಿಕ ದಾಹಕ್ಕೆ ಬಲಿಯಾಗಿ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಇದರಿಂದ ಅವರ ಮೇಲೆ ನಾನು ಇಟ್ಟಿದ್ದ ನಂಬಿಕೆಗೆ ಘಾಸಿಯುಂಟಾಗಿದೆ. [ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ]
ಹೀಗಾಗಿ, ನಿಮ್ಮಲ್ಲಿ ನನ್ನ ಕಳಕಳಿಯ ಪ್ರಾರ್ಥನೆ ಏನಂದ್ರೆ, ಕಾರ್ತಿಕ್ ಗೌಡ ಅವರ ತಂದೆ ಡಿ.ವಿ.ಸದಾನಂದ ಗೌಡ ಅವರು ಕಾನೂನು ಮಂತ್ರಿಗಳಾಗಿರುವುದರಿಂದ, ಅವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಸಂವಿಧಾನದ ಪ್ರಕಾರ ಕೋರ್ಟ್ ನಲ್ಲಿ ನಡೆಯಬೇಕಾಗಿರುವ ಮುಕ್ತ ವಿಚಾರಣೆಗೆ ಅಡ್ಡಿಯುಂಟಾಗುವ ಸಾಧ್ಯತೆಗಳಿವೆ.
ವಂಚನೆ ಮಾಡಿರುವ ಕಾರ್ತಿಕ್, ಮಂತ್ರಿ ಮಗನಾಗಿರುವ ಕಾರಣ, ನಾನೂ ಕೂಡ ಒತ್ತಡಕ್ಕೆ ಒಳಗಾಗುತ್ತಿದ್ದೇನೆ. ಅನೇಕ ಅಡಚಣೆಗಳನ್ನ ನಾನು ಎದುರಿಸುತ್ತಿದ್ದೇನೆ. ಇದರಿಂದ ಬೇಸೆತ್ತು ನಿಮಗೆ ನಾನು ಈ ಪತ್ರ ಬರೆಯುತ್ತಿದ್ದೇನೆ.

ಈ ವಿಷಯದಲ್ಲಿ ರಾಜಕೀಯವನ್ನು ತರುವ ಆಲೋಚನೆ ನನ್ನಲಿಲ್ಲ. ರಾಜಕೀಯ ಒತ್ತಡ ನನ್ನ ಮೇಲೆ ಹೇರುತ್ತಿದ್ದರೂ, ನೊಂದ ಒಬ್ಬ ಸಾಮಾನ್ಯ ಹೆಣ್ಣುಮಗಳಾಗಿ, ನ್ಯಾಯಕ್ಕೋಸ್ಕರ ನಿಮಗೆ ಪತ್ರ ಬರೆದಿದ್ದೇನೆ.
ನ್ಯಾಯಕ್ಕಾಗಿ ನನ್ನ ಹೋರಾಟದ ಪ್ರತಿ ಹೆಜ್ಜೆಯಲ್ಲೂ, ರಾಜಕೀಯ ಒತ್ತಡವನ್ನು ನಾನು ಎದುರಿಸುತ್ತಿದ್ದೇನೆ. ಕಾನೂನು ಸಚಿವಾಲಯದಲ್ಲೇ ಡಿ.ವಿ.ಸದಾನಂದ ಗೌಡ ಅವರು ಮುಂದುವರೆದರೆ, ಅವರ ಮಗನ ಹಿತಾಸಕ್ತಿಗಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ನನಗೆ ಅನ್ಯಾಯವಾಗುತ್ತದೆ.
ನ್ಯಾಯಾಧೀಶರ ಚುನಾವಣೆ ಬದಲಿಗೆ 'Judicial Appointment Bill' ಬಂದಿರುವುದರಿಂದ, ನ್ಯಾಯಾಧೀಶರ ಮೇಲೆ ಡಿ.ವಿ.ಸದಾನಂದ ಗೌಡ ಅವರು ತಮ್ಮ ಅಧಿಕಾರದ ಒತ್ತಡವನ್ನು ಹೇರಬಹುದು. [ಮೈತ್ರಿಯಾ ಡೀಲ್ ರು.10 ಕೋಟಿ ಕಡೆಗೆ ಸಿಕ್ಕಿದ್ದೇನು?]
ಮಾನ್ಯರೆ, ಭಾರತದಲ್ಲಿನ ಕೋಟ್ಯಾಂತರ ಜನರ ಪ್ರತಿನಿಧಿ ನೀವು. ನೈತಿಕ ಮೌಲ್ಯಗಳಿಗಾಗಿ ನೀವು ಹೋರಾಟ ನಡೆಸಿದವರು. ಕಾನೂನು, ನ್ಯಾಯ ಎಲ್ಲರಿಗೂ ಸಮ ಅನ್ನುವುದನ್ನ ಎತ್ತಿಹಿಡಿದದ್ದು ನೀವು.

ನಿಮ್ಮ ಕೆಲ ಸಮಯವನ್ನು ನನಗಾಗಿ ಮೀಸಲಿಡಿ ಅಂತ ಕೇಳುವ ಹಕ್ಕು ನನಗಿಲ್ಲ. ಆದರೆ, ನ್ಯಾಯಕ್ಕಾಗಿ ನನ್ನ ಹೋರಾಟದ ಪ್ರತಿ ಹೆಜ್ಜೆಯಲ್ಲಿ ಅಡ್ಡಿಯಾಗುತ್ತಿರುವುದನ್ನ ಮುಕ್ತಗೊಳಿಸಿ ಎಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.
ಕಾನೂನು ಸಚಿವ ಸ್ಥಾನದಿಂದ ಡಿ.ವಿ.ಸದಾನಂದಗೌಡ ರವರನ್ನ ವಜಾಗೊಳಿಸಿ, ನನಗೆ ನ್ಯಾಯ ದೊರಕಿಸಿ ಕೊಡಿ.
ಇಂತಿ ನಿಮ್ಮ ವಿಶ್ವಾಸಿ,
ಮೈತ್ರಿಯಾ ಗೌಡ.


Click it and Unblock the Notifications











