ತುಳುನಾಡಿನಲ್ಲೇ ತುಳು ಸಿನೆಮಾ ಪ್ರದರ್ಶನಕ್ಕೆ ಕಂಟಕ
ಮಂಗಳೂರು, ಏಪ್ರಿಲ್ 16 : ತುಳು ಸಿನೆಮಾಗಳು ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳುನಾಡಲ್ಲೇ ಒಂದು ವಾರದ ಪ್ರದರ್ಶನ ಕಂಡು ಕಿತ್ತೊಗೆಯುವ ಕಾಲ ಬಂದಿದೆ ಎಂದು ಚಲನಚಿತ್ರ ನಿರ್ದೇಶಕ ಮತ್ತು ನಮ್ಮ ಕುಡ್ಲ ತುಳು ಸಿನೆಮಾ ಸಂಕಲನಕಾರ ಹರೀಶ್ ನಾಯಕ್ ವಿಷಾದ ವ್ಯಕ್ತಪಡಿಸಿದ್ದಾರೆ.
'ನಮ್ಮ ಕುಡ್ಲ' ಸಿನೆಮಾ ಕಳೆದ ವಾರ ಬಿಡುಗಡೆಗೊಂಡು ಒಂದೇ ವಾರದಲ್ಲಿ ತಮಿಳುಭಾಷೆಯ ಚಿತ್ರಕ್ಕಾಗಿ ತೆರವು ಮಾಡಬೇಕಾಯಿತು, ತುಳುನಾಡಿನ ಸಿನೆಮಾ ಮಂದಿರಗಳ ಮಾಲಿಕರು ಪರಭಾಷೆಯ ಚಿತ್ರಗಳ ಜೊತೆ ತುಳು ಭಾಷೆಯ ಚಿತ್ರಗಳಿಗೆ ಕನಿಷ್ಠ ಒಂದು ಪ್ರದರ್ಶನಕ್ಕಾದರೂ ಅವಕಾಶ ನೀಡಲಿ ಎಂದು ಅವರು ಕಳಕಳಿಯಿಂದ ಕೇಳಿಕೊಂಡರು.
ನಗರದ ವುಡ್ಲ್ಯಾಂಡ್ಸ್ ಹೊಟೇಲಿನಲ್ಲಿ ಶನಿವಾರ 'ನಮ್ಮ ಕುಡ್ಲ' ತುಳು ಸಿನೆಮಾ ತಂಡ ಹಾಗೂ ತುಳುನಾಡು ರಕ್ಷಣಾ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, 'ನಮ್ಮ ಕುಡ್ಲ' ತುಳು ಸಿನೆಮಾ ಏಪ್ರಿಲ್ 8ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹದಿಮೂರು ಚಲನಚಿತ್ರ ಮಂದಿರ ಹಾಗೂ ಮಲ್ಟಿಪೆಕ್ಸ್ಗಳಲ್ಲಿ ಬಿಡುಗಡೆಗೊಂಡಿತ್ತು. ಒಂದು ವಾರ ಯಶಸ್ವೀ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಥಿಯೇಟರ್ ಮಾಲಿಕರು ಏಪ್ರಿಲ್ 15ರಂದು ಪರಭಾಷೆಯ ಚಿತ್ರಗಳ ಲಾಬಿಗೆ ಮಣಿದು 10 ಥಿಯೇಟರ್ಗಳಿಂದ ಕಿತ್ತು ಹಾಕಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. [ಯುಗಾದಿಗೆ ರಾರಾಜಿಸಲಿದೆ ಪೊರ್ಲುದ ವಿಶೇಷ ಚಿತ್ರ 'ನಮ್ಮ ಕುಡ್ಲ']

ತುಳುವರಲ್ಲಿ ಬೇರೆ ಭಾಷೆಯವರಂತೆ ಒಗ್ಗಟ್ಟಿಲ್ಲ, ತುಳು ನೆಲದಲ್ಲೇ ಇದ್ದು ಇಲ್ಲಿನ ಥಿಯೇಟರ್ ಮಾಲಿಕರು ಬೇರೆಯ ಭಾಷೆಯ ಚಿತ್ರಗಳನ್ನು ಹಾಕುತ್ತಾರೆ, ಇದಕ್ಕೆ ತುಳು ಚಿತ್ರ ನಿರ್ಮಾಪಕರು ಒಗ್ಗಟ್ಟಿರಬೇಕು ಎಂದು ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು.
'ನಮ್ಮ ಕುಡ್ಲ' ತುಳು ಸಿನೆಮಾಕ್ಕೆ ಆದ ತೊಂದರೆ ಇನ್ನು ಮುಂದೆ ಬೇರೆ ತುಳು ಸಿನೆಮಾಗಳಿಗೆ ಆದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂತಹ ಸಿನೆಮಾ ಮಂದಿರಗಳ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸರಕಾರ ಕೇವಲ ಐದು ಭಾಷೆಯ ಚಲನಚಿತ್ರಗಳಿಗೆ ಮಾತ್ರ ಸಬ್ಸಿಡಿ ನೀಡುತ್ತದೆ, ಉಳಿದ ತೊಂಬತ್ತೈದು ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡುತ್ತದೆ. ಇದು ಸರಕಾರದ ಯಾವ ತಾರತಮ್ಯ ಎಂದು ಶೆಟ್ಟಿ ಪ್ರಶ್ನಿಸಿದರು. [ಕಿಂಗ್ ಖಾನ್ ಶಾರುಖ್ ನಮ್ಮ ಕುಡ್ಲದ ಹುಡುಗ!]
ತುಳುನಾಡು ರಕ್ಷಣಾ ವೇದಿಕೆಯ ವತಿಯಿಂದ ತುಳು ನಿರ್ಮಾಪಕರನ್ನು ಒಟ್ಟುಗೂಡಿಸಿ ಒಂದು ತುಳು ಚಿತ್ರ ನಿರ್ಮಾಪಕರ ಸಂಘ ಮಾಡಲು ಪ್ರಯತ್ನ ಮಾಡುತ್ತೇವೆ. ನಂತರದ ದಿನಗಳಲ್ಲಿ ತುಳು ಸಿನೆಮಾ ಛೇಂಬರ್ ನಿರ್ಮಾಣಕ್ಕೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಯೋಗೀಶ್ ಶೆಟ್ಟಿ ಹೇಳಿದರು.


Click it and Unblock the Notifications











