ಅಮೃತೋತ್ಸವ ಮೃತೋತ್ಸವವಾಗುವುದು ಖಚಿತ; ಸಿಎಂ ಬೊಮ್ಮಾಯಿಗೆ ನಿರ್ದೇಶಕ ನಾಗತಿಹಳ್ಳಿ ಸಲಹೆ
ಕೊರೊನಾ ಮೂರನೆ ಅಲೆಯ ಭೀತಿ ಕಾಡುತ್ತಿದೆ. 2ನೇ ಅಲೆಯ ಭೀಕರತೆ ಕಡಿಮೆಯಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಷ್ಟುತ್ತಿಗೆ ಮೂರನೆ ಅಲೆಯ ಭಯ ಶುರುವಾಗಿದೆ. ಈಗಾಗಲೇ ಕೊರೊನಾ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕರ್ನಾಟಕದಲ್ಲೂ ಕೊರೊನಾ ಭಯ ಶುರುವಾಗಿದೆ. ಈಗಾಗಲೇ ಸರ್ಕಾರ ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಈಗಿನಿಂದಲೇ ಕೊರೊನಾ 3ನೇ ಅಲೆ ಕಟ್ಟಿಹಾಕಲು ಕ್ರಮ ಕೈಗೊಳ್ಳುತ್ತಿದೆ. ಆದರೂ ಸಂಖ್ಯೆ ಏರಿಕೆಯಾಗುತ್ತಿದೆ.
ಕೊರೊನಾ 3ನೇ ಅಲೆ ನಿಯಂತ್ರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಕರ್ನಾಟಕದಲ್ಲಿ ನಿನ್ನೆ (ಆಗಸ್ಟ್ 08) ಒಂದೇ ದಿನ 1,598 ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲೇ 290 ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಒಂದೇ ದಿನ ಕರ್ನಾಟಕದಲ್ಲಿ ಕೊರೊನಾ 25 ಮಂದಿಯನ್ನು ಬಲಿ ಪಡೆದಿದೆ. ಹಾಗಾಗಿ ಈಗಿನಿಂದಲೇ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಇನ್ನೊಂದೆ ಕೊರೊನಾ ಲಸಿಕಾ ಅಭಿಯಾನ ಕೂಡ ನಡೆಯುತ್ತಿದೆ. ಅನೇಕರು ಲಸಿಕೆ ಪಡೆದು ಕೊರೊನಾದಿಂದ ರಕ್ಷಣೆ ಪಡೆಯುತ್ತಿದ್ದಾರೆ.
ಈ ನಡುವೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ. ಲಸಿಕೆ ಪಡೆದು ಮೂರನೆಯ ಅಲೆಯನ್ನು ವೈಜ್ಞಾನಿಕವಾಗಿ ಎದುರಿಸದಿದ್ದರೆ ಅಮೃತೋತ್ಸವ ಮೃತೋತ್ಸವವಾಗುವುದು ಖಚಿತ ಎಂದು ಹೇಳಿದ್ದಾರೆ.

"ಮಾನ್ಯ ಮುಖ್ಯಮಂತ್ರಿಗಳೇ, ಸ್ವಾತಂತ್ರ್ಯ ಹಬ್ಬದ ಅಮೃತೋತ್ಸವ ಬಂತು. ಎಲ್ಲ ಜನ ಎರಡೂ ಲಸಿಕೆ ಪಡೆದು ಮೂರನೆಯ ಅಲೆಯನ್ನು ವೈಜ್ಞಾನಿಕವಾಗಿ ಎದುರಿಸದಿದ್ದರೆ ಅಮೃತೋತ್ಸವ ಮೃತೋತ್ಸವವಾಗುವುದು ಖಚಿತ. ದಯಮಾಡಿ ನಿಮ್ಮ ಆಂತರಿಕ ಬಿಕ್ಕಟ್ಟು ಬದಿಗಿರಿಸಿ ಸಮರೋಪಾದಿಯಲ್ಲಿ 'ಲಸಿಕಾ ಅಭಿಯಾನ'ಕೈಗೊಳ್ಳಿ" ಎಂದು ಹೇಳಿದ್ದಾರೆ.
ಈ ಮೊದಲು ಸಹ ಅಂದರೆ ಬಸವರಾಜ ಸಿಎಂ ಆಗಿ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ಟ್ವೀಟ್ ಮಾಡಿ, ;ಹೈಕಮಾಂಡ್, ಲೋ ಕಮ್ಯಾಂಡ್ ಹಂಗು ಮೀರಿ ಅದ್ಭುತ ಕೆಲಸಮಾಡಿ. ಚಮಚೆಗಳನ್ನು ದೂರವಿಟ್ಟು ಕೆಲಸ ಮಾಡಿ' ಎಂದು ಮನವಿ ಮಾಡಿದ್ದರೆ.
"ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮನುಷ್ಯ ಪ್ರೀತಿ; ಸಾಹಿತ್ಯ ಪ್ರೀತಿ; ಪ್ರಾಣಿ ಪ್ರೀತಿ ಉಳ್ಳ ನೀವು ನನ್ನಂಥವರಿಗೆ ಆಸೆ ಹುಟ್ಟಿಸಿದ್ದೀರಿ. ಹೈ ಕಮಾಂಡ್, ಲೋ ಕಮ್ಯಾಂಡ್ ಹಂಗು ಮೀರಿ ಅದ್ಭುತ ಕೆಲಸ ಮಾಡಿ. ಚಮಚೆಗಳನ್ನು ದೂರವಿಡಿ. ಸಮಾಜದ ಕಟ್ಟ ಕಡೆಯ ಜೀವರ ಬಗ್ಗೆ ಕಾಳಜಿ ಇರಲಿ. ಅಧಿಕಾರವು ಅಲ್ಪಕಾಲೀನ. ಒಳಿತಾಗಲಿ" ಎಂದು ನಾಗತಿಹಳ್ಳಿ ಟ್ವೀಟ್ ಮಾಡಿದ್ದರು.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ವಿಚಾರಕ್ಕೆ ಬರುವುದಾದರೆ 1986ರಲ್ಲಿ ಬಂದ 'ಕಾಡಿನ ಬೆಂಕಿ' ಸಿನಿಮಾಗೆ ಸಂಭಾಷಣೆ ಮತ್ತು ಸಾಹಿತ್ಯ ಬರೆಯುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಉಂಡು ಹೋದ ಕೊಂಡು ಹೋದ ಸಿನಿಮಾ ಮೂಲಕ ಚಂದ್ರಶೇಖರ್ ನಿರ್ದೇಶನಕ್ಕೆ ಇಳಿದರು. ಬಳಿಕ ಅನೇಕ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅಮೆರಿಕಾ ಅಮೆರಿಕಾ ಸಿನಿಮಾ ಮೂಲಕ ದೊಡ್ಡ ಖ್ಯಾತಿಗಳಿಸಿದರು. ಪ್ಯಾರಿಸ್ ಪ್ರಣಯ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ ಹೀಗೆ ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಕೊನೆಯದಾಗಿ ಇಂಡಿಯ ವರ್ಸಸ್ ಇಂಗ್ಲೆಡ್ ಸಿನಿಮಾ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ವಸಿಷ್ಠ ಸಿಂಹ ಮತ್ತು ಮಾನ್ವಿತಾ ಕಾಮತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ನಾಗತಿಹಳ್ಳಿ ಮುಂದಿನ ಸಿನಿಮಾದ ಮೇಲೆ ಯಾವುದು ಎನ್ನುವ ಕುತೂಹಲ ಮೂಡಿಸಿದೆ. ವಿಭಿನ್ನ ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಿರುವ ನಾಗತಿಹಳ್ಳಿ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications











