ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ಆಯ್ಕೆ
ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನ ಆಯ್ಕೆ ಮಾಡಲಾಗಿದೆ. ಈ ಕೂಡಲೇ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಜೂನ್ 20 ರಂದು ಕರ್ನಾಟಕ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬಿದ್ದಿದ್ದು, ಸದ್ಯದಲ್ಲೇ ನಾಗತಿಹಳ್ಳಿ ಚಂದ್ರಶೇಖರ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಪ್ರಸ್ತುತ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ಕಳೆದ ಮೂರು ವರ್ಷದಿಂದ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಲವು ಯಶಸ್ವಿ ಕಾರ್ಯಕ್ರಮಗಳು ಇವರ ಸಾರಥ್ಯದಲ್ಲಿ ಆಗಿದೆ. ಇದೀಗ, ಈ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನ ಸರ್ಕಾರ ಸೂಚಿಸಿದೆ.

ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಚಿತ್ರರಂಗದ ಹಿರಿಯ ಮತ್ತು ಹೆಸರಾಂತ ನಿರ್ದೇಶಕ, ಬರಹಗಾರ ಹಾಗೂ ನಟ ಕೂಡ ಹೌದು. ಕಳೆದ ಮೂರು ದಶಕಗಳಿಂದ ಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ಸಕ್ರಿಯವಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಹಲವು ಪುಸ್ತಕ ಬರೆದಿದ್ದಾರೆ. ಸಿನಿಮಾ ಜೊತೆಗೆ ಧಾರಾವಾಹಿಗಳನ್ನ ನಿರ್ದೇಶನ ಮಾಡಿದ್ದಾರೆ.

1986ರಲ್ಲಿ 'ಕಾಡಿನ ಬೆಂಕಿ' ಚಿತ್ರದ ಮೂಲಕ ಬರಹಗಾರರಾಗಿ ಸಿನಿ ಪಯಣ ಆರಂಭಿಸಿದರು. 1991ರಲ್ಲಿ 'ಉಂಡು ಹೋದ ಕೊಂಡು ಹೋದ' ಚಿತ್ರವನ್ನ ಮೊದಲ ಸಲ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿತ್ತು. 'ಕೊಟ್ರೇಶಿ ಕನಸು', 'ಅಮೇರಿಕಾ ಅಮೇರಿಕಾ',' ಹೂಮಳೆ', 'ನಮ್ಮ ಪ್ರೀತಿಯ ಹುಡುಗಿ', 'ಸೂಪರ್ ಸ್ಟಾರ್', 'ಪ್ಯಾರೀಸ್ ಪ್ರಣಯ', 'ಅಮೃತಧಾರೆ', 'ಮಾತಡ್ ಮಾತಡ್ ಮಲ್ಲಿಗೆ', ಇತ್ತೀಚಿಗೆ 'ಇಷ್ಟಕಾಮ್ಯ' ಚಿತ್ರದವರೆಗೂ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











