ಅಭಿಷೇಕ್ - ಅವಿವಾ ಆರತಕ್ಷತೆಯಲ್ಲಿ ಅಂಬರೀಶ್ ಅವರ ಆಸೆ ನೆನೆದ ನಾಗಶೇಖರ್
ಮೊನ್ನೆ ಜೂನ್ 5ರಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಕಲ್ಯಾಣ ಅದ್ಧೂರಿಯಾಗಿ ನೆರವೇರಿತು. ವಿವಿಧ ಕ್ಷೇತ್ರಗಳ ಗಣ್ಯರು ಕಲ್ಯಾಣೋತ್ಸವಕ್ಕೆ ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದಾರೆ. ಅಂಬಿ ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೂ ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರಿಗೆ ಸ್ನೇಹಿತರಿದ್ದರು. ಇನ್ನು ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ತಂದೆಯಂತೆ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೊನ್ನೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಹಲವಾರು ಅತಿಥಿಗಳು ಹಾಗೂ ಅಭಿಮಾನಿಗಳು ಆಗಮಿಸಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿಗೆ ಶುಭ ಕೋರಿದ್ದರು. ಇದೀಗ ಈ ಜೋಡಿಯ ಆರತಕ್ಷತೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ಇಂದು ( ಜೂನ್ 7 ) ನಡೆಯುತ್ತಿದೆ.

ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯರ ಜತೆಗೆ ಅಭಿಮಾನಿಗಳಿಗೂ ಸಹ ಆಹ್ವಾನ ನೀಡಲಾಗಿದೆ. ಅದರಂತೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಭಿಷೇಕ್ ಅಂಬರೀಶ್ ಮೊದಲ ಚಿತ್ರ ಅಮರ್ಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ನಾಗಶೇಖರ್ ಸೇರಿದಂತೆ ಹಲವಾರು ಕಲಾವಿದರು ಹಾಜರಾಗಿದ್ದಾರೆ.
ಹೀಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಗಶೇಖರ್ ನವ ವಿವಾಹಿತರಿಗೆ ಶುಭ ಕೋರಿ ಮಾಧ್ಯಮ ಮಿತ್ರರ ಜತೆ ಮಾತನಾಡಿದರು. ಈ ವೇಳೆ ದಿಗ್ಗಜ ನಟ ಅಂಬರೀಶ್ ಅವರ ಆಸೆಯನ್ನೂ ಸಹ ನಾಗಶೇಖರ್ ತಿಳಿಸಿದರು.
"ನಮಸ್ಕಾರ. ಇವತ್ತು ಕನ್ನಡ ಚಿತ್ರರಂಗದ ಯುವ ಪ್ರತಿಭೆ, ಯುವ ನಾಯಕನಟ, ಮತ್ತೋರ್ವ ಸೂಪರ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಮದುವೆ. ಅವರನ್ನು ಸಿನಿಮಾ ರಂಗಕ್ಕೆ ಲಾಂಚ್ ಮಾಡಬೇಕು, ನಾಗಶೇಖರ್ ಲಾಂಚ್ ಮಾಡಬೇಕು ಅಂತ ಅಂಬರೀಶ್ ಅಣ್ಣ ಅವರಿಗೆ ತುಂಬಾ ಆಸೆ ಇತ್ತು. ಹಾಗಾಗಿ ಅವರನ್ನು ನಾನೇ ಲಾಂಚ್ ಮಾಡಿದ್ದೆ. ಸಿನಿಮಾ ಅಮರ್ ಮೂಲಕ ದೊಡ್ಡ ಸ್ಟಾರ್ ಆಗಿ. ಇವತ್ತು ಅವರ ವೈವಾಹಿಕ ಜೀವನಕ್ಕೆ ಕಾಲಿಡ್ತಾ ಇದ್ದಾರೆ. ನಿಮ್ಮೆಲ್ಲರ ಪರವಾಗಿ, ಎಲ್ಲಾ ಕನ್ನಡಿಗರ ಪರವಾಗಿ, ಎಲ್ಲಾ ಕನ್ನಡ ಚಿತ್ರಾಭಿಮಾನಿಗಳ ಪರವಾಗಿ ಆ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಆ ದೇವರ ಬಳಿ ಕೇಳಿಕೊಳ್ಳುತ್ತಿದ್ದೇನೆ" ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ ನಲ್ಲಿ ಸ್ಟೇಜ್ ನಿರ್ಮಾಣ ಮಾಡಲಾಗಿದೆ. 300 ಶಾಗ್ಲೀಯರ್ಸ್, ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಭಾರತದಲ್ಲೇ ಪ್ರಥಮ್ ಬಾರಿಗೆ ಮಾಡಲಾಗಿದೆ. ಈ ಡಿಸೈನ್ ನಿರ್ಮಾಣ ದೆಹಲಿಯ ಮೋರದಾ ಬಾದ್ನಿಂದ ತರಿಸಲಾಗಿದೆ. ಸೆಲೆಬ್ರಿಟಿಗಳ ಮದುವೆಗಳ ಹಾಗೂ ಇತರೆ ಕಾರ್ಯಕ್ರಮವನ್ನು "ವೆಡಿಂಗ್ಸ್ ಬೈ ಧ್ರುವ" ಸಿದ್ಧಪಡಿಸಿದೆ.
ಶಿವರಾಜ್ ಕುಮಾರ್ ಮಗಳ ಮದುವೆ, ಯಶ್ ಮದುವೆ, ಜನರ್ದಾನ ರೆಡ್ಡಿ ಮಗಳ ಮದುವೆ ಹಾಗೂ ಯದುವೀರ್ ಮಹರಾಜರ ಮದುವೆ ಸೇರಿದಂತೆ ಎಲ್ಲಾ ರಾಜಕೀಯ ಗಣ್ಯರ ಮದುವೆ ಡಿಸೈನ್ ಮಾಡಿದ್ದಾರೆ. ಇನ್ನು ಅಭಿಷೇಕ್ ಅರತಕ್ಷತೆಗೆ 3 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದ್ದು, 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳು ಮತ್ತು ವಿಐಪಿ ಅವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.
ಪರ ಭಾಷಾ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಚಿರಂಜೀವಿ ಕುಟುಂಬ, ಗುಲಾಮ್ ನಬಿ ಆಜಾದ್ ಹಿರಿಯ ಕಾಂಗ್ರೆಸ್ ಮುಖಂಡ, ಶತ್ರುಜ್ಞಾ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.
"ಇದೇ ಜೂನ್ 7ರ ಬುಧವಾರದಂದು ಸಂಜೆ ಏಳು ಗಂಟೆಗೆ ನನ್ನ ವಿವಾಹ ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದು, ಎಲ್ಲಾ ನನ್ನ ನೆಚ್ಚಿನ ರೆಬೆಲ್ ಸ್ಟಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಸಿ ಆಶೀರ್ವದಿಸಿ ಹಾಗೂ ಎಂದಿನಂತೆ ನಿಮ್ಮೆಲ್ಲರ ಪ್ರೀತಿ ಅಭಿಮಾನ ನಮ್ಮ ಕುಟುಂಬದ ಮೇಲೆ ಇರಲೆಂದು ಆಶಿಸುತ್ತೇನೆ" ಎಂದು ಪೋಸ್ಟ್ ಹಂಚಿಕೊಂಡಿರುವ ಅಭಿಷೇಕ್ ಅಂಬರೀಶ್ ತಮ್ಮ ಅಭಿಮಾನಿಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.


Click it and Unblock the Notifications











