ರಾಮ್ ಗೋಪಾಲ್ ವರ್ಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ನಗ್ಮ
''ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿದ್ದು ಸರಿ ಇಲ್ಲ. ಇಂತಹ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲು ಇದು ಸರಿಯಾದ ಸಮಯ ಅಲ್ಲವೇ ಅಲ್ಲ'' - ಹೀಗಂತ ವಾಹಿನಿಯೊಂದರ ಲೈವ್ ಪ್ರೋಗ್ರಾಂ ನಲ್ಲಿ ನಟಿ ನಗ್ಮ ಹೇಳಿದರು.
ಅಷ್ಟಕ್ಕೂ, ನಗ್ಮ ಹಾಗೆ ಹೇಳುವುದಕ್ಕೂ ಒಂದು ಕಾರಣ ಇದೆ. ನಟಿ ಶ್ರೀದೇವಿ ಕೊನೆಯುಸಿರೆಳೆದಾಗ ಇಡೀ ಭಾರತವೇ ಶಾಕ್ ಆಗಿತ್ತು. ಶ್ರೀದೇವಿ ಸೌಂದರ್ಯವನ್ನು ಆರಾಧಿಸುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಸಹಜವಾಗಿ ದಿಗ್ಭ್ರಾಂತಗೊಂಡದರು.
ಶ್ರೀದೇವಿ ನಿಧನದ ಸುದ್ದಿ ಕೇಳಿ ಹಳೇ ನೆನಪುಗಳಿಗೆ ಜಾರಿದ ರಾಮ್ ಗೋಪಾಲ್ ವರ್ಮಾ, ಅಭಿಮಾನಿಗಳಿಗಾಗಿ ಒಂದು ಪತ್ರ ಬರೆದರು.

''ಸುರಸುಂದರಿ ಶ್ರೀದೇವಿ ಖುಷಿಯಾಗಿ ಜೀವನ ನಡೆಸುತ್ತಿರಲಿಲ್ಲ. ತಂದೆಯ ಸಾವಿನ ಬಳಿಕ ಶ್ರೀದೇವಿ ಪಂಜರದಲ್ಲಿ ಬಂಧಿಯಾದ ಪಕ್ಷಿಯಂತಾದರು. ಶ್ರೀದೇವಿ ಬಳಿ ನಯಾ ಪೈಸೆಯೂ ಇಲ್ಲದ ಹೊತ್ತಿಗೆ, ಆಕೆಯ ಜೀವನಕ್ಕೆ ಬೋನಿ ಕಪೂರ್ ಎಂಟ್ರಿಕೊಟ್ಟರು. ಬೋನಿ ಕಪೂರ್ ಮೊದಲ ಪತ್ನಿ ಮೋನಾಗೆ ಮೋಸವಾಗಿದೆ ಎಂದು ಬೋನಿ ತಾಯಿ ಪಂಚತಾರಾ ಹೋಟೆಲ್ ಒಂದರಲ್ಲಿ ಶ್ರೀದೇವಿ ಹೊಟ್ಟೆಗೆ ಗುದ್ದಿದ್ದರು'' ಅಂತೆಲ್ಲ ಪತ್ರದಲ್ಲಿ ರಾಮ್ ಗೋಪಾಲ್ ವರ್ಮಾ ಉಲ್ಲೇಖಿಸಿದ್ದರು.
ಇದನ್ನೆಲ್ಲ ಓದಿದ ಮೇಲೆ ನಟಿ ನಗ್ಮ ಅಸಮಾಧಾನಗೊಂಡರು. ಶ್ರೀದೇವಿ ಇಹಲೋಕ ತ್ಯಜಿಸಿರುವ ಹೊತ್ತಲ್ಲಿ, ರಾಮ್ ಗೋಪಾಲ್ ವರ್ಮಾ ಇದನ್ನೆಲ್ಲ ಬರೆಯಬಾರದಿತ್ತು ಎಂದು ನಗ್ಮ ಬೇಸರ ವ್ಯಕ್ತ ಪಡಿಸಿದರು.
ಅಷ್ಟಕ್ಕೂ, ಶ್ರೀದೇವಿ ಅಭಿಮಾನಿಗಳ ಆಸ್ತಿ. ಹೀಗಾಗಿ, ಅಭಿಮಾನಿಗಳು ಸತ್ಯ ತಿಳಿದುಕೊಳ್ಳಲೇಬೇಕು ಎಂದು ಇದನ್ನೆಲ್ಲ ಬರೆದಿರುವುದಾಗಿ ಪತ್ರದಲ್ಲಿ ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ.


Click it and Unblock the Notifications











