ಕುಮಾರ್ ಹಣ ಕೊಟ್ಟಿದ್ದು ನಿಜ; ಸತ್ಯ ಬಿಚ್ಚಿಟ್ಟ ನಂದಕಿಶೋರ್! ಕಿಚ್ಚ - ಕುಮಾರ್ ಇಬ್ಬರಲ್ಲಿ ಸುಳ್ಳು ಯಾರದ್ದು?
ಮೊನ್ನೆಯಷ್ಟೇ ಕಿಚ್ಚ ಸುದೀಪ್ ನಟಿಸಲಿರುವ ಮುಂದಿನ ಚಿತ್ರ ಕಿಚ್ಚ 46ನ ಗ್ಲಿಂಪ್ಸ್ ಬಿಡುಗಡೆಯಾಗಿತ್ತು. ಹೊಸ ನಿರ್ದೇಶಕ ವಿಜಯ್ ಕಾರ್ತಿಕೇಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ತಮಿಳಿನ ವಿ ಕ್ರಿಯೇಷನ್ಸ್ ಬ್ಯಾನರ್ನ ಅಡಿಯಲ್ಲಿ ನಿರ್ಮಾಪಕ ಕಲೈಪುಲಿ ಎಸ್ ಧನು ಬಂಡವಾಳ ಹೂಡಿದ್ದಾರೆ.
ಈ ಗ್ಲಿಂಪ್ಸ್ ವಿಡಿಯೊದಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ನಾನು ಮನುಷ್ಯನಲ್ಲ ರಾಕ್ಷಸ ಎಂದು ಡೈಲಾಗ್ ಹೇಳಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದ್ದರು. ಹೀಗೆ ಈ ಚಿತ್ರದ ಮೊದಲ ಗ್ಲಿಂಪ್ಸ್ ಟ್ರೆಂಡಿಂಗ್ ಪಟ್ಟಿ ಸೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೈಪ್ ಹೆಚ್ಚಿಸುತ್ತಿದ್ದಂತೆ ಕನ್ನಡದ ಖ್ಯಾತ ನಿರ್ಮಾಪಕ ಎಂ ಎನ್ ಕುಮಾರ್ ಕಿಚ್ಚ ಸುದೀಪ್ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿಬಿಟ್ಟರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕ ಎಂ ಎನ್ ಕುಮಾರ್ ಸುದೀಪ್ ಅವರು ತಮ್ಮ ಬಳಿ ಅಡ್ವಾನ್ಸ್ ಪಡೆದು ಎಂಟು ವರ್ಷಗಳಿಂದ ಚಿತ್ರ ಮಾಡದೇ ಕೈಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಇನ್ನು ಕಿಚ್ಚ ಸುದೀಪ್ ಅಭಿನಯದ ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆಗೆ ವಿತರಣೆ ಕೂಡ ಮಾಡಿರುವ ನಿರ್ಮಾಪಕ ಎನ್ ಕುಮಾರ್ 2016ರಲ್ಲಿ'ಮುಕುಂದ ಮುರಾರಿ' ಎಂಬ ರಿಮೇಕ್ ಸಿನಿಮಾಗೆ ಬಂಡವಾಳ ಹೂಡಿದ್ದರು. ಆದರೆ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಿರಲಿಲ್ಲ.
ಈ ಸಿನಿಮಾ ಸಂದರ್ಭದಲ್ಲಿಯೇ ಸುದೀಪ್ ಹಾಗೂ ನಿರ್ಮಾಪಕ ನಡುವೆ ನಡೆದಿದ್ದ ಸಿನಿಮಾವೊಂದರ ಒಪ್ಪಂದ ಈಗ ವಿವಾದದ ರೂಪ ಪಡೆದುಕೊಂಡಿದೆ. ಸುಮಾರು 8 ವರ್ಷಗಳ ಹಿಂದೆ ಎನ್ ಕುಮಾರ್ ಸಿನಿಮಾ ಮಾಡುವ ಕಾರಣದಿಂದ ಕಿಚ್ಚ ಸುದೀಪ್ಗೆ ಮುಂಗಡ ಹಣ ಪಾವತಿಸಿದ್ದೆ. ಅಲ್ಲಿಂದ ಇಲ್ಲಿವರೆಗೂ ಕಾಲ್ಶೀಟ್ ಕೊಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಅಲ್ಲದೆ ಇವತ್ತು-ನಾಳೆ ಅಂತ ಹೇಳುತ್ತಿದ್ದಾರೆ. ನಿಮ್ಮದೇ ಮುಂದಿನ ಸಿನಿಮಾ ಅಂದು ಬೇರೆಯವರಿಗೆ ಕಾಲ್ಶೀಟ್ ಕೊಡುತ್ತಾರೆ ಎಂದು ಹಿರಿಯ ನಿರ್ಮಾಪಕ ಎನ್.ಕುಮಾರ್ ಆರೋಪ ಮಾಡಿದ್ದಾರೆ.
ಹೀಗೆ ಸುದೀಪ್ ವಿರುದ್ಧ ಕಿಡಿಕಾರಿದ ಎನ್ ಕುಮಾರ್ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೂ ಸಹ ಅಸಮಾಧಾನ ಹೊರಹಾಕಿದರು. ಈ ರೀತಿಯ ಬೆಳವಣಿಗೆಗಳು ನಡೆದ ಬೆನ್ನಲ್ಲೇ ಈ ಕುರಿತು ಚರ್ಚೆಗಳು ಆರಂಭಗೊಂಡವು. ಕುಮಾರ್ ಮಾಡುತ್ತಿರುವ ಆರೋಪ ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದವು. ಇನ್ನು ಈ ಚಿತ್ರವನ್ನು ನಿರ್ದೇಶಿಸಬೇಕಿದ್ದ ನಂದಕಿಶೋರ್ ಸಹ ಈ ಕುರಿತು ಪಾಪ್ಕಾರ್ನ್ ಕನ್ನಡ ಎಂಬ ಯುಟ್ಯೂಬ್ ಚಾನೆಲ್ ಜತೆ ಮಾತನಾಡಿದ್ದು, ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ.
ಮೊದಲಿಗೆ ಕಿಚ್ಚ ಸುದೀಪ್ ಅವರು ತನ್ನ ಗಾಡ್ಫಾದರ್ ಎಂದು ಹೊಗಳಿದ ನಂದಕಿಶೋರ್ ತನಗೆ 56000 ರೂಪಾಯಿ ಹಣವನ್ನು ಚಿತ್ರಕ್ಕಾಗಿ ಅಡ್ವಾನ್ಸ್ ರೂಪದಲ್ಲಿ ನೀಡಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರ ಮಾಡಬೇಕೆಂಬ ಯೋಜನೆ ಇತ್ತು, ಆದರೆ ಈ ಹಣ ಚಿತ್ರಕ್ಕಾಗಿ ನೀಡಿದ ಅಡ್ವಾನ್ಸ್ ಹಣವಲ್ಲ, ಬದಲಾಗಿ ಕುಮಾರ್ ಅವರು ತನಗೆ ವೈಯಕ್ತಿಕವಾಗಿ ನೀಡಿದ ದುಡ್ಡು ಎಂದರು.
ಅಲ್ಲದೇ ಕಿಚ್ಚ ಸುದೀಪ್ ಅವರು ಕನ್ನಡದ ಸ್ಟಾರ್ ನಟ, ಅವರ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕನಿಗೆ ಕೇವಲ 56000 ರೂಪಾಯಿಗಳನ್ನು ಮುಂಗಡವಾಗಿ ಯಾರಾದರೂ ನಿರ್ಮಾಪಕರು ನೀಡ್ತಾರಾ ಎಂದು ನಂದಕಿಶೋರ್ ಪ್ರಶ್ನಿಸಿ ನಿರ್ಮಾಪಕ ಕುಮಾರ್ ಮಾಡಿದ ಆರೋಪ ಸುಳ್ಳು ಎಂದು ತಿಳಿಸಿದರು. ಒಟ್ಟಿನಲ್ಲಿ ತಾನು ಕುಮಾರ್ ಬಳಿ ವೈಯಕ್ತಿಕವಾಗಿ ಹಣ ಪಡೆದಿರುವುದು ನಿಜ, ಆದರೆ ಚಿತ್ರಕ್ಕಾಗಿ ಮುಂಗಡವಾಗಿ ಯಾವುದೇ ಹಣ ಪಡೆದಿಲ್ಲ ಎಂದಿರುವ ನಂದ ಕಿಶೋರ್ ಉಳಿದ ಆರೋಪಗಳೆಲ್ಲಾ ನನಗೆ ಗೊತ್ತಿಲ್ಲ, ಆ ಯಾವುದೇ ಮಾತುಕತೆಯೂ ನನ್ನ ಜತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗೆ ನಂದ ಕಿಶೋರ್ ನೀಡಿದ ಈ ಹೇಳಿಕೆಯ ಬಳಿಕ ಈ ವಿವಾದದಲ್ಲಿ ಸುಳ್ಳು ಯಾರದ್ದು ಎಂಬ ಗೊಂದಲ ಶುರುವಾಗಿದೆ.
ಇನ್ನು ಈ ಆರೋಪಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಸುದೀಪ್ "ನನ್ನ ಒಳ್ಳೆತನ ಬಳಸಿಕೊಳ್ಳಲು ಅಥವಾ ದುರುಪಯೋಗಪಡಿಸಿಕೊಳ್ಳಲು ಇರುವ ಸಾಧನವಲ್ಲ ಎಂಬುದು ಎಲ್ಲರಿಗೂ ತಿಳಿದಿರಲಿ. ನನ್ನ ಒಳ್ಳೆತನ ನಿಜವಾಗಿರುವ ಕಾರಣ ಅದು ಹೊಳೆಯುತ್ತಿರುತ್ತದೆ. ದುರಹಂಕಾರ ಅದರ ಪ್ರಕಾಶವನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಸತ್ಯವಾಗಿರಿ ಹಾಗೂ ವಿನಮ್ರರಾಗಿರಿ" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.


Click it and Unblock the Notifications











