ಸುದೀಪ್ ಪರ ಸೈಮಾ ಪ್ರಶಸ್ತಿ ಪಡೆಯುವುದು ನನಗೆ ಮುಜುಗರವಾಯಿತು- ವಿ. ನಾಗೇಂದ್ರ ಪ್ರಸಾದ್
ಇತ್ತೀಚೆಗೆ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನವಾಗಿದೆ ಎಂದು ನಟ ದುನಿಯಾ ವಿಜಯ್ ಆರೋಪಿಸಿದ್ದರು. ವೇದಿಕೆಯಲ್ಲೇ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. 'ಮ್ಯಾಕ್ಸ್' ಚಿತ್ರಕ್ಕಾಗಿ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಸುದೀಪ್ ಪರವಾಗಿ ವಿ. ನಾಗೇಂದ್ರ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದ್ದರು.
ನಟ ಸುದೀಪ್ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಅಷ್ಟಾಗಿ ಹೋಗುವುದಿಲ್ಲ. 'ಮಾರ್ಕ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸೈಮಾ ಸಂಭ್ರಮದಲ್ಲಿ ಭಾಗಿ ಆಗಿರಲಿಲ್ಲ. ಹಾಗಾಗಿ ಸುದೀಪ್ ಪರವಾಗಿ ಅಲ್ಲಿದ್ದ ಗೀತಸಾಹಿತಿ ವಿ. ನಾಗೇಂದ್ರ ಪ್ರಸಾದ್ ಪ್ರಶಸ್ತಿ ಪಡೆಯುವಂತಾಯಿತು. ಅದು ನನಗೆ ಮುಜುಗರ ಉಂಟುಮಾಡಿತು ಎಂದು ಅವರು ಹೇಳಿದ್ದಾರೆ. ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ಅವ್ಯವಸ್ಥೆ ಬಗ್ಗೆ ಬೇಸರ ಹೊರಹಾಕಿದ್ದಾರೆ. ದುನಿಯಾ ವಿಜಯ್ ಹೇಳಿದ್ದು ನಿಜ ಎಂದು ಗ್ಯಾರಂಟಿ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

"13ನೇ ವರ್ಷದ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೀತು. ಈವರೆಗೆ ನನಗೆ ಪ್ರಶಸ್ತಿ ಸಿಕ್ಕಿಲ್ಲ. ಪ್ರತಿವರ್ಷ ನನ್ನ ಹೆಸರು ನಾಮಿನೇಟ್ ಆಗಿತ್ತು. ಆದರೆ ಪ್ರಶಸ್ತಿ ಸಿಕ್ಕಿಲ್ಲ. ಪ್ರಶಸ್ತಿ ನೀಡಲು ಆಯೋಜರು ಏನೇನು ಮಾನದಂಡ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. 'ಅಪ್ಪ ಐ ಲವ್ ಯು' ಹಾಗೂ 'ನೀನೇ ರಾಮ ನೀನೇ ಶ್ಯಾಮ' ಹಾಡಿಗಿಂತಲೂ ಒಳ್ಳೆ ಹಾಡು ಯಾವುದಿತ್ತೋ ನನಗೆ ಗೊತ್ತಿಲ್ಲ" ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
ಸುದೀಪ್ ಪರ ಪ್ರಶಸ್ತಿ ಸ್ವೀಕರಿಸಿದ ಸನ್ನಿವೇಶದ ಬಗ್ಗೆ ನಾಗೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. "ಆ ಪ್ರಶಸ್ತಿ ಘೋಷಿಸುವಾಗ ಇಡೀ ಆಡಿಟೋರಿಯಂ ಖಾಲಿಯಾಗಿತ್ತು. 10 ಜನ ಕ್ಯಾಮರಾಮನ್ಗಳಿದ್ದರು ಅಷ್ಟೇ. ನಾನು, ವಿಜಯ್ ಬಾಗಿಲ ಬಳಿ ಇದ್ವಿ. ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಸಿದ್ರು. ನಾನು ತಿರುಗಿ ನೋಡಿದ್ರೆ ಯಾರು ಇಲ್ಲ, ಖಾಲಿ ಚೇರ್ಗಳಿದ್ದವು. ನಗಬೇಕೋ, ಅಳಬೇಕೋ ಗೊತ್ತಾಗಲಿಲ್ಲ. ಸುದೀಪ್ ಇಲ್ಲ, ಜನವೇ ಇಲ್ಲ. ವೇದಿಕೆಯಲ್ಲಿದ್ದ ನಿರೂಪಕರು ನಮ್ಮವರು. ನನ್ನನ್ನು ನೋಡಿ ನಾಗೇಂದ್ರ ಪ್ರಸಾದ್ ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸಬೇಕು ಅಂದ್ರು" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.

"ನಿರೂಪಕರು ನನ್ನನ್ನು ಕರೆದಾಗ ಬೇರೆ ವಿಧಿ ಇರಲಿಲ್ಲ. ಹೋಗದಿದ್ದರೆ ನಿರೂಪಕರಿಗೂ ಮುಜುಗರ, ನನಗೂ ಮುಜುಗರವಾಯಿತು. ನಾನು ಹೋಗಿ ತೆಗೆದುಕೊಳ್ಳದೇ ಇದ್ದಿದ್ದರೆ ಸುದೀಪ್ ಅವರ ಪ್ರಶಸ್ತಿಯನ್ನು ಮನೆಗೆ ಕಳುಹಿಸುತ್ತಿದ್ರು. ಆದರೆ ಆ ಪ್ರಶಸ್ತಿ ತಗೋಳೋಕೆ ಒಬ್ಬ ಕನ್ನಡಿಗನೂ ಇಲ್ವಾ ಅಲ್ಲಿ ಅನ್ನುವಂತಾಗುತ್ತಿತ್ತು. ಹಾಗಾಗಿ ನಾನು ಹೋಗಿ ಪ್ರಶಸ್ತಿ ತಗೊಂಡು ಸುದೀಪ್ ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿಬಂದೆ. ನಾನು ಹೇಳಿದ್ದು ಕೂಡ ಕ್ಯಾಮರಾಗೆ, ಕಾರಣ ವೇದಿಕೆ ಮುಂಭಾಗದಲ್ಲಿ ಜನರಿರಲಿಲ್ಲ" ಎಂದು ವಿ. ನಾಗೇಂದ್ರ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ನಾಮಿನೇಟ್ ಆಗಿದ್ದವರು, ಆಗದವರು ಸಾಕಷ್ಟು ಜನ ದುಬೈಗೆ ಬಂದಿದ್ದರು. ಯಾಕೆ ಬಂದಿದ್ದರೋ ಗೊತ್ತಿಲ್ಲ. ಆಯೋಜಕರು ಒಂದಷ್ಟು ಜಾಹೀರಾತು ಪಡೆದುಕೊಂಡು ಪ್ರಶಸ್ತಿ ವಿತರಣೆ ಸಮಾರಂಭ ನಡೆಸುತ್ತಾರೆ. ಅದರ ಸುತ್ತಾ ದೊಡ್ಡ ವ್ಯಾಪಾರ ಇರುತ್ತದೆ. ಸೆಲೆಬ್ರೆಟಿಗಳು ಬಂದಾಗ ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ ಬರೀ ವ್ಯಾಪಾರ ಆಗಬಾರದು. ಮೂಲ ಉದ್ದೇಶ ಹೊರಟು ಹೋಗಬಾರದು. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ನಡೆಸುತ್ತಾರೆ. ಒಳ್ಳೆ ರೀತಿ ನಡೆಸುತ್ತಾರೆ. ಪ್ರಜವಾಣಿ ಪ್ರಶಸ್ತಿ, ಚಿತ್ತಾರ ಪ್ರಶಸ್ತಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಕೆಲವು ಪ್ರಶಸ್ತಿಗಳನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಲು ಅರ್ಜುನ್ ಪ್ರಶಸ್ತಿ ಸ್ವೀಕರಿಸಿ ಹೊರಡುತ್ತಿದ್ದಂತೆ ಇಡೀ ಆಡಿಟೋರಿಯಂ ಖಾಲಿ ಆಗಿಬಿಡ್ತು ಎಂದು ನಾಗೇಂದ್ರ ಪ್ರಸಾದ್ ವಿಶ್ಲೇಷಿಸಿದ್ದಾರೆ.


Click it and Unblock the Notifications











