ಲಾರಿಗಳಲ್ಲಿ ಪಶುಗಳಂತೆ ಮನುಷ್ಯರ ಸಾಗಾಟ: ಸಿಎಂ ಗೆ ನಾಗತಿಹಳ್ಳಿ ಮನವಿ
ಕೊರೊನಾ ಭೀತಿಯಿಂದ ಇಡೀಯ ಕರ್ನಾಟಕ ಸ್ತಬ್ಧವಾಗಿದೆ. ಬಹುತೇಕರು ಮನೆಗಳಲ್ಲೇ ಉಳಿದಿದ್ದಾರೆ. ಆದರೆ ಮನೆಯೇ ಇಲ್ಲದವರ ಸ್ಥಿತಿ?
ಹೌದು, ಕೊರೊನಾ ಬರಬಾರದೆಂದರೆ ಮನೆಯಲ್ಲಿರಬೇಕು ಎಂದು ಸರ್ಕಾರ, ವೈದ್ಯರು, ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ ಮನಯೇ ಇಲ್ಲದವರು ಈ ಸಂದರ್ಭದಲ್ಲಿ ಏನು ಮಾಡಬೇಕು, ಎಲ್ಲಿರಬೇಕು?
ಸೂರಿಲ್ಲದವರು ಬೆಂಗಳೂರಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಊರಿಗೆ ಹೋಗಲು ಪರಾಡುತ್ತಿದ್ದಾರೆ. ಇಂಥಹವರನ್ನು ಊರಿಗೆ ತಲುಪಿಸಲು ಸೂಕ್ತ ವ್ಯವಸ್ಥೆಗಳೇ ಇಲ್ಲ. ಲಾರಿಗಳಲ್ಲಿ ಪಶುಗಳಂತೆ ಅವರನ್ನು ತುಂಬಿಕೊಂಡು ಹೋಗಲಾಗುತ್ತಿದೆಯಂತೆ.

ಊರಿಗೆ ಹೋಗಲು ಎಲ್ಲರೂ ಧಾವಂತದಲ್ಲಿದ್ದಾರೆ
ಹೌದು, ದಿನಗೂಲಿಗೆಂದು ಬೇರೆ ಬೇರೆ ಕಡೆಗಳಿಂದ ಬೆಂಗಳೂರಿಗೆ ಬಂದವರು, ಕೊರೊನಾ ಲಾಕ್ಡೌನ್ ಆದ ನಂತರ ಇಲ್ಲಿ ನೆಲೆ ನಿಲ್ಲಲು ಸಾಧ್ಯವಾಗದೇ ಇರುವ ಕಾರಣ ಊರಿಗೆ ಹೋಗುವ ಧಾವಂತದಲ್ಲಿದ್ದಾರೆ. ಆದರೆ ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ.

ನಾಗತಿಹಳ್ಳಿ ಚಂದ್ರಶೇಖರ್ ಕಣ್ಣಿಗೆ ಬಿದ್ದ ದೃಶ್ಯ
ಇಂಥಹವರನ್ನು ಲಾರಿಗಳಲ್ಲಿ ಕುರಿ ಮಂದೆಯಂತೆ ತುಂಬಿ ಕೊಂಡೊಯ್ಯಲಾಗುತ್ತಿದೆ. ಇಂತಹುದೇ ಒಂದು ದೃಶ್ಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಣ್ಣಿಗೆ ಬಿದ್ದಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಟ್ರಕ್ಕುಗಳಲ್ಲಿ ವಿಳ್ಯದೆಲೆಯಂತೆ ತುಂಬಿ ಸಾಗಿಸುತ್ತಿದ್ದಾರೆ
ಬನಶಂಕರಿ 3 ನೇ ಹಂತದ ಪಿಇಎಸ್ ಕಾಲೇಜಿನ ಎದುರಿನ ಸ್ಲಂನಲ್ಲಿ ರಸ್ತೆ, ಕಟ್ಟಡ ನಿರ್ಮಿಸುವ ಕೂಲಿಕಾರರನ್ನು ಸಾಲುಸಾಲಾದ ಟ್ರಕ್ಕುಗಳಲ್ಲಿ ವೀಳ್ಯದೆಲೆಗಳಂತೆ ತುರುಕಿ ದೂರದಲ್ಲಿರಬಹುದಾದ ಅವರ ಊರುಗಳಿಗೆ ಸಾಗಿಸುತ್ತಿದ್ದರು. ಭೀತರಾದ ಹೆಂಗಸರು ಮಕ್ಕಳೂ ಇದ್ದರು ಎಂದು ನಾಗತಿಹಳ್ಳಿ ಚಂದ್ರಶೇಖರ್ ಅವರು ತಾವು ಕಂಡ ದೃಶ್ಯದ ಬಗ್ಗೆ ಫೇಸ್ಬುಕ್ನಲ್ಲಿ ಹಾಕಿದ್ದಾರೆ.

ದುಡಿದು ಉಣ್ಣಬೇಕಾದವರು ಏನು ಮಾಡಬೇಕು?
ಸರಕಾರ, ಸಾಹಿತಿಗಳು, ಕಲಾವಿದರು,ಗಾಯಕರು ಎಲ್ಲರೂ ‘ಮನೆಯಿಂದಾಚೆ ಬರಬೇಡಿ' ಎನ್ನುತ್ತೇವೆ. ಸರಿಯೆ.ಈ ಮಹಾನಗರದಲ್ಲಿ ಮನೆಯೇ ಇಲ್ಲದವರು, ಅಂದಂದು ದುಡಿದು ಉಣ್ಣಬೇಕಾದವರು ಏನು ಮಾಡಬೇಕು? ಎಲ್ಲಿ ಹೋಗಬೇಕು?ಮಾನ್ಯಮುಖ್ಯಮಂತ್ರಿಗಳೇ, ತಕ್ಷಣ ಒಂದು ವಿಶೇಷ ಟಾಸ್ಕ್ ಫೋರ್ಸ್ ರಚಿಸಿ ಇಂಥ ದೀನರನ್ನು ಅವರ ಮನೆಯಿರುವಲ್ಲಿಗೆ ಉಚಿತವಾಗಿ ಸೇರಿಸಿ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಿ ಎಂದು ಬಿನ್ನಹ ಎಂದಿದ್ದಾರೆ ನಾಗತಿಹಳ್ಳಿ.


Click it and Unblock the Notifications











