ಪ್ರವಾಹ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿದ ನಾಗತಿಹಳ್ಳಿ ಚಂದ್ರಶೇಖರ್
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕಲಬುರ್ಗಿ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಪ್ರವಾಹ ಬಂದೊದಗಿತ್ತು. ಪ್ರವಾಹ ಸಂತ್ರಸ್ತರಿಗೆ ನೆರವಾಗಲೆಂದು ನಾಗತಿಹಳ್ಳಿ ಚಂದ್ರಶೇಖರ್ ಅವರ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಟೆಂಟ್ ಸಿನಿಮಾ ತಂಡ ಹಣಕಾಸು ಸಂಗ್ರಹಿಸಿತ್ತು.
ಭಾನುವಾರದಂದು ಕಲಬುರ್ಗಿ ಜಿಲ್ಲೆಯ ಕೆಲ ಭಾಗಗಳಿಗೆ ಭೇಟಿ ನೀಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಅವರ ತಂಡ ಪ್ರವಾಹ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಮತ್ತು ಇತರೆ ಅವಶ್ಯಕ ಸಾಮಗ್ರಿಗಳನ್ನು ವಿತರಿಸುವ ಜೊತೆಗೆ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿದ್ದಾರೆ.

ಆಹಾರ ಸಾಮಗ್ರಿ ವಿತರಿಸಿದ ನಾಗತಿಹಳ್ಳಿ ಚಂದ್ರಶೇಖರ್
ಕಲಬುರ್ಗಿ ಜಿಲ್ಲೆ, ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, 'ನದಿ ತೀರದ ಗ್ರಾಮಗಳು ಸ್ವಚ್ಛಂದವಾಗಿ, ಸಮೃದ್ಧವಾಗಿ ಇರಬೇಕೆ ಹೊರತು, ಸಂಕಷ್ಟಕ್ಕೆ ಈಡಾಗಬಾರದು' ಎಂದರು.

ಹಳ್ಳಿಗರ ಸಂಘಟಿತ ಹೋರಾಟದ ಅವಶ್ಯಕತೆ ಇದೆ: ನಾಗತಿಹಳ್ಳಿ
ಎಷ್ಟೋ ಹಳ್ಳಿಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ, ಆದರೆ ಇಲ್ಲಿ ಕೆಲವು ಹಳ್ಳಿಗಳ ಪಕ್ಕದಲ್ಲಿ ಯಥೇಚ್ಛವಾಗಿ ನೀರಿದ್ದರೂ ಸಹ ಸೂಕ್ತವಾಗಿ ಬಳಕೆ ಆಗುತ್ತಿಲ್ಲ. ಹಳ್ಳಿಗರ ಸಂಘಟಿತ ಹೋರಾಟದಿಂದಷ್ಟೆ ಬದಲಾವಣೆ ಸಾಧ್ಯ ಎಂದರು ನಾಗತಿಹಳ್ಳಿ ಚಂದ್ರಶೇಖರ್.

ಉದ್ದುದ್ದ ಭಾಷಣ ಮಾಡುತ್ತಾರೆ: ನಾಗತಿಹಳ್ಳಿ
ಬೆಂಗಳೂರಿನಲ್ಲಿ ಕುಳಿತುಕೊಂಡ ಕೆಲವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಉದ್ದುದ್ದ ಲೇಖನಗಳು, ಪುಸ್ತಕಗಳು ಬರೆಯುತ್ತಾರೆ. ಈ ರೀತಿಯ ವರ್ತನೆ ಕೇವಲ ಕನಿಕರ ಎನಿಸಿಕೊಳ್ಳುತ್ತದೆ. ಹತ್ತಿರದಿಂದ ಕಂಡಾಗ ಮಾತ್ರವೇ ಹಳ್ಳಿ ಜೀವನ ಅರ್ಥವಾಗುವುದು ಎಂದಿದ್ದಾರೆ ನಾಗತಿಹಳ್ಳಿ.
Recommended Video

ಸಹಾಯಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ: ನಾಗತಿಹಳ್ಳಿ
ನಾನು ಇಲ್ಲಿಗೆ ಬಂದು ಸಹಾಯ ಮಾಡುತ್ತಿರುವುದಕ್ಕೆ ಬೇರೆ ಅರ್ಥವೇನೂ ಇಲ್ಲ. ಬೆಂಗಳೂರು-ಕಲಬುರ್ಗಿ ಭೌತಿಕವಾಗಿ ದೂರವಷ್ಟೆ, ಮಾನಸಿಕವಾಗಿ ಎಲ್ಲರೂ ಒಂದೇ. ನೀವು ಬೆಳೆದ ಧಾನ್ಯವನ್ನು ನಾವು ಬೆಂಗಳೂರಿನಲ್ಲಿ ತಿನ್ನುತ್ತಿದ್ದೇವೆ, ಹಾಗಾಗಿ ನೀವು ಕಷ್ಟದಲ್ಲಿರುವಾಗ ನಿಮ್ಮಜೊತೆಗಿರಲು ಇಲ್ಲಿಗೆ ಬಂದಿದ್ದೇನೆ ಅಷ್ಟೆ ಎಂದರು ನಾಗತಿಹಳ್ಳಿ ಚಂದ್ರಶೇಖರ್.


Click it and Unblock the Notifications











