ನಾಗೇಂದ್ರ ಅವರಿಗೆ ಇಂಥಾ ಪರಿಸ್ಥಿತಿ ಯಾಕೆ ಬಂತು?
ತಮ್ಮಾ ನೀ ಸುಮ್ಮನಿರು !ಹಿಂದಿ ಸಿನೆಮಾ ಸಂಗೀತಕ್ಕೆ ಕಲ್ಯಾಣ್ಜೀ ಆನಂದ್ಜೀ ಜೋಡಿಯಿದ್ದಂತೆ ಕನ್ನಡಕ್ಕೆ ರಾಜನ್- ನಾಗೇಂದ್ರ ಜೋಡಿ ಅನ್ನುವ ಮಾತಿತ್ತು. ಹಿಂದಿಯ ಸೋದರರು ಶಾಶ್ವತವಾಗಿ ಮೌನವಾಗಿದ್ದರೆ, ನಮ್ಮ ಅದೃಷ್ಟಕ್ಕೆ ಕನ್ನಡದ ಜೋಡಿ ನಮ್ಮ ನಡುವಿದ್ದಾರೆ.
ಸದ್ಯಕ್ಕೆ ನಾಗೇಂದ್ರ ಸುದ್ದಿಯಲ್ಲಿದ್ದರೂ ಅದು ಅವರ ಸಾಧನೆಗೆ ಸಂಬಂಧಿಸಿದಂತಲ್ಲ . ಅವರ ಆರೋಗ್ಯ ಹದಗೆಟ್ಟಿದೆ. ಚಿತ್ರೋದ್ಯಮದ ಬಂದ್ ಕೃಪೆಯಿಂದಾಗಿ ಅದು ಇನ್ನಷ್ಟು ಹದಗೆಟ್ಟಿದೆ. ಬೀಪಿ ಜಾಸ್ತಿಯಾಗಿದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಸುಸ್ತಾದ ನಾಗೇಂದ್ರ ಸರಕಾರಿ ಆಸ್ಪತ್ರೆಯ ಹಾಸಿಗೆ ಹಿಡಿಯಬೇಕಾಯಿತು .
ನಾಗೇಂದ್ರ ಸರಕಾರಿ ಆಸ್ಪತ್ರೆಗೆ ಸೇರಿದರು ಎನ್ನುವ ಒಂದು ವಾಕ್ಯವೇ ಎಲ್ಲರ ಹುಬ್ಬೇರಿಸುವುದಕ್ಕೆ ಸಾಕು. ನಾಲ್ಕು ದಶಕಗಳಿಂದ ಕನ್ನಡ ತೆಲುಗು, ತಮಿಳು, ಸಿಂಹಳಿ, ತುಳು ಭಾಷೆಗಳೂ ಸೇರಿದಂತೆ 375 ಚಿತ್ರಗಳಿಗೆ ಸಂಗೀತ ನೀಡಿದ ಜೋಡಿಯಲ್ಲಿ ಒಬ್ಬರಾದ ; ? ಯಾವುದಾದರೂ ಒಳ್ಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಸಾಧ್ಯವಿರಲಿಲ್ಲವೇ ?
ಇಂಥ ಪ್ರಶ್ನೆಗೆ ಉತ್ತರ ನಾಗೇಂದ್ರ ಅವರ ಎರಡನೇ ಪತ್ನಿ ವಿಜಯಲಕ್ಷ್ಮಿ ಅವರ ಮಾತಲ್ಲಿದೆ. ಅವರು ಹೇಳುವಂತೆ ರಾಜನ್-ನಾಗೇಂದ್ರ ಜೋಡಿ ಕೆಲಸದಲ್ಲಷ್ಟೇ ಪಾಲುದಾರರು. ಸಂಭಾವನೆಯ ವಿಚಾರ ಬಂದಾಗ ರಾಜನ್ಗೆ ಸಿಂಹ ಪಾಲು. ನಾಗೇಂದ್ರಗೆ ನರಿ ಪಾಲು. ಈಗ ನೀವೇ ಲೆಕ್ಕ ಹಾಕಬಹುದು. ರಾಜನ್- ನಾಗೇಂದ್ರ ಜೋಡಿ ಜನಪ್ರಿಯವಾದದ್ದು 70ರ ಅಂತ್ಯ ಮತ್ತು 80ರ ದಶಕದಲ್ಲಿ. ಆಗ ಒಂದು ಚಿತ್ರಕ್ಕೆ ಅಬ್ಬಬ್ಬಾ ಅಂದರೆ 20ರಿಂದ 30 ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿತ್ತು. -ಅದರಲ್ಲಿ ರಾಜನ್ಗೆ ಮುಕ್ಕಾಲು ಭಾಗ ಹೋದರೆ ನಾಗೇಂದ್ರರಿಗೆ ಉಳಿಯುವುದಾದರೂ ಎಷ್ಟು ?
ಶ್ರೀಮತಿ ನಾಗೇಂದ್ರರ ಮಾತಿಗೆ ಪೂರಕವಾಗಿ ಕೆಲವು ವರ್ಷಗಳ ಹಿಂದೆ ನಾಗೇಂದ್ರರನ್ನು ಭೇಟಿಯಾಗಲು ಹೋದ ಪತ್ರಕರ್ತರ ಅನುಭವ ಹೀಗಿದೆ. ರಾಜನ್-ನಾಗೇಂದ್ರರ ಜೋಡಿ ಪ್ರತ್ಯೇಕ ಮನೆಗಳಲ್ಲಿ ನೆಲೆಸಿದ್ದರೂ ಇಬ್ಬರೂ ಇರುವುದು ಆರ್. ಟಿ.ನಗರದ ಬಡಾವಣೆಯಾಂದರಲ್ಲಿ. ರಾಜನ್ ಅವರ ದೊಡ್ಡ ಮನೆಗಿಂತ ನಾಲ್ಕು ಮನೆ ಆಚೆಗೆ ನಾಗೇಂದ್ರರ ಚಿಕ್ಕ ಮನೆ, ದೊಡ್ಡ ಸಂಸಾರ. ಮುಂಜಾನೆ ಅಲ್ಲಿಗೆ ಹೋದ ಪತ್ರಕರ್ತರ ಕಣ್ಣಿಗೆ ಮೊದಲು ಕಾಣಿಸಿದವರು ನಾಗೇಂದ್ರ. ಅವರ ಎರಡೂ ಕೈಯಲ್ಲಿ ನೀರಿನ ಬಕೆಟ್. ಅಣ್ಣನ ಮನೆಯಿಂದ ತಮ್ಮ ನೀರು ಹೊತ್ತು ತರುತ್ತಿದ್ದ.
ಅಂತೂ ನಾಗೇಂದ್ರರ ಅನಾರೋಗ್ಯದ ಕಾರಣದಿಂದ ಸೋದರರ ಮನೆವಾರ್ತೆ ಬೀದಿಗೆ ಬರುವಂತಾಯಿತು.
ಮೂಲತಃ ಮೈಸೂರಿನವರಾದ ರಾಜನ್- ನಾಗೇಂದ್ರ ಜೋಡಿಯಲ್ಲಿ ಅಣ್ಣ ವಯಲಿನ್ ತಜ್ಞ. ತಮ್ಮ ಜಲತರಂಗದಲ್ಲಿ ನಿಪುಣ. ಜೊತೆಗೆ ಒಳ್ಳೆ ಗಾಯಕ. ತಂದೆ ರಾಜಪ್ಪ ಮೂಕಿ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದರು. ಅದೇ ಕನೆಕ್ಷನ್ ಮಕ್ಕಳಿಗೆ ವರವಾಯಿತು. ವಿಠಲಾಚಾರ್ಯರ ಚಂಚಲ ಕುಮಾರಿ ಈ ಜೋಡಿ ಸಂಗೀತ ನೀಡಿದ ಮೊದಲ ಚಿತ್ರ. ಅನಂತರ ನಾಲ್ಕು ದಶಕಗಳ ಕಾಲ ಜನಪ್ರಿಯತೆಯ ದೋಣಿಯಲ್ಲಿಯೇ ಸಂಚಾರ.
90 ರ ದಶಕದಲ್ಲಿ ಚಿತ್ರ ಸಂಗೀತದ ದಿಕ್ಕು ದೆಸೆ ಬದಲಾದಾಗ ಈ ಜೋಡಿ ಮರೆಗೆ ಸರಿಯಿತು. ಟ್ಯೂನ್ಗಳಲ್ಲಿ ಏಕತಾನತೆ ಕಾಣಿಸಿಕೊಳ್ಳತೊಡಗಿತು. ಹಾಗಿದ್ದೂ ಸಭೆ ಸಮಾರಂಭಗಳಿಗೆ ಜೊತೆಯಾಗಿ ಬರುತ್ತಿದ್ದ ಇವರಿಬ್ಬರೂ, ವೇದಿಕೆಯಲ್ಲಿ ಜೊತೆಯಾಗಿ ಹಾಡುತ್ತಿದ್ದ ದೃಶ್ಯ ಅವಿಸ್ಮರಣೀಯ
ಮುತ್ತೆೈದೆ ಭಾಗ್ಯ ಚಿತ್ರದ ನಮ್ಮೂರೆ ಚಂದ, ನಮ್ಮವರೇ ಅಂದ ಗೀತೆ ನಾಗೇಂದ್ರರು ಹಿನ್ನೆಲೆ ಗಾಯಕರಾಗಿ ಹಾಡಿದ ಮೊದಲ ಹಾಡು. ಅನಂತರ ರತ್ನ ಮಂಜರಿಯ ಯಾರು ಯಾರು ನೀ ಯಾರು, ಕೌಬಾಯ್ ಕುಳ್ಳ ಚಿತ್ರದ ಹೆಣ್ಣಿನ ಕಣ್ಣಿನ ನೋಟ, ನವಜೀವನದ ಭಾಮಾ ಭಾಮಾ ನಾನರಿಯದ ಮನದ ಮರ್ಮ, ಗಾಳಿ ಮಾತು ಚಿತ್ರದ ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲ್ಲಿ ಗೀತೆಗಳು ಜನಪ್ರಿಯವಾದವು.
ಅವರದು ಕೊಂಚ ದಪ್ಪ ಕಂಠ. ಕೆಲವು ವಿಶಿಷ್ಟ ಗೀತೆಗಳಿಗಷ್ಟೇ ಹೊಂದಿಕೊಳ್ಳುವಂಥಾದ್ದು . ಇದು ನಾಗೇಂದ್ರ ಅವರಿಗೂ ಗೊತ್ತಿತ್ತು.
ಕೆಲವು ವರ್ಷಗಳ ಹಿಂದೆ ಪೋಷಕ ನಟ ರಾಜಾನಂದ್ ಹಾಸಿಗೆ ಹಿಡಿದಾಗ, ಅದು ಒಂದು ದೊಡ್ಡ ಸುದ್ದಿಯಾಗಿ ಚಿತ್ರರಂಗದವರು, ಸಾರ್ವಜನಿಕರು, ಸರಕಾರ - ಇವರೆಲ್ಲರೂ ತಾ ಮುಂದೆ, ನಾ ಮುಂದೆ ಎಂದು ಕೈಯೆತ್ತಿ ಧನ ಸಹಾಯ ಮಾಡಿದ್ದರು. ನಾಗೇಂದ್ರರ ವಿಷಯದಲ್ಲಿ ಹಾಗಾಗುತ್ತಿಲ್ಲ . ಸದ್ಯದ ಸಂಕಷ್ಟದಿಂದ ಅವರು ಪಾರಾದರೂ ಸಂಗೀತ ನಿರ್ದೇಶಕರಾಗಿ ಈ ಜೋಡಿ ಮರುಜನ್ಮ ಪಡೆಯುವುದು ಅಸಾಧ್ಯದ ಮಾತು.
ಕಾಲ ಬದಲಾಗಿದೆ. ಅಭಿರುಚಿ ಬದಲಾಗಿದೆ. ನಾಗೇಂದ್ರ ಏನಿದ್ದರೂ ತಮ್ಮ ಬದುಕು ಸೇರಿದಂತೆ ಎಲ್ಲಾ ಬದಲಾವಣೆ ಮತ್ತು ಬೆಳವಣಿಗೆಗೆ ಮೂಕ ಪ್ರೇೕಕ್ಷಕ.


Click it and Unblock the Notifications