ನನ್ನ ಹಳ್ಳಿಯಲ್ಲೂ ಸಾಲು ಸಾಲು ಹೆಣಗಳು ಬೀಳುತ್ತಿವೆ; ನಾಗತಿಹಳ್ಳಿ ಚಂದ್ರಶೇಖರ್
ದೇಶದಲ್ಲಿ ಕೊರೊನಾ ಭೀಕರತೆಗೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಕಣ್ಣೀರಾಕುತ್ತಿದ್ದಾರೆ. ಮಹಾಮಾರಿ ಕೊರೊನಾಗೆ ತತ್ತರಿಸಿ ಹೋಗಿರುವ ದೇಶವನನ್ನು ಕಾಪಾಡಲು ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕೊರೊನಾದಿಂದ ನಾಲ್ಕು ಮಂದಿ ಆಪ್ತರನ್ನು ಕಳೆದಿಕೊಂಡಿದ್ದಾರೆ. ಕೊರೊನಾ ಭೀಕರತೆ ಬಗ್ಗೆ ನಾಗತಿಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ಹಳ್ಳಿಗಳಾದರೂ ಸುರಕ್ಷಿತವಾಗಿವೆ ಅಂದುಕೊಂಡರೆ ಹಳ್ಳಿಗಳಲ್ಲೂ ಸಾಲು ಸಾಲು ಹೆಣಗಳು ಬೀಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಅಸಹಾಯಕರಂತೆ ಕಾಣುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
'ನಮ್ಮ ತಲೆಮಾರು ಇಂಥ ಕರಾಳ ದಿನಗಳಿಗೆ ಸಾಕ್ಷಿಯಾದೀತು ಎಂದು ಯಾರೂ ಎಣಿಸಿರಲಿಲ್ಲ. ಶತಾಯ ಗತಾಯ ಹೋರಾಡಿ ಹಾಸಿಗೆ ಪಡೆದುಕೊಂಡರೆ ದಾಖಲಾಗುವ ಮೊದಲೇ ನಾಲ್ವರು ಮಾರ್ಗ ಮಧ್ಯದಲ್ಲಿ ಮೃತ್ಯುಮಂಚವೇರಿದ್ದಾರೆ. ಕ್ಷೇಮವೆಂದು ನಂಬಿದ್ದ ನನ್ನ ಹಳ್ಳಿಯಲ್ಲೂ ಸಾಲುಸಾಲಾಗಿ ಹೆಣಬೀಳುತ್ತಿವೆ. ಎಲ್ಲರೂ ಅಸಹಾಯಕರಂತೆ ಕಾಣುತ್ತಿದ್ದೇವೆ' ಎಂದು ನೋವಿನ ಮಾತುಗಳನ್ನು ಆಡಿದ್ದಾರೆ.

ಕೊರೊನಾ ಎರಡನೇ ಅಲೆಯ ಭೀಕರತೆಗೆ ಬಡವರು, ಶ್ರೀಮಂತರು, ಗಣ್ಯರು ಎನ್ನದೇ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲೂ ಅನೇಕ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಪಕ ರಾಮು, ಮಂಜುನಾಥ್, ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು, ಹಿರಿಯ ನಟ ರಾಜಾರಾಮ್ ಸೇರಿದಂತೆ ಇನ್ನು ಅನೇಕರು ಕೊರೊನಾಗೆ ಬಲಿಯಾಗಿದ್ದಾರೆ.


Click it and Unblock the Notifications











